ಗಿಫ್ಟ್ ಸಿದ್ಧ ಮಾಡಿ, ಕಾರ್ಡ್‌ದಾರರನ್ನು ಕಳಿಸುವೆ

| Published : Feb 15 2024, 01:15 AM IST

ಸಾರಾಂಶ

ಮಾಗಡಿ: ಮಾಜಿ ಶಾಸಕ ಎ.ಮಂಜುನಾಥ್ ಅವರು ನಾನು ಕೊಟ್ಟಿರುವ ಗುರುತಿನ ಚೀಟಿಗೆ ಗಿಫ್ಟ್ ಕೊಡುವುದಾಗಿ ಹೇಳಿದ್ದು, ಗಿಫ್ಟ್‌ಗಳನ್ನು ಸಿದ್ಧಪಡಿಸಿಕೊಳ್ಳಿ ನಾನೇ ಕಾರ್ಡ್‌ದಾರರನ್ನು ತಮ್ಮ ಕಚೇರಿಗೆ ಕಳಿಸಿಕೊಡುತ್ತೇನೆ ಎಂದು ಶಾಸಕ ಬಾಲಕೃಷ್ಣ ತಿರುಗೇಟು ನೀಡಿದರು.

ಮಾಗಡಿ: ಮಾಜಿ ಶಾಸಕ ಎ.ಮಂಜುನಾಥ್ ಅವರು ನಾನು ಕೊಟ್ಟಿರುವ ಗುರುತಿನ ಚೀಟಿಗೆ ಗಿಫ್ಟ್ ಕೊಡುವುದಾಗಿ ಹೇಳಿದ್ದು, ಗಿಫ್ಟ್‌ಗಳನ್ನು ಸಿದ್ಧಪಡಿಸಿಕೊಳ್ಳಿ ನಾನೇ ಕಾರ್ಡ್‌ದಾರರನ್ನು ತಮ್ಮ ಕಚೇರಿಗೆ ಕಳಿಸಿಕೊಡುತ್ತೇನೆ ಎಂದು ಶಾಸಕ ಬಾಲಕೃಷ್ಣ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ವೇಳೆ ಹೊಸದಾಗಿ ಕಾಂಗ್ರೆಸ್ ಪಕ್ಷ ಸೇರಿದವರಿಗೆ ಮನವರಿಕೆ ಆಗುವ ನಿಟ್ಟಿನಲ್ಲಿ ಗುರುತಿನ ಚೀಟಿ ನೀಡಿದ್ದೆ, ಗಿಫ್ಟ್ ಕಾರ್ಡ್‌ ನೀಡಿಲ್ಲ. ಈಗ ಆ ಕಾರ್ಡ್‌ಗಳಿಗೆ ಗಿಫ್ಟ್ ನೀಡುವುದಾಗಿ ಮಾಜಿ ಶಾಸಕ ಮಂಜುನಾಥ್ ಹೇಳಿರುವ ಗಿಫ್ಟ್‌ಗಳನ್ನು ಸಿದ್ಧಪಡಿಸಿಕೊಂಡು ಜೆಡಿಎಸ್ ಕಚೇರಿಯಲ್ಲಿ ಇಟ್ಟುಕೊಳ್ಳಲಿ. ಆದರೆ ಮಕ್ಕಳಿಗೆ ಚಾಕ್ಲೇಟ್, ಜಾಮಿಟ್ರಿ ಬಾಕ್ಸ್ ಕೊಡುವ ರೀತಿ ಕೊಟ್ಟರೆ ಆಗುವುದಿಲ್ಲ. ಕನಿಷ್ಠ ಐದು ಸಾವಿರ ಬೆಲೆ ಬಾಳುವ ಗಿಫ್ಟ್‌ಗಳನ್ನಾದರೂ ಕೊಡಬೇಕು. ಒಮ್ಮೆ ಶಾಸಕರಾಗಿದ್ದವರು ಚಿಲ್ಲರೆಯಾಗಿ ಮಾತನಾಡಬಾರದು. ಸಂಸದರಾದ ಡಿ.ಕೆ.ಸುರೇಶ್‌ ಅವರು ನೀಡಿರುವ ಭರವಸೆಗಳನ್ನು ಈಡೇರಿಸುತ್ತಿದ್ದಾರೆ. ಇವರು ಈ ರೀತಿ ಚಿಲ್ಲರೆ ಪ್ರಚಾರ ಮಾಡುವುದು ಸರಿಯಲ್ಲ ಎಂದು ಮಾಜಿ ಶಾಸಕರ ವಿರುದ್ಧ ಕಿಡಿ ಕಾಡಿದರು.

ಕೊಟ್ಟಿರುವ ಕಾಸು ಕೊಡಲಿ: ಮಾಜಿ ಶಾಸಕ ಮಂಜುನಾಥ್ ಅವರು ನಮ್ಮ ಕಾರ್ಡ್‌ಗಳಿಗೆ ಗಿಫ್ಟ್ ಕೊಡುವುದು ಬೇಡ, ಮೊದಲು ಕೊಟ್ಟವರ ಕಾಸು ವಾಪಸ್‌ ಕೊಡಲಿ. ಹೆಣ್ಣು ಮಗಳ ಜೀವನ ಹಾಳಾಗುತ್ತಿದ್ದು ಮನೆ ಮುಂದೆ ಹೋಗಿ ಪ್ರತಿದಿನವೂ ಗಲಾಟೆ ಮಾಡಿಕೊಂಡು ಹೋಗುತ್ತಿದ್ದಾರೆ. 20 ವರ್ಷಗಳಿಂದ ಅವರ ಜಮೀನಿಗೆ ಅಗ್ರಿಮೆಂಟ್ ಹಾಕಿಕೊಂಡು ಹಣ ಕೊಡದೆ ಸತಾಯಿಸುತ್ತಿದ್ದು, ಗಿಫ್ಟ್ ಕೊಡುವ ಬದಲು ಆ ಹೆಣ್ಣು ಮಗಳಿಗೆ ನ್ಯಾಯ ಕೊಡಬೇಕು. ಮಾಧ್ಯಮದವರು ಆ ಹೆಣ್ಣು ಮಗಳಿಗೆ ನ್ಯಾಯ ಕೊಡಿಸುವ ಕೆಲಸ ಮಾಡಲಿ. ಇನ್ನು ಕೆಲವರಿಗೆ ಮೋಸ ಮಾಡಿರುವ ಬಗ್ಗೆ ನನ್ನ ಬಳಿ ಪಟ್ಟಿ ಇದ್ದು ಅದನ್ನು ಸರಿಪಡಿಸಿಕೊಳ್ಳುವ ಕೆಲಸ ಮಾಡಲಿ ಎಂದು ಬಾಲಕೃಷ್ಣ ವಾಗ್ದಾಳಿ ನಡೆಸಿದರು.ಬಾಕ್ಸ್‌.............

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಎಚ್ಡಿಕೆ ಸ್ಪರ್ಧೆ ಮಾಡಲ್ವಾ?

ಮಾಗಡಿ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲ್ವಾ? ಜಯದೇವ ಆಸ್ಪತ್ರೆಯ ನಿವೃತ್ತ ನಿರ್ದೇಶಕರಾದ ಡಾ.ಸಿ.ಎಸ್.ಮಂಜುನಾಥ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯ ಪ್ರಬಲ ಆಕಾಂಕ್ಷಿ ಎಂಬ ಪ್ರಶ್ನೆಗೆ ಶಾಸಕ ಬಾಲಕೃಷ್ಣ ಎಚ್ಡಿಕೆಯನ್ನು ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಬೇಕಾದರೂ ಸ್ಪರ್ಧೆ ಮಾಡಲಿ ಈಗಾಗಲೇ ನಾವು ಚುನಾವಣೆಯನ್ನು ಆರಂಭಿಸಿದ್ದು, ಕ್ಷೇತ್ರವನ್ನು ಒಂದು ಬಾರಿ ಭೇಟಿ ಮಾಡಿದ್ದೇವೆ. ಮತ್ತೊಂದು ಭೇಟಿಗೆ ಸಿದ್ಧತೆ ನಡೆದಿದೆ. ಡಿ.ಕೆ.ಸುರೇಶ್ ಅವರೇ ಗೆಲ್ಲುತ್ತಾರೆಂಬ ಸಮೀಕ್ಷೆಗಳು ಬಂದಿದೆ. ಕುಮಾರಸ್ವಾಮಿರವರು ಸ್ಪರ್ಧೆ ಮಾಡದೆ ಹಿಂದೆ ಸರಿಯುತ್ತಾರಾ? ರಾಜಕೀಯ ರಂಗವೇ ಬೇರೆ ವೈದ್ಯಕೀಯ ರಂಗವೇ ಬೇರೆ ಯುದ್ಧದಲ್ಲಿ ಬೆನ್ನು ತೋರಿಸಿ ಹೋಗುವ ಜಾಯಮಾನ ನಮ್ಮದಲ್ಲ. ಯಾರೇ ಪಾಳೆಗಾರರು ಬಂದರೂ ತೊಡೆತಟ್ಟಿ ಚುನಾವಣೆ ಎದುರಿಸುತ್ತೇವೆ. ಡಾ. ಮಂಜುನಾಥ್ ಅವರನ್ನು ಬಲಿಪಶು ಮಾಡುವುದಾದರೆ ನಮ್ಮದೇನು ಅಭ್ಯಂತರವಿಲ್ಲ ಸ್ಪರ್ಧೆ ಮಾಡಿಸಲಿ ಎಂದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕುಮಾರಸ್ವಾಮಿ ಏಕೆ ಸ್ಪರ್ಧಿಸುವುದಿಲ್ಲ? ಕಂಡವರ ಮಕ್ಕಳನ್ನು ಬಾವಿಗೆ ಇಳಿಸಿ ಆಳ ನೋಡುವ ಜಾಯಮಾನ ಅವರದು. ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಗೆಲ್ಲುವುದಿಲ್ಲ ಎಂಬ ಅಭಿಪ್ರಾಯಕ್ಕೆ ಬಂದರೆ ಅವರ ಪಕ್ಷದ ಸ್ಥಿತಿ ಏನೆಂಬುದು ಅನಾವರಣವಾಗುತ್ತಿದೆ ಎಂದು ಬಾಲಕೃಷ್ಣ ವ್ಯಂಗ್ಯವಾಡಿದರು.

ಪೋಟೋ 14ಮಾಗಡಿ1 :ಮಾಗಡಿಯಲ್ಲಿ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶಾಸಕ ಬಾಲಕೃಷ್ಣ ಅವರನ್ನು ಬೆಂಬಲಿಗರು ಅಭಿನಂದಿಸಿದರು.