ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನರೇಗಾ ಯೋಜನೆಯ ವಿವಿಧ ಕಾಮಗಾರಿಗಳಲ್ಲಿ ಸ್ಥಳೀಯ ಅಧಿಕಾರಿಗಳು ಗುಣಮಟ್ಟಕ್ಕೆ ಆದ್ಯತೆ ನೀಡಿ ಜಾಗೃತಿಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಸೂಚಿಸಿದರು.ಜಿಪಂ ನೂತನ ಸಭಾಂಗಣದಲ್ಲಿ ನಡೆದ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಅನುಷ್ಠಾನದ ಕಾರ್ಯಾಗಾರ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನರೇಗಾ ಕಾಮಗಾರಿಗಳಲ್ಲಿ ಗುಣಮಟ್ಟದ ಕೆಲಸಗಳು ಎಲ್ಲೂ ಆಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದೆ. ಕೋಟಿಗಟ್ಟಲೆ ಅನುದಾನ ಬಳಸಿದರೂ ಗುಣಮಟ್ಟದ ಕೆಲಸಗಳು ನಡೆದಿಲ್ಲ. ಕಳೆದ ವರ್ಷ ಜಿಲ್ಲೆಯು ಉತ್ತಮ ಪ್ರಗತಿ ಹೊಂದಿತ್ತು. ಆದರೆ, ಈ ವರ್ಷ ಕಡಿಮೆ ಸಾಧನೆ ಆಗಿದ್ದು ಈ ನಿಟ್ಟಿನಲ್ಲಿ ತಾಲೂಕು ಎಂಐಎಸ್, ಐಇಸಿ ಸಂಯೋಜಕರು, ತಾಲೂಕು ಆಡಳಿತ, ತಾಂತ್ರಿಕ ಸಹಾಯಕರು, ಗ್ರಾಮ ಕೂಲಿ ಸಹಾಯಕರು, ಕಾಯಕ ಮೀತ್ರ ಹೀಗೆ ಎಲ್ಲರೂ ಸೇರಿ ಉತ್ತಮ ಪ್ರಗತಿ ಸಾಧಿಸಲು ಸಹಕರಿಸಬೇಕು ಎಂದರು.
ಪ್ರತಿ ಕಾಮಗಾರಿಯ ಟೆಂಡರ್ ಫಾಲೋ ಅಪ್ ಆಗಬೇಕು, ಕಾಮಗಾರಿ ಸ್ಥಳಗಳಲ್ಲಿ ಕೆಲಸಕ್ಕೆ ಹಾಜರಿರುವ ಕೂಲಿಕಾರರ ಮಾಹಿತಿಯನ್ನು ಪ್ರತಿದಿನ ಪಿಡಿಒಗಳಿಗೆ ಸಲ್ಲಿಸಬೇಕು. ಬಿಲ್ ಮತ್ತು ಇತರೇ ದಾಖಲಾತಿಗಳನ್ನು ಸಲ್ಲಿಸುವಲ್ಲಿ ವಿಳಂಬವಾದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ ಅವರು ಮಾತನಾಡಿ, ಗ್ರಾಮ ಕಾಯಕ ಮಿತ್ರರು ತಮ್ಮ ಗ್ರಾಮ ಪಂಚಾಯತಿಯ ಮನೆಗಳಿಗೆ ಭೇಟಿ ನೀಡಿ ಮಹಾತ್ಮಾ ಗಾಂಧಿ ನರೇಗಾ ಯೋಜನೆ ಕುರಿತು ಅರವು ಮೂಡಿಸಿ ಕಾಮಗಾರಿಗಳ ಕೆಲಸದಲ್ಲಿ ಮಹಿಳಾ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ರಮಗಳನ್ನು ಕೈಗೊಳ್ಳಬೇಕು. ಉದ್ಯೋಗ ಚೀಟಿ ಬಯಸುವ ಜನರಿಂದ ನಮೂನೆ-1ರಲ್ಲಿ ಅರ್ಜಿಗಳನ್ನು ಸ್ವೀಕರಿಸಿ, ಉದ್ಯೋಗ ಚೀಟಿ ದೊರಕಿಸಿ ಕೊಡುವ ಕಾರ್ಯ ಮಾಡಬೇಕು ಎಂದರು.
ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲ ತಾಲೂಕಿನ ತಾಂತ್ರೀಕ ಸಂಯೋಜಕರು ತಾಲೂಕು ಆಡಳಿತ, ತಾಂತ್ರಿಕ ಸಹಾಯಕರು, ಗ್ರಾಮ ಕೂಲಿ ಸಹಾಯಕರು, ಕಾಯಕ ಮೀತ್ರರು ಭಾಗವಹಿಸಿದ್ದರು.