ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ

| Published : Mar 13 2024, 02:01 AM IST

ಸಾರಾಂಶ

ದೇವರಹಿಪ್ಪರಗಿ ತಾಲೂಕಿನ ಯಲಗೋಡ ತಾಂಡಾ ಗ್ರಾಮದಲ್ಲಿ ಯಲಗೋಡ -ಢವಳಾರದವರೆಗೆ ₹5ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಚಾಲನೆ ನೀಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಕ್ಷೇತ್ರದ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ರಸ್ತೆಗಳು ಸೇರಿದಂತೆ ಹಲವು ವಿವಿಧ ಯೋಜನೆ ಜಾರಿಗೊಳಿಸಲಾಗಿದೆ ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು.

ತಾಲೂಕಿನ ಯಲಗೋಡ ತಾಂಡಾ ಗ್ರಾಮದಲ್ಲಿ ಯಲಗೋಡ -ಢವಳಾರದವರೆಗೆ ₹5ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿ ಪಡಿಸುವುದರಿಂದ ಗ್ರಾಮಗಳು ಅಭಿವೃದ್ಧಿ ಹೊಂದಲು ಸಾಧ್ಯ. ಹೀಗಾಗಿ ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮತ ಕ್ಷೇತ್ರದ ಪಡಗಾನೂರ, ಕೊಂಡಗೂಳಿ ಹಾಗೂ ಕಲಕೇರಿ ಗ್ರಾಮದಲ್ಲಿ ತಲಾ ₹50 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮತಕ್ಷೇತ್ರದ ಅಭಿವೃದ್ಧಿಗಾಗಿ ಸಂಬಂಧಪಟ್ಟ ಸಚಿವರಲ್ಲಿ ಮನವಿ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅನುದಾನ ತರುವ ಮೂಲಕ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.

ಈ ವೇಳೆ ಲ್ಯಾಂಡ್ ಆರ್ಮಿಯ ಎಇಇ ರಾಜಶೇಖರ ರಸ್ತೆ ಸುಧಾರಣೆ ಬಗ್ಗೆ ಮಾಹಿತಿ ನೀಡಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಸಾಯಿಬಣ್ಣ ಬಾಗೇವಾಡಿ ಮಾತನಾಡಿ, ರಾಜುಗೌಡ ಪಾಟೀಲ ವಿರೋಧ ಪಕ್ಷದ ಶಾಸಕರಾದರು, ಸರ್ಕಾರದ ಮಟ್ಟದಲ್ಲಿ ಸಚಿವರ ಜೊತೆ ಮಾತನಾಡಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದರು.

ಗ್ರಾಪಂ ಅಧ್ಯಕ್ಷ ಮಹಮ್ಮದ್ ರಫೀಕ್ ಕಣಮೇಶ್ವರ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಮಶ್ಯಾಕಸಾಬ ಚೌದರಿ, ಮುಖಂಡರಾದ ಶರಣು ಧರಿ, ಶರಣಪ್ಪ ಚಬನೂರ, ಬಸಲಿಂಗಪ್ಪ, ಉಮೇಶ ಇಂಗಳಗಿ, ಬಸವರಾಜ್ ಇಂಗಳಗಿ, ಸಂಗಪ್ಪ ಕೊಣ್ಣಿನ್, ಪಿಡಬ್ಲ್ಯೂಡಿ ಅಧಿಕಾರಿ ಕಲಬುರ್ಗಿ, ಪಿಡಿಒ ಎಸ್.ಕೆ.ಹಡಪದ, ರಾಮನಗೌಡ ರಾಂಪುರ ಸೇರಿದಂತೆ ತಾಂಡದ ಪ್ರಮುಖರು, ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.