ಕನ್ನಡಪ್ರಭ ವಾರ್ತೆ ಮಂಡ್ಯ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.ಕರ್ನಾಟಕ ಶಾಲಾ ಶಿಕ್ಷಣದಲ್ಲಿ ಕಡ್ಡಾಯವಾಗಿ ಹಿಂದಿ ಕಲಿಕೆ ಮತ್ತು ಹಿಂದಿ 100 ಅಂಕಗಳ ಪರೀಕ್ಷೆ ವಿಷಯವಾಗಿರುವುದು ಹಿಂದಿ ಹೇರಿಕೆಗೆ ಮುಖ್ಯ ನೆಲೆಯಾಗಿದೆ. ಭಾರತದ ಸಂವಿಧಾನದಡಿ ಬರುವ ಬಿಹಾರ ರಾಜ್ಯದಲ್ಲಿ ಪಾಸ್ ವಿಥೌಟ್ ಇಂಗ್ಲಿಷ್ (ಪಿಡಬ್ಲ್ಯೂಇ ) ಎಂಬ ಕಾನೂನಿದೆ. ಕರ್ನಾಟಕ ಕೂಡ ಭಾರತ ಸಂವಿಧಾನ ಅಡಿಯಲ್ಲಿ ಇರುವ ಮತ್ತೊಂದು ರಾಜ್ಯ ಆಗಿರುವುದರಿಂದ ಪಿಡಬ್ಲ್ಯೂಇ ರೀತಿಯೇ ಇಲ್ಲಿ ಪಾಸ್ ವಿಥೌಟ್ ಹಿಂದಿ ( ಪಿಡಬ್ಲ್ಯೂಇ ) ಕಾನೂನು ಮಾಡಲು ಸಾಧ್ಯವಿರುವುದರಿಂದ ಈ ಕೂಡಲೇ 2026 ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಎಸ್ ಎಸ್ ಎಲ್ ಸಿ ಹಿಂದಿ ಪರೀಕ್ಷೆ ರದ್ದು ಪಡಿಸಬೇಕು ಎಂದು ಆಗ್ರಹಪಡಿಸಿದರು.
ಕರ್ನಾಟಕದಲ್ಲಿ ಕಳೆದ ಬಾರಿ ಎಸ್ ಎಸ್ ಎಲ್ ಸಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಿಂದಿ ವಿಷಯದಲ್ಲಿ ನಪಾಸಾಗಿ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಹಿಂದಿ ತೊಡಕಾಗಿದೆ. ತ್ರಿಭಾಷಾ ಸೂತ್ರದ ಹೆಸರಲ್ಲಿ ಹಿಂದಿ ಹೇರಿಕೆ ಸರಿಯಾದ ಕ್ರಮವಲ್ಲ. ಶಿಕ್ಷಣ ನೀತಿಯಲ್ಲಿ ತ್ರಿಭಾಷಾ ಸೂತ್ರದ ಬದಲು ದ್ವಿಭಾಷಾ ನೀತಿ ಅಳವಡಿಸಲು ಸಲಹೆ ನೀಡಲಾಗಿದೆ. ರಾಜ್ಯ ಸರ್ಕಾರ ಕೂಡಲೇ ಹಿಂದಿ ಕೈಬಿಟ್ಟು ದ್ವಿಭಾಷಾ ನೀತಿ ಜಾರಿಗೊಳಿಸಬೇಕು. ಇಲ್ಲವಾದಲ್ಲಿ ಕನ್ನಡದ ಬೆಳವಣಿಗೆಗಾಗಿ ರಾಜ್ಯಾದ್ಯಂತ ಹಿಂದಿ ಪರೀಕ್ಷಾ ಕೊಠಡಿಗೆ ನುಗ್ಗಿ ಪರೀಕ್ಷೆ ನಡೆಸುವುದನ್ನು ತಡೆಯುವುದಾಗಿ ಎಚ್ಚರಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ. ನಾವು ದ್ರಾವಿಡ ಕನ್ನಡಿಗರು ಸಂಘಟನೆಯ ಸಚಿನ್, ಕರುನಾಡ ಸೇವಕರು ಸಂಘಟನೆಯ ರಾಜ್ಯವಕ್ತಾರ ಎಂ.ಬಿ.ನಾಗಣ್ಣಗೌಡ. ಎಸ್ ಕೆ ರಾಜೂಗೌಡ.ರಾಜೇಂದ್ರ ಬಾಬು ಮೊದಲಾದವರಿದ್ದರು.
3ಕೆಎಂಎನ್ಡಿ-3
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ವಿವಿಧ ಕನ್ನಡಪರ ಸಂಘಟನೆಗಳು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.