ಸಾರಾಂಶ
ದೇಶಾದ್ಯಂತ ಯಾವ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇಲ್ಲವೋ ಅಲ್ಲೆಲ್ಲಾ ರಾಜ್ಯಪಾಲರ ಮೂಲಕ ಆಳ್ವಿಕೆ ಮಾಡಲು ಹೊರಟಿದ್ದಾರೆ. ರಾಜ್ಯಪಾಲರು ಬಿ.ಕೆ.ಹರಿಪ್ರಸಾದ್ ಅವರ ವಿಚಾರಣೆ ಮಾಡುವಂತೆ ಪೊಲೀಸರಿಗೆ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
‘ದೇಶಾದ್ಯಂತ ಯಾವ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇಲ್ಲವೋ ಅಲ್ಲೆಲ್ಲಾ ರಾಜ್ಯಪಾಲರ ಮೂಲಕ ಆಳ್ವಿಕೆ ಮಾಡಲು ಹೊರಟಿದ್ದಾರೆ. ರಾಜ್ಯಪಾಲರು ಬಿ.ಕೆ.ಹರಿಪ್ರಸಾದ್ ಅವರ ವಿಚಾರಣೆ ಮಾಡುವಂತೆ ಪೊಲೀಸರಿಗೆ ತಿಳಿಸಿದ್ದಾರೆ.
ಕಾನೂನು ಸುವ್ಯವಸ್ಥೆಗೂ ರಾಜ್ಯಪಾಲರಿಗೂ ಏನು ಸಂಬಂಧ?’ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.ಅಯೋಧ್ಯೆಗೆ ಹೋಗುವ ಭಕ್ತಾದಿಗಳಿಗೆ ರಕ್ಷಣೆ ಕೊಡುವಂತೆ ವಿಧಾನಪರಿಷತ್ ಸದಸ್ಯ ಹರಿಪ್ರಸಾದ್ ಸಲಹೆ ನೀಡಿದ್ದರು.
ಇದನ್ನು ಮುಂದಿಟ್ಟುಕೊಂಡು ರಾಜ್ಯಪಾಲರು ಯಾಕೆ ಪದೇ ಪದೇ ಮಾಹಿತಿ ಕೇಳುತ್ತಿದ್ದಾರೆ. ಹರಿಪ್ರಸಾದ್ ವಿಚಾರಣೆಗೆ ಯಾಕೆ ಹೇಳಿದ್ದಾರೆ? ರಾಜ್ಯ ಸರ್ಕಾರ ಹಾಗೂ ಹರಿಪ್ರಸಾದ್ಗೆ ಮುಜುಗರ ತರುವಂತೆ ರಾಜ್ಯಪಾಲರಿಗೆ ಕೇಂದ್ರದಿಂದ ಏನಾದರೂ ನಿರ್ದೇಶನ ಬಂದಿದೆಯೇ ಎಂದು ಪ್ರಶ್ನಿಸಿದರು.
ರಾಜ್ಯಪಾಲರು ಪದೇ ಪದೇ ಈ ಬಗ್ಗೆ ನಿರ್ದೇಶನ ನೀಡುತ್ತಿದ್ದಾರೆ. ತನಿಖೆ ಆಗುತ್ತಿದೆಯೇ ಅಥವಾ ಇಲ್ಲವೇ ಎಂದು ಪದೇ ಪದೇ ಕೇಳುತ್ತಿದ್ದಾರೆ. ಹೀಗಾಗಿ ರಾಜ್ಯಪಾಲರ ಮಾತಿಗೆ ಗೌರವ ಕೊಟ್ಟು ಗೃಹ ಇಲಾಖೆಯವರು ಹರಿಪ್ರಸಾದ್ರನ್ನು ಕೇಳಿದ್ದಾರೆ.
ರಾಜ್ಯ ಸರ್ಕಾರವೇ ಪೊಲೀಸರನ್ನು ಕಳುಹಿಸಿ ಹರಿಪ್ರಸಾದ್ಗೆ ಮುಜುಗರ ಮಾಡಿಲ್ಲ. ಈ ವಿಚಾರದಲ್ಲಿ ಯಾಕೆ ರಾಜ್ಯಪಾಲರು ಇಷ್ಟು ಆಸಕ್ತಿ ತೋರುತ್ತಿದ್ದಾರೆ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆಯೇ? ಎಂದರು.
ಬಿಜೆಪಿಯದ್ದು ಒಂದು ಆಡಳಿತ ಮಾದರಿ ಇದೆ. ಎಲ್ಲೆಲ್ಲಿ ತಾವು ಅಧಿಕಾರದಲ್ಲಿ ಇಲ್ಲವೋ ಅಲ್ಲಿ ರಾಜ್ಯಪಾಲರ ಮೂಲಕ ಆಳ್ವಿಕೆ ಮಾಡಲು ಹೊರಟಿದ್ದಾರೆ. ನಾವು ಏನೆ ಮಾಡಿದರೂ ಕಾನೂನಿನ ಚೌಕಟ್ಟಿನಲ್ಲಿ ಮಾಡುತ್ತೇವೆ.
ಹಿಂದಿನ ಸರ್ಕಾರ ಇದ್ದಾಗ ರಾಜ್ಯಪಾಲರ ಕಚೇರಿ ಹಸ್ತಕ್ಷೇಪ ಮಾಡಿರಲಿಲ್ಲ. ಈ ಬಾರಿ ಮಾತ್ರ ಯಾಕೆ ಹೀಗೆ ಆಗುತ್ತಿದೆ ಎಂಬುದನ್ನು ಸಾರ್ವಜನಿಕರು ಗಮನಿಸಬೇಕು ಎಂದರು.