ಸಾರಾಂಶ
ಸಮುದ್ರ ತ್ಯಾಜ್ಯ ನಿರ್ವಹಣೆ ಬಗ್ಗೆ ಜಿಪಂ, ತಾಪಂ ಹಾಗೂ ಗ್ರಾಪಂ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸಮಗ್ರವಾಗಿ ತಿಳಿದುಕೊಳ್ಳದೇ ಇರುವುದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ
ಕಾರವಾರ: ಸ್ಥಳೀಯ ಜನರ ಸಹಭಾಗಿತ್ವದಲ್ಲಿ ಸಮುದ್ರ ತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡುವ ಅಗತ್ಯವಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ ಅಭಿಪ್ರಾಯಪಟ್ಟರು.
ನಗರದ ಜಿಪಂ ಸಭಾಂಗಣದಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಉತ್ತರ ಕನ್ನಡ ಜಿಪಂ ವತಿಯಿಂದ ಹಮ್ಮಿಕೊಂಡಿದ್ದ ಸಮುದ್ರ ತ್ಯಾಜ್ಯ ನಿರ್ವಹಣೆ ಕುರಿತು ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯು ಅತಿ ಉದ್ದದ ಕರಾವಳಿ ತೀರ ಪ್ರದೇಶ ಹೊಂದಿದ್ದು, ಇದರಿಂದ 5 ತಾಲೂಕುಗಳ ಉದ್ಯೋಗ, ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿ ಸಮುದ್ರದ ಮೇಲೆ ಹೆಚ್ಚು ಅವಲಂಬಿತವಾಗಿವೆ. ಹೀಗಾಗಿ ಜಿಪಂ ವತಿಯಿಂದ ತ್ಯಾಜ್ಯ ಸಂಗ್ರಹ, ವಿಂಗಡನೆ ಮತ್ತು ನಿರ್ವಹಣೆ ಕುರಿತು ಸಾಕಷ್ಟು ತರಬೇತಿ ಕಾರ್ಯಾಗಾರ ನಡೆಸಲಾಗುತ್ತಿದೆ. ಆದರೆ ತರಬೇತಿಯಲ್ಲಿ ಪಡೆದ ಜ್ಞಾನ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದ್ದು, ಜನರಿಗೆ ಈ ಕುರಿತು ಜಾಗೃತಿ ಮೂಡಿಸುವ ಕಾರ್ಯವಾಗುತ್ತಿಲ್ಲ. ಸಮುದ್ರ ತ್ಯಾಜ್ಯ ನಿರ್ವಹಣೆ ಬಗ್ಗೆ ಜಿಪಂ, ತಾಪಂ ಹಾಗೂ ಗ್ರಾಪಂ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸಮಗ್ರವಾಗಿ ತಿಳಿದುಕೊಳ್ಳದೇ ಇರುವುದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ. ಹೀಗಾಗಿ ಎಲ್ಲ ಅಧಿಕಾರಿಗಳು ನುರಿತ ತಜ್ಞರಿಂದ ಪಡೆದುಕೊಂಡ ಜ್ಞಾನ ಬಳಸಿಕೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕಿದೆ. ಈ ಕಾರ್ಯ ಯಶಸ್ವಿಯಾಗಲು ಪ್ರತಿಯೊಂದು ಇಲಾಖೆಯ ಸಹಾಯ, ಸಹಕಾರ ಅಗತ್ಯವಾಗಿದೆ ಎಂದರು.ಕಾರ್ಯಾಗಾರದಲ್ಲಿ ಎಫ್ಎಫ್ಪಿಒ ಟೊಂಕಾ ಕಾಸರಕೋಡ ನಿರ್ದೇಶಕ ಪ್ರಕಾಶ ಮೇಸ್ತ ಸಮುದ್ರ ಸ್ವಚ್ಛತೆ ಪರಿಕಲ್ಪನೆ ಮತ್ತು ಮಹತ್ವ ವಿಷಯದ ಮೇಲೆ ಬೋಧನೆ ಮಾಡಿದರು. ಉಡುಪಿ ಜಿಪಂ ಸಿಪಿಒ ಶ್ರೀನಿವಾಸ ರಾವ್ ಸಮುದ್ರ ತ್ಯಾಜ್ಯ ನಿರ್ವಹಣಾ ಕಾರ್ಯತಂತ್ರಗಳು ವಿಷಯದ ಮೇಲೆ ಹಾಗೂ ಇಲ್ಲಿನ ಸಾಗರ ವಿಜ್ಞಾನ ಕೇಂದ್ರದ ನಿವೃತ್ತ ಪ್ರಾಧ್ಯಾಪಕ ಡಾ.ವಿ.ಎನ್. ನಾಯಕ ಸಮುದ್ರ ತ್ಯಾಜ್ಯ ನಿರ್ವಹಣೆಗೆ ಪೂರಕವಾದ ಕಾನೂನು ಮತ್ತು ನಿಯಮಗಳ ಬಗ್ಗೆ ಸವಿಸ್ತಾರವಾಗಿ ವಿಷಯ ಮಂಡಿಸಿದರು.
ಎಸ್ಐಆರ್ಡಿಯ ಬೋಧಕ ಪ್ರಕಾಶ ಎಸ್.ಎಚ್.,ಜಿಪಂ ಆಡಳಿತ ಶಾಖೆಯ ಉಪ ಕಾರ್ಯದರ್ಶಿ ನಾಗೇಶ ರಾಯ್ಕರ್, ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿ ಎನ್.ಜಿ. ನಾಯಕ, ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ್, ಪ್ರಭಾರ ಮುಖ್ಯ ಲೆಕ್ಕಾಧಿಕಾರಿ ಡಾ.ಆನಂದಸಾ ಹಬೀಬ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗೀಸ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.