ಭಗವದ್ಗೀತೆಯ ತತ್ವಾದರ್ಶಗಳು ಇಂದಿಗೂ ಸಲ್ಲುತ್ತದೆ: ಅನಂತಕೃಷ್ಣ ಶೆಣೈ

| Published : Dec 28 2023, 01:46 AM IST

ಸಾರಾಂಶ

ಉಡುಪಿ, ದ.ಕ. ಹಾಗೂ ಕಾಸರಗೋಡು ಜಿಲ್ಲಾ ಮಟ್ಟದ ಭಗವದ್ಗೀತಾ ಶ್ಲೋಕ ಕಂಠಪಾಠ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಭಗವದ್ಗೀತೆ ಎನ್ನುವುದು ಸ್ವಯಂ ದೇವವಾಣಿ. ಗೀತೆಯಲ್ಲಿ ಹೇಳಿದ ತತ್ವಾದರ್ಶಗಳು ಸರ್ವಕಾಲಕ್ಕೂ ಸಲ್ಲುವಂಥದ್ದಾಗಿದ್ದು ಅದರ ಆಳ ಅಧ್ಯಯನದಿಂದ ಆತ್ಮದರ್ಶನ ಸಾಧ್ಯವಿದೆ. ಗೀತೆಯು ಹಾಕಿಕೊಟ್ಟ ಹಾದಿಯಲ್ಲಿ ನಮ್ಮ ಬದುಕನ್ನು ರೂಪಿಸುವುದರಲ್ಲಿ ಸಾರ್ಥಕತೆ ಇದೆ ಎಂದು ಉದ್ಯಮಿ ರೆಂಜಾಳ ಅನಂತಕೃಷ್ಣ ಶೆಣೈ ಹೇಳಿದರು. ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯ ಸಭಾಂಗಣದಲ್ಲಿ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಸ್ಮರಣಾರ್ಥ ಹೊಸಸಂಜೆ ಬಳಗ ಆಯೋಜಿಸಿದ್ದ ಉಡುಪಿ, ಮಂಗಳೂರು, ಕಾಸರಗೋಡು ಜಿಲ್ಲಾಮಟ್ಟದ ಶ್ರೀಮದ್ ಭಗವದ್ಗೀತಾ ಶ್ಲೋಕ ಕಂಠಪಾಠ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಶಾಲಾ ಸಂಚಾಲಕ ನರೇಂದ್ರ ಕಾಮತ್, ಮುಖ್ಯಶಿಕ್ಷಕಿ ವೃಂದಾ ಶೆಣೈ, ಭಾರತಿ ಸೇವಾ ಸಮಿತಿ ಉಪಾಧ್ಯಕ್ಷ, ಜವುಳಿ ಉದ್ಯಮಿ ಹರಿಪ್ರಸಾದ ಪ್ರಭು, ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ರವಿಕಿರಣ್ ಕಾಮತ್, ವೆಂಕಟೇಶ ಕಾಮತ್, ತೀರ್ಪುಗಾರರಾದ ಶೈಲಜಾ ಕೆ. ಭಟ್, ಅಕ್ಷತಾ ಸಂದೀಪ್ ಜೈನ್ ಉಪಸ್ಥಿತರಿದ್ದು ಶುಭ ಹಾರೈಸಿದರು. ಹೊಸಸಂಜೆ ಬಳಗದ ಅಧ್ಯಕ್ಷ ಆರ್ ದೇವರಾಯ ಪ್ರಭು ಕಾರ್ಯಕ್ರಮ ಸಂಯೋಜಿಸಿದರು .ರಮೇಶ್ ಪೂಜಾರಿ ವಂದಿಸಿದರು.