ಸಾರಾಂಶ
ಸೋಮರಡ್ಡಿ ಅಳವಂಡಿ ಕೊಪ್ಪಳ
ಪ್ರಿಯಾಂಕಾ ಗಾಂಧಿ ಕೊಪ್ಪಳದಿಂದ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾಹಿತಿ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿಯಲ್ಲಿ ತೀವ್ರ ಸಂಚಲನವನ್ನು ಮೂಡಿಸಿದೆ. ಇದಲ್ಲದೇ ಎರಡೂ ಪಕ್ಷಗಳಲ್ಲಿ ಹಲವಾರು ಪ್ರಶ್ನೆ, ಜಿಜ್ಞಾಸೆಗಳಿಗೂ ಕಾರಣವಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಗಮನಕ್ಕೂ ತಾರದೇ ಎಐಸಿಸಿ ಇಂತಹ ತೀರ್ಮಾನ ಹಾಗೂ ಅದಕ್ಕೆ ಪೂರ್ವಭಾವಿಯಾಗಿ ಸಮೀಕ್ಷೆ ನಡೆಸಿತೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಈ ಕುರಿತು ಸ್ಥಳೀಯ ಮಟ್ಟದಲ್ಲಿ ಪಕ್ಷದಲ್ಲಿ ಭಾರೀ ಚರ್ಚೆಯೂ ನಡೆಯುತ್ತಿದೆ. ಎಐಸಿಸಿಗೆ ಈ ಕುರಿತು ವರದಿ ನೀಡಿದ್ದು ಯಾರು, ಸಮೀಕ್ಷೆ ಮಾಡಿದ್ದು ಯಾರು? ಎಂಬ ಪ್ರಶ್ನೆಗಳೂ ಹುಟ್ಟಿಕೊಂಡಿವೆ.
ಬಿಜೆಪಿ ಪಾಳೆಯದಲ್ಲೂ ಇದು ಸಂಚಲನಕ್ಕೆ ಕಾರಣವಾಗಿದ್ದು, ಈಗಾಗಲೇ ಟಿಕೆಟ್ಗಾಗಿ ಪ್ರಯತ್ನ ಮಾಡಿದವರಲ್ಲಿ ತಳಮಳ ಶುರುವಾಗಿದೆ. ಪ್ರಿಯಾಂಕಾ ಸ್ಪರ್ಧೆ ನಿಜವಾದರೆ ಕ್ಷೇತ್ರದ ಲೆಕ್ಕಾಚಾರದಲ್ಲೂ ಭಾರೀ ಬದಲಾವಣೆ ಆಗಲಿದೆ. ಬಿಜೆಪಿಯೂ ಪ್ರಿಯಾಂಕಾಗೆ ಠಕ್ಕರ್ ನೀಡುವ ಸರಿಸಮಾನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂಬ ಚರ್ಚೆಯೂ ಮುಂಚೂಣಿಗೆ ಬಂದಿದೆ.ಪ್ರಿಯಾಂಕ ಗಾಂಧಿ ಸ್ಪರ್ಧೆ ಕುರಿತು ವಿಧಾನಸಭಾ ಚುನಾವಣೆಗೂ ಮುನ್ನವೇ ಎಐಸಿಸಿಯಲ್ಲಿ ಚರ್ಚೆಯಾಗುತ್ತಿತ್ತು. ಈ ಕಾರಣಕ್ಕಾಗಿಯೇ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಿಯಾಂಕಾ ಕನಕಗಿರಿಯಲ್ಲಿ ಪ್ರಚಾರ ಕೈಗೊಂಡರು. ಬಳಿಕ ಪಕ್ಷದಿಂದ ಆಂತರಿಕ ಮಾಹಿತಿ ಸಂಗ್ರಹಿಸಲಾಯಿತು. ಚುನಾವಣೆ ಫಲಿತಾಂಶ ಬಂದ ಬಳಿಕ ಈ ಪ್ರಕ್ರಿಯೆ ವೇಗ ಪಡೆದುಕೊಂಡಿತು ಎಂಬ ಮಾತು ಕೇಳಿ ಬರುತ್ತಿದೆ.
ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಲ್ಲಿ 6 ಕಡೆ ಕಾಂಗ್ರೆಸ್ ಶಾಸಕರೇ ಇದ್ದಾರೆ. ಇನ್ನು ಒಂದರಲ್ಲಿ ಬಿಜೆಪಿ, ಮತ್ತೊಂದರಲ್ಲಿ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಜನಾರ್ದನ ರೆಡ್ಡಿ ಗೆಲವು ಸಾಧಿಸಿದ್ದಾರೆ.ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಮೂರು ಬಾರಿ ಬಿಜೆಪಿ ಜಯ ಸಾಧಿಸುವ ಮೂಲಕ ಹ್ಯಾಟ್ರಿಕ್ ಬಾರಿಸಿದೆ. ಹೀಗಿದ್ದರೂ ಕಾಂಗ್ರೆಸ್ ಹೇಗೆ ಸೂಕ್ತ ಎನ್ನುವ ಪ್ರಶ್ನೆಯೂ ಇದ್ದೇ ಇದೆ. ಆದರೂ ಈ ರೀತಿಯ ಸಾಹಸಕ್ಕೆ ಎಐಸಿಸಿ ಮುಂದಾಗಿರುವುದು ಸದ್ಯದ ಕುತೂಹಲ.
ಸ್ವಾಗತಕ್ಕೆ ಸಜ್ಜು: ಪ್ರಿಯಾಂಕ ಗಾಂಧಿ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಸುದ್ದಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಸಂಚಲ ಉಂಟು ಮಾಡಿದೆ. ಅನೇಕರು ಪ್ರಿಯಾಂಕ ಬಂದರೆ ಸ್ವಾಗತ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಇಂತಹ ಅವಕಾಶ ಕೊಪ್ಪಳಕ್ಕೆ ಮತ್ತೆ ಬರಲು ಸಾಧ್ಯವೇ ಇಲ್ಲ. ಹೀಗಾಗಿ, ಒಗ್ಗಟ್ಟಾಗಿ ಹೋಗಿ ಮನವಿ ಮಾಡಲು ಜಿಲ್ಲಾ ಕಾಂಗ್ರೆಸ್ ಸಮಿತಿ ಆಂತರಿಕವಾಗಿ ತೀರ್ಮಾನ ಮಾಡಿದೆ.ಬಿಜೆಪಿಯಲ್ಲೂ ಇದು ಸಂಚಲನ ಮೂಡಿಸಿದ್ದು, ಪ್ರಿಯಾಂಕ ಗಾಂಧಿ ಸ್ಪರ್ಧೆ ಮಾಡಿದರೆ ಯಾರನ್ನು ಅಖಾಡಕ್ಕೆ ಇಳಿಸಬೇಕು ಎನ್ನುವ ಕುರಿತು ಬಿಜೆಪಿಯಲ್ಲಿ ಚಿಂತನೆ ನಡೆದಿದೆ. ಬಿಜೆಪಿ ರಾಜ್ಯ ನಾಯಕರು ಅಥವಾ ರಾಷ್ಟ್ರೀಯ ನಾಯಕರಲ್ಲಿಯೇ ಯಾರನ್ನಾದರೂ ಅಖಾಡಕ್ಕೆ ಇಳಿಸಬೇಕು. ಯಾವುದೇ ಕಾರಣಕ್ಕೂ ಕ್ಷೇತ್ರ ಬಿಟ್ಟು ಕೊಡದಂತೆ ತಯಾರಿ ಮಾಡಬೇಕು ಎಂದು ಬಿಜೆಪಿ ಪಾಳೆಯಲ್ಲಿ ಚರ್ಚೆಯಾಗುತ್ತಿದೆ.
ಪ್ರಿಯಾಂಕ ಗಾಂಧಿ ಕೊಪ್ಪಳದಿಂದ ಸ್ಪರ್ಧೆ ಮಾಡುವುದಾದರೆ ನಮಗೆ ಸಂತೋಷ. ಕಾಂಗ್ರೆಸ್ ನಾಯಕರೆಲ್ಲರೂ ಒಗ್ಗೂಡಿ ಅವರ ಗೆಲುವಿಗೆ ಶ್ರಮಿಸುತ್ತೇವೆ. ಅವರಿಗೆ ರೆಡ್ ಕಾರ್ಪೆಟ್ ಹಾಕಿ, ಸ್ವಾಗತಿಸುತ್ತೇವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು.ಪ್ರಿಯಾಂಕ ಗಾಂಧಿ ಬಂದು ಸ್ವರ್ಧೆ ಮಾಡುವುದಾದರೆ ನಾವು ಸ್ವಾಗತಿಸುತ್ತೇವೆ. ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್ ಗಾಳಿ ಶುರುವಾಗಿದೆ. ಎಐಸಿಸಿ ನಡೆಸಿದ ಸರ್ವೇಯಲ್ಲೇ ಇದು ಗೊತ್ತಾಗಿರುವುದರಿಂದ ಇಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.