ವಿಜಯಪುರ ನಗರಕ್ಕೆ ಒಂದೊಮ್ಮೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯವಾಗದೆ ಇದ್ದರೆ ಸಿಂದಗಿ ತಾಲೂಕಿಗೆ ಪ್ರಥಮ ಆದ್ಯತೆ ನೀಡಿ. ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸುವ ನಿಟ್ಟಿನಲ್ಲಿ ಸಿಂದಗಿ ಶಾಸಕರು ಬರುವ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪಿಸಿ ಮಂಜೂರು ಮಾಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂದು ಮಾಜಿ ವಿಪ ಸದಸ್ಯ ಅರುಣ ಶಹಾಪುರ ಹಕ್ಕೊತ್ತಾಯಿಸುತ್ತೇನೆ ಎಂದರು.

ಕನ್ನಡಪ್ರಭ ವಾರ್ತೆ ಸಿಂದಗಿ

ವಿಜಯಪುರ ನಗರಕ್ಕೆ ಒಂದೊಮ್ಮೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯವಾಗದೆ ಇದ್ದರೆ ಸಿಂದಗಿ ತಾಲೂಕಿಗೆ ಪ್ರಥಮ ಆದ್ಯತೆ ನೀಡಿ. ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸುವ ನಿಟ್ಟಿನಲ್ಲಿ ಸಿಂದಗಿ ಶಾಸಕರು ಬರುವ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪಿಸಿ ಮಂಜೂರು ಮಾಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಮಾಜಿ ವಿಪ ಸದಸ್ಯ ಅರುಣ ಶಹಾಪುರ ಹಕ್ಕೊತ್ತಾಯಿಸುತ್ತೇನೆ ಎಂದರು.

ಪಟ್ಟಣದ ವಿದ್ಯಾ ನಗರದ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ವಿಜಯಪುರ ಜಿಲ್ಲೆ ವಿಭಜನೆ ಮಾಡುವ ವಿಚಾರವಿದ್ದರೆ ಸಿಂದಗಿಯನ್ನು ಜಿಲ್ಲೆ ಮಾಡುವ ಗಮನವನ್ನು ಶಾಸಕ ಅಶೋಕ ಮನಗೂಳಿ ಅವರು ಚಳಿಗಾಲ ಅಧಿವೇಶನದಲ್ಲಿ ಧ್ವನಿ ಎತ್ತಲಿ. ಸರ್ಕಾರ ಬಂದ ಎರಡುವರೆ ವರ್ಷಗಳ ಅವಧಿಯಲ್ಲಿ ಸರ್ಕಾರಿ ಶಾಲೆಗಳಿಗೆ ಒಂದೇ ಒಂದು ಕೊಠಡಿ ನಿರ್ಮಿಸುವುದಾಗಲಿ, ಹಳೆಯ ಕಟ್ಟಡ ದುರಸ್ತಿ ಮಾಡುವುದಾಗಲಿ ಆಗಿಲ್ಲ. ಈ ಪರಿಸ್ಥಿತಿಯ ಕುರಿತು ಸದನದಲ್ಲಿ ಚರ್ಚೆಗೆ ಅವಕಾಶ ಇಲ್ಲದಿರುವುದು ವಿಷಾದನೀಯ ಎಂದರು.ಕಿತ್ತೂರ ಕರ್ನಾಟಕದ ಶಾಲೆಗಳು ತ್ರಿಶಂಕು ಸ್ಥಿತಿಯಲ್ಲಿವೆ. ಒದಗಿಸಿರುವ ಮೂಲಸೌಲಭ್ಯಗಳು ನೆಲ ಕಚ್ಚಿದ್ದು, ಶಿಕ್ಷಕರ ಭರ್ತಿಯೂ ಕುಸಿದಿದೆ. ಮಾನ್ಯತಾ ನವೀಕರಣದ ಹೆಸರಿನಲ್ಲಿ ಪ್ರತಿವರ್ಷ 50 ಸಾವಿರದಿಂದ 2 ಲಕ್ಷದವರೆಗೆ ಹಣ ಕೊಡದಿದ್ದರೆ ನವೀಕರಣವೇ ಆಗುವುದಿಲ್ಲ ಎನ್ನುವ ಪರಿಸ್ಥಿತಿಯಿದೆ. ಅನುದಾನಿತ ಖಾಸಗಿ ಶಾಲೆಯವರು ಶಾಲೆ ನಡೆಸಲು ಹಿಂಜರಿಯುವ ಮಟ್ಟಕ್ಕೆ ಸರ್ಕಾರ ತಂದು ನಿಲ್ಲಿಸಿದೆ. 2006ರಲ್ಲಿ ಡಿ.ಎಂ.ನಂಜುಡಪ್ಪ ಅವಧಿಯಲ್ಲಿ ಜೋಳಿಗೆ ಹಾಕಿ ಪ್ರಾರಂಭಿಸಿದ ಶಾಲೆಗಳು ದಾನಿಗಳು ಕೊಟ್ಟ ಜಮೀನಿನಲ್ಲಿ ಪ್ರಾರಂಭವಾಗಿ ಕನಿಷ್ಠ 25-30 ವರ್ಷಗಳಾಗಿದ್ದು, ಪ್ರಸ್ತುತ ಆ ಜಾಗೆಯ ಎನ್‌ಎ ಆರ್ಡ್‌ರ್‌ ಕಾಫಿ ಕೊಡದಿದ್ದರೆ ಶಾಲೆಗಳನ್ನು ಬಂದು ಮಾಡುತ್ತೇವೆ ಎಂದು ಹೆದರಿಸುವ ಸರ್ಕಾರ, ಇರುವ ಸರ್ಕಾರಿ ಶಾಲೆಗಳಿಗೆ ಅನುದಾನ ಕೊಡದೆ ಶಿಕ್ಷಕರನ್ನು ಕೊಡದೇ ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರದಂತೆ ವ್ಯವಸ್ಥಿತ ಸಂಚು ನಡೆಸುತ್ತಿದೆ ಎನ್ನುವ ಅನುಮಾನ ಬರುತ್ತಿದೆ. 1995ರ ನಂತರ ಶಾಲೆಗಳಿಗೆ ಅನುದಾನವಿಲ್ಲ. ಕನಿಷ್ಠ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶಿಕ್ಷಕರು ಅನುದಾನಕ್ಕೊಳಪಡದೆ ನಿವೃತ್ತಿಯಾಗುವ ಹಂತ ತಪುಪಿದ್ದು ದುರಂತ ಎಂದು ಹೇಳಿದರು.ಕಳೆದ ಎರಡುವರೆ ವರ್ಷದಲ್ಲಿ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯಗಳನ್ನು ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಣ ಇಲಾಖೆಯಲ್ಲಿ 60 ಸಾವಿರಕ್ಕಿಂತಲೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಅದರ ಪರಿಣಾಮವಾಗಿ ಸರ್ಕಾರಿ ಶಿಕ್ಷಣ ವ್ಯವಸ್ಥೆ ಕುಸಿದಿದೆ. ಸರ್ಕಾರಿ ಶಾಲೆಯಲ್ಲಿಯೇ ಅತೀ ದೊಡ್ಡ ಸಂಖ್ಯೆಯಲ್ಲಿ ಓದುವ ಪಠ್ಯಕ್ರಮವಿದೆ. ಆದರೆ ಇಂದು ಅಗಾಧವಾದ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮ್ಯಾಗನೈಟ್ ಶಾಲೆಗಳು, ಕೆಪಿಎಸ್ ಶಾಲೆಗಳನ್ನಾಗಿ ಮಾಡುವ ಮೂಲಕ ಶಾಲೆಗಳನ್ನು ಮುಚ್ಚುವ ವ್ಯವಸ್ಥೆ ಮಾಡುತ್ತದೆ ಎಂದು ಹರಿಹಾಯ್ದರು.ಒಟ್ಟಾರೆ ಶಿಕ್ಷಣ ಕ್ಷೇತ್ರದ ಬಗ್ಗೆ ಸರ್ಕಾರದ ಬದ್ಧತೆ ಏನು ಎಂಬ ಪ್ರಶ್ನೆಗೆ ಉತ್ತರಿಸುವ ಜೊತೆಗೆ ಕಿತ್ತೂರು ಕರ್ನಾಟಕದ ಶಾಲಾ ಶಿಕ್ಷಣ ವ್ಯವಸ್ಥೆಯ ಕುರಿತಾಗಿ ಸಮಗ್ರ ಚರ್ಚೆ ಸರ್ಕಾರಿ ಹಂತದಲ್ಲಾಗಬೇಕು. 100 ಎಕರೆ ಜಾಗವಿರುವ 1000 ಹಾಸಿಗೆಯುಳ್ಳ ಸರಕಾರಿ ಆಸ್ಪತ್ರೆಗಳಿಗೆ ಏಮ್ಸ್ ಮಾನ್ಯತೆ ಕೊಟ್ಟ ಉದಾಹರಣೆಗಳಿದ್ದು, 153 ಎಕರೆ ಸ್ಥಳಾವಕಾಶ ಹೊಂದಿ 1250 ಹಾಸಿಗೆಯುಳ್ಳ ವಿಜಯಪುರ ಜಿಲ್ಲೆಯ ವಿಶಾಲ ಸರಕಾರಿ ಆಸ್ಪತ್ರೆಗೆ ಏಮ್ಸ್ ಮಾನ್ಯತೆ ನಿಡದಿರುವುದು ಸರ್ಕಾರದ ಮಲತಾಯಿ ಧೋರಣೆಯಾಗಿದೆ. ಕೇಂದ್ರದ ಮಾಜಿ ಆರೋಗ್ಯ ಸಚಿವರು ವಿಜಯಪುರ ಜಿಲ್ಲೆಗೆ ಏಮ್ಸ್ ಪ್ರಸ್ತಾವನೆ ಸಲ್ಲಿಸುವಂತೆ ಕರ್ನಾಟಕ ಸರಕಾರಕ್ಕೆ ಮನವಿ ಮಾಡಿದ್ದರು. ರಾಯಚೂರಿಗೆ ಹೋದಾಗ ಏಮ್ಸ್ ಆಸ್ಪತ್ರೆ ಸ್ಥಾಪಿಸುವ ವಾಗ್ದಾನ ಮಾಡುವ ಸಿಎಂ ಸಿದ್ದರಾಮಯ್ಯ ಏಮ್ಸ್ ಅರ್ಹತೆಗೆ ಎಲ್ಲ ಅನುಕೂಲವಿದ್ದ ವಿಜಯಪುರ ಜಿಲ್ಲೆಗೆ ನೀಡಲು ಹಿಂಜರೆಯುತ್ತಿರುವ ಕಾರಣವಾದರು ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.ಈ ವೇಳೆ ನಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಸಿದ್ಧರಾಮ ಆನಗೊಂಡ, ಸಾಯಬಣ್ಣ ದೇವರಮನಿ, ರಾಜು ಪಾಟೀಲ, ಮಲ್ಲು ಪೂಜಾರಿ, ಶಿವಾನಂದ ರೋಡಗಿ ಸೇರಿದಂತೆ ಅನೇಕರಿದ್ದರು.