ಸಾರಾಂಶ
ರಾಮನಗರ: ತೀವ್ರ ಕುತೂಹಲ ಮೂಡಿಸಿರುವ ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆ ಫಲಿತಾಂಶಕ್ಕೆ ಎರಡು ದಿನಗಳಷ್ಟೇ ಬಾಕಿ ಉಳಿದಿದ್ದು, ಜಿಲ್ಲಾಡಳಿತ ಮತ ಎಣಿಕೆಗೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ.
ಚನ್ನಪಟ್ಟಣ ಕ್ಷೇತ್ರದ ಫಲಿತಾಂಶ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಮಾತ್ರವಲ್ಲದೆ ಜನಸಾಮಾನ್ಯರಲ್ಲಿಯೂ ಸಾಕಷ್ಟು ಕುತೂಹಲ ಹೆಚ್ಚಿಸಿದೆ. ಮತ್ತೊಂದೆಡೆ ಬೆಟ್ಟಿಂಗ್ ಭರಾಟೆಯೂ ಜೋರಾಗಿದೆ.ಮಧ್ಯಾಹ್ನ 1 ಗಂಟೆ ವೇಳೆಗೆ ಫಲಿತಾಂಶ:
ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನವೆಂಬರ್ 23ರಂದು ಬೆಳಗಿನ ಜಾವ 5 ಗಂಟೆಗೆ ಸ್ಟ್ರಾಂಗ್ ರೂಮ್ ನ ಸೀಲ್ ಅನ್ನು ತೆಗೆಯಲಾಗುವುದು. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದ್ದು, ಮಧ್ಯಾಹ್ನ 1 ಗಂಟೆ ವೇಳೆಗೆ ನಿಖರವಾದ ಫಲಿತಾಂಶ ಹೊರ ಬೀಳುವ ಸಾಧ್ಯತೆಗಳಿವೆ.ಸಾರ್ವತ್ರಿಕ ವಿಧಾನಸಭಾ ಚುನಾವಣೆಗಳಲ್ಲಿ ಎರಡು ಕೊಠಡಿಗಳಲ್ಲಿ ತಲಾ 7 ಟೇಬಲ್ ಗಳಂತೆ ಒಟ್ಟು 14 ಟೇಬಲ್ ಗಳಲ್ಲಿ ಮತಗಳ ಎಣಿಕೆ ನಡೆಸುವುದು ವಾಡಿಕೆ. ಆದರೆ, ಈ ಬಾರಿ ಉಪಚುನಾವಣೆಯ ಮತ ಎಣಿಕೆ ಕಾರ್ಯವು ಅದೇ ಮಾದರಿಯಲ್ಲಿ ನಡೆಯಲಿದೆ. ಒಂದೊಂದು ಕೊಠಡಿಯಲ್ಲಿ ತಲಾ 7 ಟೇಬಲ್ ಇರಲಿದ್ದು, ಅಂಚೆ ಮತಪತ್ರಗಳು ಹಾಗೂ ಸೇವಾ ಮತದಾರರ ಮತಗಳ ಎಣಿಕೆಗಾಗಿ ಪ್ರತ್ಯೇಕವಾಗಿ ಪೋಸ್ಟಲ್ ಬ್ಯಾಲೆಟ್ ಕೊಠಡಿಯಲ್ಲಿ 1 ಟೇಬಲ್ ವ್ಯವಸ್ಥೆ ಮಾಡಲಾಗಿದೆ.
ಪ್ರತಿಯೊಂದು ಟೇಬಲ್ ಗೆ ಒಬ್ಬ ಕೌಂಟಿಂಗ್ ಸೂಪರ್ ವೈಸರ್, ಒಬ್ಬ ಕೌಂಟಿಂಗ್ ಅಸಿಸ್ಟೆಂಟ್, ಒಬ್ಬ ಮೈಕ್ರೊ ಅಬ್ಸರ್ವರ್ ಗಳಂತೆ ಒಟ್ಟು 15 ಟೇಬಲ್ ಗಳಿಗೆ 45 ಮಂದಿ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ಮತ ಎಣಿಕೆಯ ಕೊಠಡಿ 1ಕ್ಕೆ ಮತ ಎಣಿಕೆ ರಿಟರ್ನಿಂಗ್ ಅಧಿಕಾರಿ, ಕೊಠಡಿ 2ಕ್ಕೆ ಸಹಾಯಕ ಮತ ಎಣಿಕೆ ರಿಟರ್ನಿಂಗ್ ಅಧಿಕಾರಿ ಹಾಗೂ ಪೋಸ್ಟಲ್ ಬ್ಯಾಲೆಟ್ ಕೊಠಡಿಗೆ ಸಹಾಯಕ ಮತ ಎಣಿಕೆ ರಿಟರ್ನಿಂಗ್ ಅಧಿಕಾರಿ ಉಸ್ತುವಾರಿ ಜವಾಬ್ದಾರಿ ವಹಿಸಲಾಗಿದೆ.20 ಸುತ್ತುಗಳಲ್ಲಿ ಮತ ಎಣಿಕೆ :
ಚನ್ನಪಟ್ಟಣ ಕ್ಷೇತ್ರದಲ್ಲಿ 276 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆದಿದ್ದು, ಮತ ಎಣಿಕೆ ಕಾರ್ಯ 20 ಸುತ್ತುಗಳಲ್ಲಿ ನಡೆಯಲಿದೆ. ಚುನಾವಣೆಯಲ್ಲಿ 16 ಅಥವಾ 16ಕ್ಕಿಂತ ಕಡಿಮೆ ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ ಮಧ್ಯಾಹ್ನ 12ರ ವೇಳೆಗೆ ಫಲಿತಾಂಶ ಪ್ರಕಟಗೊಳ್ಳುತ್ತಿತ್ತು. ಆದರೆ, 31 ಅಭ್ಯರ್ಥಿಗಳು ಇರುವ ಕಾರಣ ಎರಡು ಯಂತ್ರಗಳ ಮತ ಎಣಿಕೆ ಮಾಡಬೇಕಿರುವ ಕಾರಣ ನಿಖರವಾದ ಫಲಿತಾಂಶಕ್ಕಾಗಿ ಮಧ್ಯಾಹ್ನ 1 ಗಂಟೆವರೆಗೆ ಕಾಯಲೇ ಬೇಕಾಗಿದೆ.ಹಿಂದಿನ ಚುನಾವಣೆಗಳಲ್ಲಿ ಒಂದೇ ಮತಯಂತ್ರ ಇದ್ದ ಕಾರಣಕ್ಕೆ ಪ್ರತಿ ಸುತ್ತಿನ ಎಣಿಕೆ ಕಾರ್ಯ 10 ರಿಂದ 12 ನಿಮಿಷದಲ್ಲಿಯೇ ಪೂರ್ಣಗೊಳ್ಳುತ್ತಿತ್ತು. ಆದರೆ, ಈ ಬಾರಿ ಅಭ್ಯರ್ಥಿಗಳು ಅಧಿಕ ಸಂಖ್ಯೆಯಲ್ಲಿರುವುದರಿಂದ ಎರಡು ಮತಯಂತ್ರಗಳನ್ನು ಜೋಡಿಸಲಾಗಿದೆ. ನೋಟಾ ಜೊತೆಗೆ 31 ಅಭ್ಯರ್ಥಿಗಳ ಮತಗಳನ್ನೂ ಎಣಿಸಬೇಕಿರುವ ಕಾರಣಕ್ಕೆ ಪ್ರತಿ ಸುತ್ತಿನ ಎಣಿಕೆಗೆ ಏಳೆಂಟು ನಿಮಿಷ ಹೆಚ್ಚಾಗಬಹುದು.
ಮತದಾನ ಮುಗಿದ ಮೇಲೆ ಅಭ್ಯರ್ಥಿಗಳ ಹಣೆಬರಹ ತಿಳಿಯಲು ದಿನಗಣನೆ ನಡೆಯುತ್ತಿತ್ತು. ಇದೀಗ ಕ್ಷಣಗಣನೆ ಪ್ರಾರಂಭವಾಗುತ್ತಿದ್ದಂತೆ ರಾಜಕಾರಣಿಗಳು ಮಾತ್ರವಲ್ಲದೆ ಜನಸಾಮಾನ್ಯರಲ್ಲಿಯೂ ಕುತೂಹಲವೂ ಹೆಚ್ಚಿಸಿದೆ.ಮತ ಎಣಿಕೆ ಕಾರ್ಯಚಟುವಟಿಕೆ ಹೇಗಿರಲಿದೆ?:
ಎಲೆಕ್ಟ್ರಾನಿಕ್ ಮತ ಯಂತ್ರಗಳಲ್ಲಿ ದಾಖಲಾದ ಮತಗಳ ಎಣಿಕೆಯ ನಂತರ ವಿಧಾನಸಭಾ ಕ್ಷೇತ್ರದ 5 ಮತಗಟ್ಟೆಗಳಲ್ಲಿನ ವಿವಿ ಪ್ಯಾಟ್ ನ ಮತ ಚೀಟಿಗಳ ಎಣಿಕೆ ಆರಂಭವಾಗಲಿದೆ. ವಿವಿ ಪ್ಯಾಟ್ ಗಳ ಎಣಿಕೆಗೆ ಲಾಟರಿ ಮೂಲಕ ಮತಗಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ವಿವಿ ಪ್ಯಾಟ್ ನ ಚೀಟಿಗಳ ಎಣಿಕೆ ಮಾಡಿದ ನಂತರ ಚುನಾವಣಾ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.ಇನ್ನು ಗೆಲುವಿನ ಅಂತರ ಅಂಚೆ ಮತಗಳಿಗಿಂತ ಕಡಿಮೆ ಇದ್ದರೆ ಮತ್ತೂಮ್ಮೆ ಅಂಚೆ ಮತಪತ್ರ ಎಣಿಕೆ ಮಾಡಲಾಗುವುದು. ಮತ ಎಣಿಕೆ ವೇಳೆ ಆ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕೊಠಡಿಯ ಸ್ಥಳಾವಕಾಶದ ಆಧಾರದ ಮೇಲೆ ಚುನಾವಣಾ ಅಭ್ಯರ್ಥಿಯ ಏಜೆಂಟ್ಗಳಿಗೆ ಸ್ಥಳಾವಕಾಶ ಮಾಡಿಕೊಡಲಾಗುತ್ತದೆ. ಮೊದಲಿಗೆ ರಾಷ್ಟ್ರೀಯ ಪಕ್ಷದ ಏಜೆಂಟ್, ನಂತರ ರಾಜ್ಯ ಹಾಗೂ ಸ್ಥಳೀಯ ಪಕ್ಷಗಳಿಗೆ, ಪಕ್ಷೇತರರಿಗೆ ಆದ್ಯತೆ ನೀಡಲಾಗುತ್ತದೆ.
ಲಾಟರಿ ಮೂಲಕ ಆಯ್ದ ವಿವಿ ಪ್ಯಾಟ್ಗಳ ಮತಚೀಟಿ ಎಣಿಕೆ:ಇವಿಎಂ ಮತಗಳ ಎಣಿಕೆ ಮುಗಿದ ನಂತರ, ಸುಪ್ರೀಂಕೋರ್ಟ್ ನಿರ್ದೇಶನದಂತೆ ಇವಿಎಂ ಫಲಿತಾಂಶದೊಂದಿಗೆ ವಿವಿ ಪ್ಯಾಟ್ ಚೀಟಿಗಳ ಫಲಿತಾಂಶ ತಾಳೆ ಮಾಡಿ ನೋಡಲಾಗುತ್ತದೆ. ಇದಕ್ಕಾಗಿ ವಿಧಾನಸಭಾ ಕ್ಷೇತ್ರವಾರು ತಲಾ 5 ಮತಗಟ್ಟೆಗಳ ಮತಯಂತ್ರಗಳನ್ನು ಎಲ್ಲಾ ಪಕ್ಷ ಏಜೆಂಟ್ಗಳ ಸಮ್ಮುಖದಲ್ಲಿಯೇ ಲಾಟರಿ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇವಿಎಂಗಳಲ್ಲಿನ ಮತಗಳು ವಿವಿ ಪ್ಯಾಟ್ನ ಮತಗಳ ನಡುವೆ ವ್ಯಾತ್ಯಾಸ ಬಂದರೆ ಅಂತಿಮವಾಗಿ ವಿವಿ ಪ್ಯಾಟ್ಗಳಲ್ಲಿನ ಮತಗಳನ್ನೇ ಪರಿಗಣಿಸಲಾಗುತ್ತದೆ.
ಬಾಕ್ಸ್.........ಮತ ಏಣಿಕೆ ವಿಡಿಯೋ ಸಿಡಿ ಅಭ್ಯರ್ಥಿಗಳಿಗೆ:
ಚುನಾವಣಾ ಆಯೋಗದ ನಿರ್ದೇಶನದಂತೆ ಈ ಬಾರಿ ಮತ ಎಣಿಕೆ ಸಂದರ್ಭದಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರವಾರು ಮತ ಎಣಿಕೆ ಕೊಠಡಿಗಳ ಕಾರ್ಯಚಟುವಟಿಕೆಯನ್ನು ಸಂಪೂರ್ಣವಾಗಿ ವಿಡಿಯೋ ರೆಕಾರ್ಡ್ ಮಾಡಲಾಗುತ್ತದೆ. ಫಲಿತಾಂಶದ ಬಳಿಕ ಅದನ್ನು ಸಿ.ಡಿ ಮಾಡಿಸಿ, ಆ ಕ್ಷೇತ್ರದಿಂದ ಸ್ಪರ್ಧಿಸಿರುವ ಪ್ರತಿಯೊಬ್ಬ ಅಭ್ಯರ್ಥಿಗೂ ತಲುಪಿಸಲಾಗುತ್ತದೆ.ಬಾಕ್ಸ್...........
2,06,886 ಚಲಾವಣೆಗೊಂಡ ಮತಗಳು:ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ಶೇಕಡ 88.81ರಷ್ಟು ಮತಗಳು ಚಲಾವಣೆಗೊಂಡಿವೆ. ಕ್ಷೇತ್ರದಲ್ಲಿ 1,11,234 ಪುರುಷರು - 1,20,617 ಮಹಿಳೆಯರು ಹಾಗೂ 8 ಮಂದಿ ಇತರರು ಸೇರಿದಂತೆ ಒಟ್ಟು 2,32,949 ಮತದಾರರು ಇದ್ದರು. ಈ ಪೈಕಿ 1,00,509 ಪುರುಷರು , 1,06,375 ಮಹಿಳೆಯರು ಹಾಗೂ3 ಮಂದಿ ಇತರೆ ಸೇರಿ ಒಟ್ಟು 2,06,886 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಬಾಕ್ಸ್............ಏಜೆಂಟ್ ಪಾಸ್ ಗೆ ಡಿಮ್ಯಾಂಡ್ :
ಮತ ಎಣಿಕೆ ಕೇಂದ್ರಕ್ಕೆ ರಾಜಕೀಯ ಪಕ್ಷ ಇಲ್ಲವೇ ಅಭ್ಯರ್ಥಿ ಪರವಾಗಿ ಪ್ರತಿ ಟೇಬಲ್ ಗೆ ಒಬ್ಬರಂತೆ ಎಣಿಕೆ ಏಜೆಂಟರು ಹೋಗಲು ಅವಕಾಶವಿದೆ. ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಎಣಿಕೆ ಏಜೆಂಟ್ ಆಗಿ ಕೌಂಟಿಂಗ್ ಸೆಂಟರ್ ಪ್ರವೇಶಿಸಲು ಪೈಪೋಟಿಗೆ ಇಳಿದಿದ್ದಾರೆ. ಇದಕ್ಕಾಗಿ ಕಣದಲ್ಲಿರುವ ಮಾನ್ಯತೆ ಪಡೆಯದ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರರಿಗೆ ದುಂಬಾಲು ಬಿದ್ದಿದ್ದಾರೆ.20ಕೆಆರ್ ಎಂಎನ್ 1,2.ಜೆಪಿಜಿ
ಮತ ಎಣಿಕೆ ನಡೆಯಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು