ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು80ರ ದಶಕದಿಂದಲೂ ಪತ್ರಿಕೆಯನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದೇನೆ. ಅಂದು ಪ್ರಕಟವಾಗುತ್ತಿದ್ದ ವರದಿಗಳು ಸರ್ಕಾರವನ್ನೇ ಉರುಳಿಸುವ ಮಟ್ಟಿಗೆ ಪ್ರಖರ, ಗಂಭೀರತೆಯಿಂದ ಕೂಡಿರುತ್ತಿದ್ದವು. ಪ್ರಸ್ತುತ ಈ ಗುಣಮಟ್ಟ ಕಡಿಮೆಯಾಗುತ್ತಿರುವುದು ಕಂಡುಬಂದಿದೆ ಎಂದು ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಅಭಿಪ್ರಾಯಟ್ಟರು.ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಘಟಕದ ವತಿಯಿಂದ ಪತ್ರಿಕಾಭವನದಲ್ಲಿ ಏರ್ಪಡಿಸಿದ್ಧ ಜಿಲ್ಲೆಯ ಸುದ್ದಿ ಮನೆಯಲ್ಲಿ ಪತ್ರಕರ್ತರಾಗಿ ನಿವೃತ್ತರಾದ ಹಿರಿಯ ಪತ್ರಕರ್ತರಿಗೆ ಸನ್ಮಾನ ಸಮಾರಂಭ ಹಾಗೂ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಪತ್ರಿಕೆ, ಮಾಧ್ಯಮಗಳಲ್ಲಿ ಹಿಂದಿನ ಘನತೆ ಶಿಸ್ತು ಮೂಡಬೇಕಿದ್ದು, ಜನಪರವಾದ ವರದಿಗಳು ಹೆಚ್ಚಾಗಬೇಕಿದೆ. ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮಗಳ ಈ ಸ್ಥಿತ್ಯಂತರದ ಕಾಲಘಟ್ಟದಲ್ಲಿ ಮುದ್ರಣ ಮಾಧ್ಯಮಕ್ಕೆ ಎಷ್ಟು ವರ್ಷ ಅಸ್ಮಿತೆಯೆಂಬ ಜಿಜ್ಞಾಸೆಯೂ ನಡೆಯುತ್ತಿದೆ. ಪತ್ರಕರ್ತರಷ್ಟೇ ವಿತರಕರು ಪತ್ರಿಕೆಗೆ ಜೀವಾಳವಾಗಿದ್ದು, ಪ್ರಜಾಪ್ರಭುತ್ವದ ನಾಲ್ಕನೇ ಅಂಗ, ಕಾವಲು ನಾಯಿಗಳೆಂದು ಕರೆಸಿಕೊಳ್ಳುವ ಪತ್ರಿಕೆಗಳು ವೃತ್ತಿ ಧರ್ಮದುನುಸಾರ ಕಾರ್ಯನಿರ್ವಹಿಸುವ ಅಗತ್ಯತೆ ಹೆಚ್ಚಿದ್ದು, ಸ್ವಯಂ ನಿಯಂತ್ರಣ ರೇಖೆಯನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.
ಹಿರಿಯ ರಂಗಕರ್ಮಿ ಡಾ.ಲಕ್ಷಣದಾಸ್ ಮಾತನಾಡಿ, ಪತ್ರಕರ್ತರು ಸಾಕಷ್ಟು ಸಂಕಷ್ಟಗಳನ್ನು ಹೊತ್ತು ಸಮಾಜಕ್ಕಾಗಿ ಶ್ರಮಿಸುತ್ತಿದ್ದಾರೆ. ಜಿಲ್ಲೆಯ ಪತ್ರಿಕಾಭೀಷ್ಮ ಎಚ್.ಜಿ.ಗುಂಡುರಾವ್, ಕೋಟೆ ನಾಗಭೂಷಣ್, ಬಾಗ್ಲೋಡಿ, ಎಸ್.ನಾಗಣ್ಣ, ಏಕೇಶ್ವರ್ ಅವರಂತಹ ಅನೇಕ ಹಿರಿಯರು ಜಿಲ್ಲೆಯಲ್ಲಿ ಪತ್ರಿಕಾರಂಗವನ್ನು ಬೆಳೆಸಿ ಪ್ರೋತ್ಸಾಹಿಸಿದ್ದಾರೆ. ನನ್ನನ್ನು ಸೇರಿದಂತೆ ಅನೇಕ ಹಿರಿಯ ವೃತ್ತಿರಂಗಭೂಮಿ ಕಲಾವಿದರನ್ನು ಪತ್ರಕರ್ತರು ಬೆಂಬಲಿಸಿ ರಕ್ಷಿಸಿದ್ದಾರೆ. ಹಿರಿಯರ ಆದರ್ಶಗಳನ್ನು ನವಪೀಳಿಗೆ ಅನುಸರಿಸಬೇಕಿದೆ ಎಂದು ಹೇಳಿದರು.ವಿಧಾನ ಪರಿಷತ್ ಆಗ್ನೇಯ ಪದವೀಧರರ ಕ್ಷೇತ್ರದ ಶಾಸಕ ಚಿದಾನಂದ ಎಂ ಗೌಡ ಮಾತನಾಡಿ, ಎಲೆಕ್ಟ್ರಾನಿಕ್ ಮಾಧ್ಯಮ, ಯೂಟ್ಯೂಬ್ ವೆಬ್ಸೈಟ್ಗಳಲ್ಲಿ ಕ್ಷಣಾರ್ಧದಲ್ಲಿ ಜಗತ್ತಿನ ವಿದ್ಯಮಾನಗಳನ್ನು ಅರಿತರು, ಮರು ದಿನ ಪತ್ರಿಕೆಯಲ್ಲಿ ಪತ್ರಿಕೆ ಓದಿದಾಗಲಷ್ಟೇ ಮನಸ್ಸಿಗೆ ಸಮಾಧಾನ. ಹಾಗಾಗಿ ಇನ್ನೂ ೫೦ ವರ್ಷಗಳ ಕಾಲ ಮುದ್ರಣ ಮಾಧ್ಯಮಕ್ಕೆ ಭವಿಷ್ಯವಿದೆ. 4ನೇ ಅಂಗವೆನಿಸಿದ ಪತ್ರಿಕಾರಂಗ ಆದರ್ಶ, ಮೌಲ್ಯಯುತವಾಗಿರಬೇಕೆಂದು ಸಮಾಜ ಬಯಸುತ್ತದೆ. ಜೀವದ ಹಂಗುತೊರೆದು ಹಗಲು ರಾತ್ರಿಯೆನ್ನದೆ ಕಾರ್ಯನಿರ್ವಹಿಸುವ ಪತ್ರಕರ್ತರಿಗೂ ಸಾಮಾಜಿಕ ಸುರಕ್ಷೆ, ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳುವ ಅವಕಾಶವನ್ನು ಸರ್ಕಾರಗಳು ಕಲ್ಪಿಸಬೇಕಿದೆ. ಈ ದಿಸೆಯಲ್ಲಿ ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನೆಯನ್ನು ಕೇಳಿದ್ದು, ಸರ್ಕಾರ ಈಡೇರಿಸುವ ಲಿಖಿತ ಭರವಸೆ ಕೊಟ್ಟಿರುವುದಾಗಿ ತಿಳಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಇ ರಘುರಾಮ್ ಮಾತನಾಡಿ, ನಿವೃತ್ತ ಪತ್ರಕರ್ತರ ಮಾಸಾಶನ ಅರ್ಜಿ ತ್ವರಿತ ವಿಲೇವಾರಿಗೆ ನಿಯಮಗಳನ್ನು ಸರಳೀಕರಣಗೊಳಿಸಬೇಕೆಂದು ಶಾಸಕರನ್ನು ಕೋರಿದರು.ಕೆ.ಬಿ.ಚಂದ್ರಮೌಳಿ ಮಾತನಾಡಿ, ಸಂವಿಧಾನದಲ್ಲಿ ಅಗತ್ಯ ಮಾರ್ಪಾಟು ಮಾಡಿ ಮಾಧ್ಯಮಕ್ಕೂ ನಿಯಂತ್ರಣ ನಿರ್ಬಂಧಗಳ ನಿಯಮ ರೂಪಿಸಬೇಕಿದೆ ಎಂದು ಆಶಿಸಿದರು.
ಕಾನಿಪಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿದರು. ನಿವೃತ್ತರಾದ ಹಿರಿಯ ಪತ್ರಕರ್ತರಾದ ಎಚ್ ಜಿ ವೆಂಕಟೇಶಮೂರ್ತಿ, ದಿವಂಗತ ಜಿ ಇಂದ್ರಕುಮಾರ್ ಪರವಾಗಿ ಪತ್ನಿ ಜಯಶ್ರೀ, ತಿಪಟೂರಿನ ಸೋಮಶೇಖರ್, ತುರುವೇಕೆರೆಯ ಕೇಶವಮೂರ್ತಿ ಭಟ್, ಸಂಘದ ಮಾಜಿ ಅಧ್ಯಕ್ಷ ಕೆ. ಬಿ. ಚಂದ್ರಮೌಳಿ, ಹಿರಿಯ ಛಾಯಾಗ್ರಾಹಕ ಟಿ ಎಸ್ ತ್ರಿಯಂಬಕ ಅವರನ್ನು ಸನ್ಮಾನಿಸಲಾಯಿತು.ಮಾಜಿ ಶಾಸಕ ತುಮಕೂರು ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ್ವರಿರುದ್ರಪ್ಪ, ಸಂಘದ ಉಪಾಧ್ಯಕ್ಷ ಎಲ್ ಚಿಕ್ಕಿರಪ್ಪ ಶಾ.ನಾ.ಪ್ರಸನ್ನಮೂರ್ತಿ, ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಸಿದ್ದಲಿಂಗಸ್ವಾಮಿ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಿ.ಎಂ.ಸತೀಶ್, ರಾಷ್ಟ್ರೀಯ ಮಂಡಳಿ ಸದಸ್ಯ ಅನುಶಾಂತರಾಜ್, ಟಿ.ಎನ್.ಮಧುಕರ್, ತಾಲೂಕು ಅಧ್ಯಕ್ಷರಾದ ರಂಗನಾಥ್, ಚಂದ್ರಕಾಂತ್, ಜಿಲ್ಲಾ ಸಂಘದ ಕಾರ್ಯದರ್ಶಿ ಸತೀಶ್ ಹಾರೋಗೆರೆ, ನಿರ್ದೇಶರಾದ ಜಯಣ್ಣ, ಪರಮೇಶ್, ಚಿಕ್ಕಣ್ಣ, ಕೃಷ್ಣಮೂರ್ತಿ, ಮಲ್ಲಿಕಾರ್ಜುನಸ್ವಾಮಿ, ಮಂಜುನಾಥ್ ಹಾಲ್ಕುರಿಕೆ, ನಾಗೇಂದ್ರ, ಸುರೇಶ್ ವತ್ಸ, ಸುರೇಶ್ಕಾಗ್ಗೇರೆ, ರೇಣುಕಾಪ್ರಸಾದ್, ರವೀಂದ್ರ, ಮಧುಗಿರಿ ಮಹಾರಾಜ್ ಸೇರಿ ಜಿಲ್ಲೆಯ ಪತ್ರಕರ್ತರು, ಹಾಲಿ ಮಾಜಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಸ್.ಹರೀಶ್ ಆಚಾರ್ಯ ಸ್ವಾಗತಿಸಿದರು.