ಪ್ರಸಕ್ತ ಸಾಲಿನಲ್ಲಿ ನಗರ ಸೇರಿ ಜಿಲ್ಲೆಯಾದ್ಯಂತ ಜಿಲ್ಲೆಯಾದ್ಯಂತ 2,570 ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳುತ್ತಿದ್ದು, ಇದರಲ್ಲಿ 48 ಸೂಕ್ಷ್ಮ ಸ್ಥಳಗಳೆಂದು ಗುರುತಿಸಲಾಗಿದೆ. ಇನ್ನೂ 14 ಕಡೆ ಪ್ರತಿಷ್ಠಾಪನೆಯನ್ನು ನಿರ್ಬಂಧಿಸಲಾಗಿದೆ. ಗಣೇಶೋತ್ಸವವು ಶಾಂತಿ - ಸೌಹಾರ್ದತೆಯಿಂದ ಆಚರಿಸಲು ಅಗತ್ಯವಾದ ಪೊಲೀಸ್ ಬಂದೋಬಸ್ತ್‌ಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಪ್ರಸಕ್ತ ಸಾಲಿನಲ್ಲಿ ನಗರ ಸೇರಿ ಜಿಲ್ಲೆಯಾದ್ಯಂತ ಜಿಲ್ಲೆಯಾದ್ಯಂತ 2,570 ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳುತ್ತಿದ್ದು, ಇದರಲ್ಲಿ 48 ಸೂಕ್ಷ್ಮ ಸ್ಥಳಗಳೆಂದು ಗುರುತಿಸಲಾಗಿದೆ. ಇನ್ನೂ 14 ಕಡೆ ಪ್ರತಿಷ್ಠಾಪನೆಯನ್ನು ನಿರ್ಬಂಧಿಸಲಾಗಿದೆ. ಗಣೇಶೋತ್ಸವವು ಶಾಂತಿ - ಸೌಹಾರ್ದತೆಯಿಂದ ಆಚರಿಸಲು ಅಗತ್ಯವಾದ ಪೊಲೀಸ್ ಬಂದೋಬಸ್ತ್‌ಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ತಿಳಿಸಿದರು.

ಸ್ಥಳೀಯ ಎಸ್ಪಿ ಕಚೇರಿ ಸಭಾಂಗಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಜಿಲ್ಲೆಯ ಸಿಂಧನೂರು ನಗರ ಠಾಣೆ ವ್ಯಾಪ್ತಿಯ ಏಳುರಾಗಿ ಕ್ಯಾಂಪ್, 3 ನೇ ಮೈಲ್ ಕ್ಯಾಂಪ್, ಪಿಡಬ್ಲ್ಯೂಡಿ ಹಾಗೂ ಲಕ್ಷ್ಮೀ ಕ್ಯಾಂಪ್, ಸಿಂಧನೂರು ಗ್ರಾಮೀಣ ಠಾಣೆ ವ್ಯಾಪ್ತಿಯ ಗೋರೆಬಾಳ ಕ್ಯಾಂಪ್, ತುರ್ವಿಹಾಳ ಠಾಣಾ ವ್ಯಾಪ್ತಿಯ ಹತ್ತಿಗುಡ್ಡ, ಎಲೆಕೂಡ್ಲಿಗಿ , ಗುಂಡಾ ಗ್ರಾಮ, ಬಳಗಾನೂರು ಠಾಣೆಯ ಉದ್ಭಾಳ, ತಿಮ್ಮಾಪುರು, ಸಿರವಾರ ಠಾಣಾ ವ್ಯಾಪ್ತಿಯ ಕಡದಿನ್ನಿ, ಹೊಕ್ರಾಣಿ, ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಹದ್ದಿನಾಳ, ಸುಂಕೇಶ್ವರ ಹಾಳ ಹಾಗೂ ಜಾಲಹಳ್ಳಿ ಠಾಣೆಯ ಊಟಿ ಗ್ರಾಮದಲ್ಲಿ ಗಣೇಶ ಪ್ರತಿಷ್ಠಾಪನೆ ಆಚರಣೆ ನಿಷೇಧಿಸಲಾಗಿದೆ ಎಂದು ವಿವರಿಸಿದರು.

ಗಣೇಶೋತ್ಸವದಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಿಸಲು ಈಗಾಗಲೇ 1,557 ರೌಡಿಗಳಲ್ಲಿ 1,474 ರೌಡಿಗಳನ್ನು ಮುಂಜಾಕ್ರಮ ಕ್ರಮ ಕೈಗೊಳ್ಳಲಾಗಿದೆ. 1124 ಜನರಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 23 ಜನರನು ಗಡಿಪಾರು ಮಾಡಲಾಗಿದ್ದು ಇನ್ನೂ ಐದು ಜನ ಗಡಿಪಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರೂಢಿಗತ ರೌಡಿಗಳನ್ನು ಒಂದು ತಿಂಗಳ ಜೈಲಿಗೆ ಕಳುಹಿಸಲಾಗಿದೆ. ಜಿಲ್ಲೆಯಾದ್ಯಂತ 16 ಸಾವಿರಕ್ಕೂ ಹೆಚ್ಚು ಸಿಸಿ ಟಿವಿಗಳನ್ನು ಅಳವಡಿಸಲಾಗಿದ್ದು, ನಗರದಲ್ಲಿ 180 ಸಿಸಿ ಟಿವಿಗಳನ್ನು ಮಹಾನಗರ ಪಾಲಿಕೆಯಿಂದ ಪಡೆಯಲಾಗಿದೆ. ಬೇರೆ ಬೇರೆ ಇಲಾಖೆ ಅಧಿಕಾರಿಗಳನ್ನು ಸಹ ಮೇಲ್ವಿಚಾರಣೆಗೆ ನಿಯುಕ್ತಿಗೊಳಿಸಲಾಗಿದೆ. ಅಧಿಕಾರಿ ಗಳು ಕೇಂದ್ರ ಸ್ಥಾನದಲ್ಲಿದ್ದು, ಮಾಹಿತಿ ಒದಗಿಸಲು ಸೂಚಿಸಲಾಗಿದೆ ಎಂದರು.

ಗಣೇಶೋತ್ಸವ ಪ್ರಯುಕ್ತ ಈಗಾಗಲೇ 148 ಗಣೇಶ ಹಬ್ಬದ ಶಾಂತಿ ಸಭೆಗಳನ್ನು ನಡೆಸಲಾಗಿದ್ದು, ಎಸ್ಪಿ, ಹೆಚ್ಚುವರಿ ಎಸ್ಪಿ ಸೇರಿ 4 ಜನ ಡಿವೈಎಸ್ಪಿ, 15 ಜನ ಸಿಪಿಐ, 31 ಜನ ಪಿಎಸ್ಐ, 122 ಎಎಸ್ಐ, 630 ಮುಖ್ಯಪೇದೆ, ಪೇದೆ, 500 ಜನ ಗೃಹ ರಕ್ಷಕದಳ, 10 ಸಶಸ್ತ್ರ ಮೀಸಲು ತುಕಡಿ, 6 ಕೆಎಸ್ಆರ್ಪಿ ತುಕಡಿ, ಒಂದು ಎಎಸ್ಸಿ ತಂಡಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ರಾಯಚೂರು ನಗರದಲ್ಲಿ 361 , ರಾಯಚೂರು ತಾಲೂಕಿನ 155. ಸಿಂಧನೂರ ನಗರದಲ್ಲಿ 194, ಗ್ರಾಮೀಣ ಪ್ರದೇಶದಲ್ಲಿ 196, ಮಾನ್ವಿಯಲ್ಲಿ 217, ಸಿರವಾರದಲ್ಲಿ 87, ದೇವದುರ್ಗದಲ್ಲಿ 154, ಮಸ್ಕಿಯಲ್ಲಿ 107, ಲಿಂಗಸುಗೂರಿನಲ್ಲಿ 119 ಸೇರಿದಂತೆ ಹಟ್ಟಿ, ಮುದುಗಲ್ ಸೇರಿ ನಗರ,ಪಟ್ಟಣ, ಗ್ರಾಮೀಣ ಭಾಗದ ಹಲವಾರು ಪ್ರದೇಶಗಳಲ್ಲಿ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆಗಾಗಿ ನೊಂದಣಿಯನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಗೌರಿ-ಗಣೇಶ ಹಬ್ಬವನ್ನು ಬೇರೆ ಧರ್ಮದವರೂ ಸಹ ಆಚರಿಸುತ್ತಿರುವುದು ವಿಶೇಷವಾಗಿದ್ದು, ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ಎರಡು ಕಡೆ, ಲಿಂಗಸೂಗೂರಿನಲ್ಲಿ ಅಂಜುಮನ್ ಕಮಿಟಿ, ಇಡಪನೂರು ಠಾಣಾ ವ್ಯಾಪ್ತಿಯಲ್ಲಿ ಕ್ರೈಸ್ತ ಸಮಾಜದವರು ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ, ಇದು ಸೌಹಾರ್ದತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮಂಡಳಿಗಳು ಸೂಕ್ತ ಮುನ್ನಚ್ಚರಿಕಾ ಕ್ರಮಗಳನ್ನು ಅನುಸರಿಸಲು ನಿರ್ದೇಶಿಸಲಾಗಿದ್ದು, ವಿದ್ಯುತ್, ಬೆಂಕಿ ಅವಘಡಗಳಾದಂತೆ ಮುನ್ನೆಚ್ಚರಿಕೆ ವಹಿಸಬೇಕು, ರಸ್ತೆಯಲ್ಲಿ ಮೂರ್ತಿಗಳನ್ನುಪ್ರತಿಷ್ಠಾಪಿಸ ಕೂಡರು ಈ ವಿಷಯವಾಗಿ ಸಾರ್ವಜನಿಕರಿಂದ ದೂರ ಬಂದಲ್ಲಿ ಮಂಡಳಿ ವಿರುದ್ದ ಕಠಿಣ ಕ್ರಮ ವಹಿಸಲಿದ್ದು, ಸಾಮಾಜಿಕ ಜಾಲತಾಣದಲ್ಲಿ ಕೋಮು ಭಾವನೆ ಕೆರಳಿ ಶಾಂತಿ ಭಂಗ ಉಂಟು ಮಾಡುವವರ ಮೇಲೆ ನಿಗಾ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕೋಮು ಉದ್ರೇಕಗೊಳಿಸುವ ಸಂದೇಶ ರವಾನಿಸಿದರೆ ಕಾನೂನು ಕ್ರಮ ಕೈಗೊಳ್ಳುವದಾಗಿ ಎಂದು ಎಸ್ಪಿ ಎಚ್ಚರಿಸಿದರು.