ಪುತ್ತೂರು: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಇನ್ನೊಮ್ಮೆ ಪರಮ ವೈಭವ ಸ್ಥಿತಿಗೆ ಹೋಗುತ್ತಿದೆ. ಮೋದಿಯವರು ಈ ಹಿಂದಿನ ಎಲ್ಲ ಪ್ರಧಾನಿಯವರ ದಾಖಲೆ ಮುರಿದಿದ್ದಾರೆ. ಬಿಜೆಪಿಯ ಕಾರ್ಯಕರ್ತರೆಂದು ಹೇಳಲು ನಮಗೆ ಹೆಮ್ಮೆ ಆಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ೧೨ನೇ ವರ್ಷಾಚಾರಣೆ ಸಂದರ್ಭದಲ್ಲಿ ಸೇವಾ ಅಭಿವೃದ್ಧಿ ಮತ್ತು ಜನಕಲ್ಯಾಣದ ಪ್ರಯುಕ್ತ ದಕ್ಷಿಣ ಕನ್ನಡ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಪುತ್ತೂರು ಗ್ರಾಮಾಂತರ ಮತ್ತು ನಗರ ಮಂಡಲದ ನೇತೃತ್ವದಲ್ಲಿ ಪುತ್ತೂರು ಕಲ್ಲೇಗ ದೈವಸ್ಥಾನದ ವಠಾರದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿ ಆರ್.ಸಿ.ನಾರಾಯಣ ಮಾತನಾಡಿ ಮೋದಿಜಿಯವರು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ದೀರ್ಘಕಾಲ ನಿರಂತರ ಅಧಿಕಾರ ನಡೆಸಿದ ಪ್ರಧಾನಿ ಎಂಬ ಹೊಸ ದಾಖಲೆ ಬರೆದಿದ್ದಾರೆ. ೧೨ ಕೋಟಿ ಶೌಚಾಲಯ, ೧೪೦೦ ಕೋಟಿ ಘನತ್ಯಾಜ್ಯ ಘಟಕದಿಂದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ ಅವರು ಇವತ್ತು ಹಳ್ಳಿ ಹಳ್ಳಿಯಲ್ಲೂ ಸ್ವಚ್ಛತೆ ಜಾಗೃತಿ ಮೂಡಿಡುವ ಕೆಲಸ ಬಿಜೆಪಿ ನಾಯಕರಿಂದ ಆಗಿದೆ ಎಂದರು.

ಬಿಜೆಪಿ ಒಬಿಸಿ ನಗರ ಮಂಡಲದ ಅಧ್ಯಕ್ಷ ನಿರಂಜನ್ ಮಾನ್ಯ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಮಹೇಶ್ ಜೋಗಿ, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಜಿಲ್ಲಾ ಕಾರ್ಯದರ್ಶಿ ವಿದ್ಯಾಗೌರಿ, ಜಿಲ್ಲಾ ಓಬಿಸಿ ಉಪಾಧ್ಯಕ್ಷರಾದ ರಾಘವೇಂದ್ರ ರಾವ್, ವಿನೋದ್ ಬೆಳೆಯೂರು, ಪ್ರಧಾನಕಾರ್ಯದರ್ಶಿಗಳಾದ ಮೋನಪ್ಪ ದೇವಸ್ಯ, ಶಶಿಧರ ಕಲ್ಯಂಜ, ನಗರ ಪ್ರಭಾರಿ ರವಿ ಸೂವರು, ಗ್ರಾಮಾಂತರ ಪ್ರಭಾರಿ ಪುರುಷೋತ್ತಮ ಸಾಲಿಯಾನ್, ನಗರ ಮಂಡಲದ ಮಹಿಳಾ ಮೋರ್ಚಾದ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ, ಜಯಲಕ್ಷ್ಮಿ ಶಾಗ್ರಿತ್ತಾಯ, ನಗರಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ್ ಪೆರಿಯತ್ತೋಡಿ, ಶಶಿಧರ್ ನಾಯಕ್, ಒಬಿಸಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ವಿಮಲ ಪೂಜಾರಿ, ಸುನಿಲ್ ದೇವಾಂಗ, ನಾಗೇಂದ್ರ ಬಾಳಿಗ, ಪುರುಷೋತ್ತಮ ಮುಂಗ್ಲಿಮನೆ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.