ಜಲಮೂಲ ಸಂರಕ್ಷಣೆಗೆ ಆದ್ಯತೆ ನೀಡಿ: ಶಾಸಕ ಬಸವರಾಜ ಶಿವಣ್ಣನವರ

| Published : Aug 09 2025, 12:01 AM IST / Updated: Aug 09 2025, 12:02 AM IST

ಸಾರಾಂಶ

ಪೂರ್ವಜನರ ದೂರದೃಷ್ಟಿ ಚಿಂತನೆಗಳು ಇಂದಿನ ಯಾವುದೇ ತಾಂತ್ರಿಕ ವಿದ್ಯೆಗಿಂತ ಮಿಗಿಲಾಗಿದ್ದು, ಅವರ ವಿಚಾರಧಾರೆಗಳು ಶಾಶ್ವತ ಪರಿಹಾರಕ್ಕಾಗಿ ಮೀಸಲಿದ್ದವು ಎಂಬುದಕ್ಕೆ ನೈಸರ್ಗಿಕವಾಗಿ ನೀರು ಸಂಗ್ರಹಕ್ಕೆ ಮುಂದಾಗಿರುವುದೇ ನಮ್ಮೆದುರಗಿರುವ ಉದಾಹರಣೆಯಾಗಿದೆ.

ಬ್ಯಾಡಗಿ: ಕೆರೆಗಳ ನಿರ್ಮಾಣ ಸಾವಿರಾರು ವರ್ಷಗಳ ಹಿಂದೆಯೇ ಪೂರ್ವಜರ ಆಲೋಚಿತ, ನಿರ್ಮಿತ ಹಾಗೂ ಶಾಶ್ವತ ಜಲಮೂಲಗಳಾಗಿವೆ. ಅವುಗಳಿಲ್ಲದೇ ಮನುಷ್ಯ ಬದುಕಲು ಸಾಧ್ಯವಿಲ್ಲ. ಆದರೆ ಕೆರೆಗಳ ಸಂರಕ್ಷಣೆ ವಿಷಯದಲ್ಲಿ ಎಚ್ಚೆತ್ತುಕೊಳ್ಳದಿದ್ದಲ್ಲಿ ನೀರಿನ ಬವಣೆ ನೀಗಿಸಿಕೊಳ್ಳಲು ಪರದಾಡಬೇಕಾಗುತ್ತದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಎಚ್ಚರಿಸಿದರು.ಪುರಸಭೆ ವ್ಯಾಪ್ತಿಯ ಪಟ್ಟಣದ ಬೆಟ್ಟದ ಮಲ್ಲೇಶ್ವರ ಗುಡ್ಡದಲ್ಲಿ ₹1.50 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಪೂರ್ವಜನರ ದೂರದೃಷ್ಟಿ ಚಿಂತನೆಗಳು ಇಂದಿನ ಯಾವುದೇ ತಾಂತ್ರಿಕ ವಿದ್ಯೆಗಿಂತ ಮಿಗಿಲಾಗಿದ್ದು, ಅವರ ವಿಚಾರಧಾರೆಗಳು ಶಾಶ್ವತ ಪರಿಹಾರಕ್ಕಾಗಿ ಮೀಸಲಿದ್ದವು ಎಂಬುದಕ್ಕೆ ನೈಸರ್ಗಿಕವಾಗಿ ನೀರು ಸಂಗ್ರಹಕ್ಕೆ ಮುಂದಾಗಿರುವುದೇ ನಮ್ಮೆದುರಗಿರುವ ಉದಾಹರಣೆಯಾಗಿದೆ ಎಂದರು.

ಸ್ವಯಂಪ್ರೇರಿತ ಕಡಿವಾಣ ಹಾಕಿಕೊಳ್ಳಿ: ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ ಮಾತನಾಡಿ, ಕೆರೆಗಳ ಅತಿಕ್ರಮಣ ನಿಲ್ಲಬೇಕು. ಅವುಗಳ ಹೂಳನ್ನು ಎತ್ತಿ ನಿರಂತರವಾಗಿ ಪುನಶ್ಚೇತನ ನಡೆಯಬೇಕು. ಕೆರೆಗಳ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಎಷ್ಟೇ ಹಣ ವ್ಯಯಿಸಿದರೂ ವ್ಯರ್ಥವಾಗುವುದಿಲ್ಲ. ನಮ್ಮೆಲ್ಲರಿಗೂ ಜೀವಾಳವಾಗಿರುವ ಕೆರೆಗಳ ಅತಿಕ್ರಮಣಕ್ಕೆ ಸಾರ್ವಜನಿಕರು ಸ್ವಯಂಪ್ರೇರಿತ ಕಡಿವಾಣ ಹಾಕಿಕೊಳ್ಳುವಂತೆ ಸಲಹೆ ನೀಡಿದರು.

ಅಕ್ಷಮ್ಯ ಅಪರಾಧ: ಮುಖ್ಯಾಧಿಕಾರಿ ವಿನಯಕುಮಾರ ಮಾತನಾಡಿ, ಕೆರೆಗಳು ರೈತಾಪಿ ಜನರಿಗೆ ಅಕ್ಷಯ ಪಾತ್ರೆಗಳಿದ್ದಂತೆ ಅವುಗಳನ್ನು ಉಳಿಸುವುದು ಸೇರಿದಂತೆ ಯಥಾಸ್ಥಿತಿಯಲ್ಲಿ ಮುಂದಿನ ಪೀಳಿಗೆ ಬಳಕೆಗೆ ಅನುಕೂಲ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕೆರೆಗಳ ನೀರು ಬಳಕೆ ಮತ್ತು ಅವಶ್ಯಕತೆ ಕುರಿತು ನಾವೆಲ್ಲ ಬಹಳಷ್ಟು ಮಾತನಾಡುತ್ತೇವೆ, ಆದರೆ ಜಲಮೂಲಗಳನ್ನು ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ಈ ನಿಟ್ಟಿನಲ್ಲಿ ಬಹಳಷ್ಟು ಹೋರಾಟಗಳೇ ದೇಶದೆಲ್ಲೆಡೆ ನಡೆಯುತ್ತಿವೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರು, ಆಶ್ರಯ ಸಮಿತಿ ಸದಸ್ಯರು, ಹಾಗೂ ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.