ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡುತಮ್ಮ ಜೀವಮಾನದ ಅಮೂಲ್ಯ ಸಮಯವನ್ನು ವೃತ್ತಿಯಲ್ಲಿ ತೊಡಗಿಸಿಕೊಂಡು ಜನ ಸೇವೆ ಮಾಡಿರುವ ನಿವೃತ್ತ ನೌಕಕರನ್ನು ಪ್ರತಿವರ್ಷ ಗುರುತಿಸಿ ಸನ್ಮಾನಿಸುತ್ತಿರುವ ವೀರಶೈವ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯ ಶ್ಲಾಘನೀಯ ಎಂದು ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.ಮಲ್ಲನಮೂಲೆ ಮಠದಲ್ಲಿ ಭಾನುವಾರ ವೀರ ಶೈವ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಬಸವ ಸೇವಾ ಸಮಿತಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.800 ಮಂದಿ ಸದಸ್ಯರನ್ನು ಹೊಂದಿರುವ ಸಂಘ ತಾಲೂಕಿನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ನಿವೃತ್ತ ನೌಕರನ್ನು ಗುರ್ತಿಸಿ ನಗದು ಪುರಸ್ಕಾರ ನೀಡಿ ಗೌರವಿಸುತ್ತಿದೆ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿದ 130 ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಬೆನ್ನು ತಟ್ಟಿ ಪ್ರೋತ್ಸಾಹಿಸಿದೆ ಎಂದು ಹೇಳಿದರು.ನಗರದಲ್ಲಿ 2018ರಲ್ಲಿ ನಿರ್ಮಾಣ ಆರಂಭಿಸಿದ ಬಸವ ಭವನ 7 ವರ್ಷಗಳು ಕಳೆದರೂ ಪೂರ್ಣಗೊಳ್ಳದೆ ನನೆಗುದಿಗೆ ಬಿದ್ದಿದೆ. ಸಮಾಜ ಭವನ ನಿರ್ಮಾಣವನ್ನು ಪೂರ್ಣಗೊಳಿಸಲು ಸರ್ಕಾರದ ಅನುದಾನಕ್ಕೆ ಕಾಯದೆ, ಸಮಾಜ ಭಾಂದವರಿಂದ ದೇಣಿಗೆ ಸಂಗ್ರಹಿಸುವ ಮೂಲಕ ಅಗತ್ಯ ಹಣ ಸಂಗ್ರಹಿಸಿ ಬಸವಭವನವನ್ನು ಪೂರ್ಣಗೊಳಿಸೋಣ ಎಂದು ಅವರು ತಿಳಿಸಿದರು.ಗುರು ಕಂಬಳೀಶ್ವರ ಮಠದ ಅಧ್ಯಕ್ಷ ಚನ್ನಬಸವ ಸ್ವಾಮೀಜಿ ಮಾತನಾಡಿ, ನಿವೃತ್ತ ನೌಕರರು ಸಮಾಜಕ್ಕಾಗಿ ದುಡಿದು ನಿವೃತ್ತಿ ಹೊಂದಿದ ಸಂದರ್ಭದಲ್ಲಿ ಅವರ ಸೇವೆಯನ್ನು ಪರಿಗಣಿಸಿ, ಅವರ ವಿಶ್ರಾಂತ ಜೀವನಕ್ಕೆ ಶುಭಕೊರುವುದು ಸಮಾಜದ ಜವಾಬ್ದಾರಿ. ಆ ಕರ್ತವ್ಯವನ್ನು ಸಂಘ ಪ್ರತಿವರ್ಷ ತಪ್ಪದೆ ನಡೆಸಿದೆ, ವಿದ್ಯಾರ್ಥಿಗಳು ಓದಿನ ಜೊತೆಗೆ ನಮ್ಮ ಧರ್ಮ, ಸಂಸ್ಕೃತಿಗಳನ್ನು ಮೈಗೂಡಿಸಿಕೊಳ್ಳಬೇಕು. ಕೌಶಲ್ಯಗಳನ್ನು ಕಲಿತಾಗ ಹೆಚ್ಚಿನ ಉದ್ಯೋಗವಕಾಶ ದೊರೆಯುತ್ತವೆ ಎಂದು ಹೇಳಿದರು.ದೇವನೂರು ಮಠದ ಶ್ರೀ ಮಹಾಂತ ಸ್ವಾಮೀಜಿ,ಶರಣ ಸಂಗಮ ಮಠದ ನಾಗರಾಜೇಂದ್ರ ಸ್ವಾಮೀಜಿ, ಬಿಇಒ ಮಹೇಶ್, ಬಸವ ಸೇವಾ ಸಮಿತಿ ಅಧ್ಯಕ್ಷ ಜಿ.ಎಲ್. ಸೋಮಣ್ಣ, ವೀರಶೈವ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ.ವಿ. ಚಂದ್ರಶೇಖರ್, ಪ್ರಾಧ್ಯಾಪಕ ಎಸ್. ಮಹೇಶ್, ಗುರುಪ್ರಸಾದ್, ಎಂ.ಎಸ್. ನಾಗೇಂದ್ರ, ಶಂಕರ್ ಪ್ರಸಾದ್, ನೀಲಕಂಠೇಶ್ವರ ಪ್ರೌಢಶಾಲೆಯ ವ್ಯವಸ್ಥಾಪಕ ಕುಮಾರ್ ಇದ್ದರು.