ದಾಬಸ್‍ಪೇಟೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಶೇ.80ರಷ್ಟು ಈಡೇರಿಸಿದ್ದು, ಮತ್ತಷ್ಟು ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ತ್ಯಾಮಗೊಂಡ್ಲು ಗ್ರಾಪಂ ವತಿಯಿಂದ ಸುಮಾರು 24 ಲಕ್ಷ ರು. ಅನುದಾನದಲ್ಲಿ ಪಂಚಾಯಿತಿ ಕಾರ್ಯಾಲಯದ ಮುಂದೆ ನಿರ್ಮಿಸಿರುವ ಸುಮಾರು 24 ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ, ಯಾರೇ ಬಂದು ಅಭಿವೃದ್ಧಿ ವಿಚಾರದಲ್ಲಿ ಸಹಕರಿಸುವಂತೆ ಕೋರಿದರೆ ಖಂಡಿತ ನೀಡುತ್ತೇನೆ. ರಾಜಕೀಯ ಮಾಡುವ ಸಂದರ್ಭ ಬಂದಾಗ ರಾಜಕಾರಣ ಮಾಡಲೇಬೇಕಾಗುತ್ತದೆ ಎಂದರು.

ನಾನು ಚುನಾವಣೆ ವೇಳೆ ನೀಡಿದ ಭರವಸೆಯಂತೆ ಎರಡೂವರೆ ವರ್ಷದಲ್ಲಿಯೇ ತ್ಯಾಮಗೊಂಡು ಗ್ರಾಪಂ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಕಾರ್ಯಕರ್ತರೊಂದಿಗೆ ಯಾವ ವಾರ್ಡ್‍ಗಳಿಗೆ ಯಾವ ಕಾಮಗಾರಿ, ಅವಶ್ಯಕತೆಯಿದೆ ಎಂಬುದನ್ನು ಚರ್ಚಿಸಿ ಅನುದಾನ ಬಿಡುಗಡೆ ಮಾಡುತ್ತೇನೆ ಎಂದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತೇಗೌಡ, ಗ್ರಾಪಂ ಅಧ್ಯಕ್ಷೆ ಉಮಾಹರೀಶ್, ಸದಸ್ಯರಾದ ಮಹಿಮಣ್ಣ, ಚಿಕ್ಕತಿಮ್ಮಯ್ಯ, ಅಬ್ದುಲ್ ಖಾದರ್, ಸುಜಿತ್ ಕುಮಾರ್, ವಸೀಂ, ಜರೀನ್ ತಾಜ್, ಮಂಗಳ, ತಾಲಿಬ್, ಸುಮಿತ್ರಾ, ರತ್ನಮ್ಮ, ಶಶಿಕಲಾ, ನಾಗೇಂದ್ರ, ಪ್ರಹ್ಲಾದ್, ಮುಬೀನ್ ತಾಜ್, ಮಲ್ಲೇಶ್, ಸಲ್ಮಾ, ಉಮಾರಾಣಿ, ತುಳಸಿ, ಮಾಜಿ ಅಧ್ಯಕ್ಷರಾದ ಸಾದತ್ ಉಲ್ಲಾ, ಜಗದೀಶ್, ಎನ್ ಡಿಎ ಮಾಜಿ ಸದಸ್ಯ ಪ್ರಕಾಶ್ ಬಾಬು, ಸೋಮಶೇಖರ್, ಕೃಷ್ಣಮೂರ್ತಿ, ರಾಮಣ್ಣ, ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.

ಪೋಟೋ 1 :


ತ್ಯಾಮಗೊಂಡ್ಲು ಗ್ರಾಪಂ ಕಾರ್ಯಾಲಯದ ಮುಂದೆ ನಿರ್ಮಿಸಿರುವ ಅಂಗಡಿ ಮಳಿಗೆಗಳನ್ನು ಶಾಸಕ ಶ್ರೀನಿವಾಸ್ ಉದ್ಘಾಟಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತೇಗೌಡ, ಗ್ರಾಪಂ ಅಧ್ಯಕ್ಷೆ ಉಮಾಹರೀಶ್ ಇತರರಿದ್ದರು.