ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆ ಕೈಗೊಳ್ಳಿ: ಕಿರಣ ಉಪಾಳೆ

| Published : May 29 2025, 01:31 AM IST

ಸಾರಾಂಶ

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಹವಾಮಾನ ಆಧರಿತ ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳುವ ಮೊದಲು ರೈತರು ಮಣ್ಣಿನ ರಕ್ಷಣೆ, ಹೊಲದ ಸಿದ್ಧತೆ, ಬಸಿಕಾಲುವೆಗಳ ಸಂರಕ್ಷಣೆ, ಸೂಕ್ತ ಬೆಳೆಗಳ ಆಯ್ಕೆ ಸೇರಿದಂತೆ ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕಿರಣ ಉಪಾಳೆ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಖಾನಾಪುರ

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಹವಾಮಾನ ಆಧರಿತ ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳುವ ಮೊದಲು ರೈತರು ಮಣ್ಣಿನ ರಕ್ಷಣೆ, ಹೊಲದ ಸಿದ್ಧತೆ, ಬಸಿಕಾಲುವೆಗಳ ಸಂರಕ್ಷಣೆ, ಸೂಕ್ತ ಬೆಳೆಗಳ ಆಯ್ಕೆ ಸೇರಿದಂತೆ ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕಿರಣ ಉಪಾಳೆ ಸೂಚಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರೈತರು ತಮ್ಮ ಜಮೀನುಗಳಲ್ಲಿ ಮಣ್ಣಿನ ಸವೆತ ತಡೆಗಟ್ಟಲು ಹಾಗೂ ನೀರಿನ ಸಂರಕ್ಷಣೆ ಮಾಡಲು ಇಳಿಜಾರಿಗೆ ಅಡ್ಡಲಾಗಿ ಮಡಿಗಳನ್ನು ಮತ್ತು ಸಾಲುಗಳನ್ನು ನಿರ್ಮಿಸಬೇಕು. ಸಾವಯವ ಗೊಬ್ಬರ ಬಳಸಲು ಆದ್ಯತೆ ನೀಡಬೇಕು. ಸ್ವಚ್ಛ ಸಾಗುವಳಿ ಮತ್ತು ಮಾಗಿ ಉಳುಮೆ ಮಾಡಬೇಕು. ಮಣ್ಣು ಮತ್ತು ನೀರಿನ ಪರೀಕ್ಷೆ ಮಾಡಿಸಬೇಕು. ಸಸ್ಯಾವಶೇಷಗಳನ್ನು ಭೂಮಿಗೆ ಹೊದಿಕೆ ಮಾಡುವ ಮೂಲಕ ಮಣ್ಣಿನ ತೇವಾಂಶ ಫಲವತ್ತತೆ ಕಾಪಾಡಬೇಕು. ಬೆಳೆಗಳಿಗೆ ಸಮತೋಲನ ಗೊಬ್ಬರ ಬಳಸಬೇಕು. ರೋಗ ಮತ್ತು ಕೀಟ ನಿರ್ವಹಣೆ, ಕಳೆ ನಿರ್ವಹಣೆಗಾಗಿ ಪೂರ್ವತಯಾರಿ ಮಾಡಿಕೊಳ್ಳುವುದು, ಮಳೆ ಬೀಳುವಾಗ ಹೊಲದಲ್ಲಿ ನೀರು ನಿಲ್ಲದಂತೆ ಗಮನಹರಿಸಬೇಕು. ತೋಟಗಾರಿಕೆ, ಪಶು ಸಂಗೋಪನೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಅವರಿಂದ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಬೇಕು. ವೈಜ್ಞಾನಿಕವಾಗಿ ಮತ್ತು ವ್ಯವಸ್ಥಿತವಾಗಿ ಬೇಸಾಯ ಮಾಡಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಪಡೆಯುವತ್ತ ಗಮನಹರಿಸಬೇಕು ಎಂದು ತಿಳಿಸಿದ್ದಾರೆ.