ಸಾರಾಂಶ
ಕೊಪ್ಪಳ:
ಕ್ಷೇತ್ರದಲ್ಲಿ ಹದಗೆಟ್ಟ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.ಕೊಪ್ಪಳ ವಿಧಾನಸಭಾ ಕ್ಷೇತ್ರದ ಗೊಂಡಬಾಳ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಬೆಳವಿನಾಳ, ಹಾಲವರ್ತಿ, ಲಾಚನಕೇರಿ, ಚಿಕ್ಕಬಗನಾಳ, ಕರ್ಕಿಹಳ್ಳಿ, ಹ್ಯಾಟಿ, ಹೊಸ ಗೊಂಡಬಾಳ, ಹೊಸಳ್ಳಿ ಹಾಗೂ ಬಹದ್ದೂರ್ ಬಂಡಿ ಗ್ರಾಮಗಳಲ್ಲಿ ₹ 14.50 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.
ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿಗೆ ಅನುದಾನ ತರುವ ಕೆಲಸ ಮಾಡುತ್ತಿದ್ದೇವೆ. ಹಳ್ಳಿಗಳಿಂದ ಕೊಪ್ಪಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಈಗಾಗಲೇ ಶೇ. 80ರಷ್ಟು ರಸ್ತೆಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು ಇನ್ನುಳಿದ ರಸ್ತೆಗಳ ಅಭಿವೃದ್ಧಿಗೆ ಕೂಡ ಈ ಆರ್ಥಿಕ ವರ್ಷದಲ್ಲಿ ಅನುದಾನ ಮೀಸಲಿಟ್ಟು ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.ಸದ್ಯ ವಿಧಾನಸಭ ಕ್ಷೇತ್ರದಲ್ಲಿ ₹ 150ಕ್ಕೂ ಹೆಚ್ಚು ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿವೆ. ಒಂದು ವರ್ಷದಲ್ಲಿ ಎಲ್ಲ ರಸ್ತೆ ಅಭಿವೃದ್ಧಿ ಮಾಡುತ್ತೇವೆ ಎಂದರು.
ನೀರಾವರಿ ಯೋಜನೆ ಜಾರಿಗೆ ಬದ್ಧ:ಈ ಭಾಗದ ಬಹುದಿನಗಳ ಬೇಡಿಕೆ ಆಗಿದ್ದ ಬಹದ್ದೂರ್ ಬಂಡಿ ನವಲ್ ಕಲ್ ಏತ ನೀರಾವರಿ ಯೋಜನೆಯ ಟ್ರೈಲ್ ರನ್ ಮಾಡಿದ್ದು ಯಶಸ್ವಿಗೊಂಡಿದೆ. ಬಾಕಿ ಉಳಿದಿರುವ ಕಾಮಗಾರಿಗೆ ₹ 230 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇನೆ. ಶೀಘ್ರದಲ್ಲಿ ಬಾಕಿ ಕಾಮಗಾರಿ ಆರಂಭಿಸಿ ಈ ಭಾಗವನ್ನು ಸಂಪೂರ್ಣ ನೀರಾವರಿ ಪ್ರದೇಶ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.
ಕಲ್ಯಾಣ ಕರ್ನಾಟಕದ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಕೊಪ್ಪಳ ಮತಕ್ಷೇತ್ರದ 103 ಗ್ರಾಮಗಳಿಗೂ ಕೂಡ ₹ 15ರಿಂದ ₹ 20 ಲಕ್ಷ ಅಭಿವೃದ್ಧಿಗೆ ಅನುದಾನ ನೀಡುತ್ತೇವೆ ಎಂದು ಭರವಸೆ ನೀಡಿದರು.ಈ ವೇಳೆ ಜಿಪಂ ಮಾಜಿ ಸದಸ್ಯರಾದ ಗೂಳಪ್ಪ ಹಲಿಗೇರಿ, ಪ್ರಸನ್ನ ಗಡಾದ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬಾಲಚಂದ್ರನ್, ಹೇಮಣ್ಣ ದೇವರಮನಿ, ಶರಣಪ್ಪ ಸಜ್ಜನ್, ಹನಮೇಶ ಹೊಸಳ್ಳಿ, ರವಿ ಕುರ್ಗೋಡ, ಬನ್ನೇಪ ಗೌಡ, ತೋಟಪ್ಪ ಕಾಮನೂರ, ಜಗದೀಶ ಕರ್ಕಿಹಳ್ಳಿ, ಮಂಜುನಾಥ ಗೊಂಡಬಾಳ, ಆನಂದ ಕಿನ್ನಾಳ, ಭರಮಪ್ಪ ಗೊರವರ, ತಹಸೀಲ್ದಾರ್ ವಿಠ್ಠಲ್ ಚೌಗಲೇ ಸೇರಿದಂತೆ ಇತರರು ಇದ್ದರು.