ಧಾರವಾಡ:

ದ್ವಿತೀಯ ಪಿಯುಸಿ ಮುಗಿಸಿ, ಸಿಇಟಿ ಪರೀಕ್ಷೆ ಬರೆದು ಇನ್ನೇನು ಎಂಜಿನಿಯರಿಂಗ್‌ ಓದಬೇಕೆಂಬ ಕನಸು ಹೊಂದಿರುವ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್‌ ಕೋರ್ಸ್‌ ಬಗ್ಗೆ ನಗರದ ಐಎಸ್‌ಸಿಟಿ (ಗ್ಲೋಬಲ್‌ ಇನ್ಫೋಟಿಕ್‌) ಸಂಸ್ಥೆಯು ತನ್ನ 30ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ಪ್ರತ್ಯೇಕವಾಗಿ ಉಚಿತ ಕಾರ್ಯಾಗಾರ ಆಯೋಜಿಸಿದೆ.

ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥೆಯ ಸಂಸ್ಥಾಪಕ ಅನಿಲ ಘಾಸ್ತೆ, ಪಿಯುಸಿ ಮತ್ತು ಎಂಜಿನಿಯರಿಂಗ್ ನಡುವೆ ಸಾಕಷ್ಟು ಅಂತರವಿದೆ. ಅದನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಜೂ. 7ರಂದು ಬೆಳಗ್ಗೆ10ಕ್ಕೆ ಕರ್ನಾಟಕ ಕುಲಪುರೋಹಿತ ಆಲೂರು ಭವನದಲ್ಲಿ ಹಮ್ಮಿಕೊಂಡಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಅನೇಕ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಮೊದಲನೇ ವರ್ಷದಲ್ಲಿ ಅನೇಕ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿಶೇಷವಾಗಿ ಲಾಜಿಕ್ ಬಿಲ್ಡಿಂಗ್, ಪ್ರಾಬ್ಲಂ ಸಾಲ್ವಿಂಗ್, ಪ್ರೋಗ್ರಾಮಿಂಗ್ ಹಾಗೂ ಎಂಜಿನಿಯರಿಂಗ್ ಶಿಕ್ಷಣದ ವಿಧಾನಗಳ ಅರಿವಿನ ಕೊರತೆಯಿಂದ ವಿದ್ಯಾರ್ಥಿಗಳಿಗೆ ಆರಂಭಿಕ ಹಂತದಲ್ಲಿ ತುಂಬ ಕಷ್ಟ ಉಂಟಾಗುತ್ತಿದೆ. ಎಂಜಿನಿಯರಿಂಗ್ ಶಿಕ್ಷಣದ ನೈಜ ಸವಾಲು, ಎಂಜಿನಿಯರಿಂಗ್ ಶಾಖೆಗಳಲ್ಲಿ ಪ್ರೋಗ್ರಾಮಿಂಗ್ ಮತ್ತು ಲಾಜಿಕ್‌ನ ಮಹತ್ವ, ಇಂಡಸ್ಟ್ರಿ ಹಾಗೂ ಅಕಾಡೆಮಿಕ್ ನಿರೀಕ್ಷೆಗಳು, ವಿದ್ಯಾರ್ಥಿಗಳು ಕಾಲೇಜು ಆರಂಭಕ್ಕೂ ಮುನ್ನ ಹೇಗೆ ಸಿದ್ಧರಾಗಬೇಕು? ಇತ್ಯಾದಿ ವಿಷಯಗಳ ಕುರಿತು ಹಿರಿಯ ಪ್ರಾಧ್ಯಾಪಕರು, ಎಂಜಿನಿಯರಿಂಗ್‌ ಕ್ಷೇತ್ರದ ತಜ್ಞರು ಹಾಗೂ ಅನುಭವಿಗಳಿಂದ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ ಎಂದು ಹೇಳಿದರು.

ವಿಶೇಷ ಎಂದರೆ, ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ಪ್ರತ್ಯೇಕವಾಗಿ ಈ ಕಾರ್ಯಾಗಾರ ನಡೆಯಲಿದ್ದು, ಹುಬ್ಬಳ್ಳಿಯಲ್ಲಿ ದಿನಾಂಕ ನಿಗದಿ ಮಾಡಬೇಕಿದೆ. ಧಾರವಾಡದ ಕಾರ್ಯಾಗಾರಕ್ಕೆ ವಿದ್ಯಾರ್ಥಿಗಳು ಮುಂಚಿತವಾಗಿ ಹೆಸರು ನೋಂದಣಿ ಮಾಡಿ ಭಾಗವಹಿಸಬೇಕು. ಪಾಲಕರು ಸಹ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶವಿದೆ ಎಂದ ಅವರು, ನೋಂದಣಿಗೆ 93434 07006 ಅಥವಾ 7899817006 ಅಥವಾ ವೆಬ್‌ಸೈಟ್‌ https://www.isctonline.com ಸಂಪರ್ಕಿಸಬಹುದು ಎಂದರು.


ಸುದ್ದಿಗೋಷ್ಠಿಯಲ್ಲಿ ಐಐಐಟಿ ಸಾರ್ವಜನಿಕ ಸಂಪರ್ಕಾಧಿಕಾರಿ ವಾಸುದೇವ ಪರ್ವತಿ, ಸಿವಿಲ್‌ ಎಂಜಿನಿಯರಿಂಗ್‌ ಸಂಘದ ಅಧ್ಯಕ್ಷ ಸುನೀಲ ಬಾಗೇವಾಡಿ, ಸಂಘಟಕ ಮಾರ್ತಾಂಡಪ್ಪ ಕತ್ತಿ ಇದ್ದರು.