ಶಿಗ್ಗಾಂವಿ: ತಾಲೂಕಿನ ಕೃಷಿ ಅಧಿಕಾರಿಗಳು ಬೀಜದ ಜೊತೆಗೆ ಗೊಬ್ಬರದ ದಾಸ್ತಾನು ಮಾಡಿಕೊಳ್ಳಬೇಕು, ಬೇರೆ ತಾಲೂಕಿಗೆ ಸರಬರಾಜಿನ ಕುರಿತು ಗಮನಕ್ಕೆ ಬಂದರೆ ಕ್ರಮ ಖಂಡಿತ ಎಂದು ಶಾಸಕ ಯಾಸೀರ್ ಅಹ್ಮದ್‌ಖಾನ್ ಪಠಾಣ್ ಎಚ್ಚರಿಸಿದರು.ಪಟ್ಟಣದ ಎಪಿಎಂಸಿಯಲ್ಲಿ ರೈತರಿಗೆ ಮುಂಗಾರು ಹಂಗಾಮಿನ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.ಈಗ ರೈತರಿಗೆ ಅವಶ್ಯವಿರುವ ಬೀಜ ಮತ್ತು ಗೊಬ್ಬರವನ್ನು ಸರಿಯಾದ ರೀತಿಯಲ್ಲಿ ಪೂರೈಕೆ ಮಾಡಬೇಕು, ಕೇಂದ್ರ ಸರಕಾರ ತನ್ನ ಅಸಾಮರ್ಥ್ಯವನ್ನು ದೇಶಭಕ್ತಿ ಎಂದು ಬಿಂಬಿಸಿಕೊಂಡು ಜನರ ಮೇಲೆ ಅದರ ಹೊರೆ ಹಾಕುತ್ತಿದೆ ಎಂದು ಟೀಕಿಸಿದರು.ಡೀಸೆಲ್, ಪೆಟ್ರೋಲ್ ಇಲ್ಲದೇ ಜನತೆ ಕೆಲಸ ಮಾಡಲು ಸಾಧ್ಯವಿಲ್ಲ, ಬಂಗಾರವಿಲ್ಲದೇ ಮದುವೆ ಮಾಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಮೋದಿಯವರು ಗೊಬ್ಬರ ಉಪಯೋಗಿಸಬೇಡಿ. ಸಗಣಿಯ ಗೊಬ್ಬರ ಅಷ್ಟೇ ಉಪಯೋಗಿಸಿ ಎಂದು ಹೇಳಿದರೆ ಹೇಗೆ? ಎಂಬ ಭಯ ಈಗಲೇ ನಮಗೆ ಮತ್ತು ನಮ್ಮ ರೈತರಿಗೆ ಕಾಡುತ್ತಿದೆ ಎಂದರು.ರಾಜ್ಯ ಸರಕಾರ ಗೊಬ್ಬರ, ಡಿಸೇಲ್, ಬಂಗಾರ ಯಾವುದನ್ನೂ ಕೊಡುವುದಿಲ್ಲ. ಕೇಂದ್ರ ಸರಕಾರ ಮಾತ್ರ ಇದೆಲ್ಲವನ್ನು ಕೊಡುತ್ತದೆ. ಆದ್ದರಿಂದ ಕೇಂದ್ರ ಸರಕಾರ ಬಹಳಷ್ಟು ಗಿಮಿಕ್ ಮಾಡಿ ತನ್ನ ಅಸಾಮರ್ಥ್ಯವನ್ನು ರಾಜ್ಯ ಸರಕಾರದ ಮೇಲೆ ಹಾಕಲು ಮತ್ತು ಜನರ ಮೇಲೆ ಹೇರಲು ಪ್ರಯತ್ನಿಸುತ್ತದೆ ಎಂದರು.ತಹಶೀಲ್ದಾರ್ ಯಲ್ಲಪ್ಪ ಗೊಣೆಣ್ಣವರ, ಕೃಷಿ ಅಧಿಕಾರಿ ಕೊಟ್ರೇಶಿ ಗೆಜ್ಜಲಿ, ಗುಡ್ಡಪ್ಪ ಜಲದಿ, ಹನುಮರೆಡ್ಡಿ ನಡುವಿನಮನಿ, ಶಂಕರಗೌಡ ಪಾಟೀಲ, ಬಾಬರ್ ಬೋವಾಜಿ, ರೈತ ಮುಖಂಡರಾದ ಬಸಲಿಂಗಪ್ಪ ನರಗುಂದ, ಮಂಜುನಾಥ ಹಾವೇರಿ, ಈರಣ್ಣ ಸಮಗೊಂಡ, ಶಂಕರಗೌಡ ಪಾಟೀಲ, ಆನಂದ ಕೆಳಗಿನಮನಿ, ಗೌಸಖಾನ್ ಮುನಶಿ, ಚಂದ್ರು ಕೊಡ್ಲಿವಾಡ, ಮುನ್ನಾ ಲಕ್ಷ್ಮೇಶ್ವರ, ವಸಂತಾ ಬಾಗೂರ, ಮುನ್ನಾ ಬಿಸಿ ಸೇರಿದಂತೆ ಇತರರು ಇದ್ದರು. ಸೋಯಾಬಿನ್, ಶೇಂಗಾ, ಗೋವಿನಜೋಳ ಸೇರಿದಂತೆ ನಮ್ಮಲ್ಲಿ ಕ್ರಾಫ್ಟ ಬೆಳೆಗಳಿಗೆ ಬೀಜ ದಾಸ್ತಾನು ಚೆನ್ನಾಗಿದೆ. ಬೀಜಗಳ ಪೂರೈಕೆಯ ಜವಾಬ್ದಾರಿ ನಮ್ಮ ರಾಜ್ಯ ಸರಕಾರದ್ದಾಗಿದ್ದು, ಅದನ್ನು ಯಾವುದೇ ಕೊರತೆಯಾಗದಂತೆ ಪೂರೈಕೆ ಮಾಡಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಟ್ರ್ಯಾಕ್ಟರ್ ತಾಂತ್ರಿಕ ಬಳಕೆಯನ್ನು ಮಾಡಿ ಕೃಷಿ ಮಾಡುವ ದಿನಮಾನದಲ್ಲಿ ಕ್ಯಾನ್‌ಗಳಲ್ಲಿ ಡೀಸೆಲ್‌ ನೀಡುವುದಿಲ್ಲ ಅಂತಾ ಹೇಳಿದರೆ ಹೇಗೆ, ಆದರೆ ಗೊಬ್ಬರ ಪೂರೈಕೆಯ ಜವಾಬ್ದಾರಿ ಕೇಂದ್ರ ಸರ್ಕಾರದ್ದಾಗಿದ್ದು ಗೊಬ್ಬರದ ಪೂರೈಕೆಯಲ್ಲಿ ತೊಂದರೆಯಾದರೆ ಕೇಂದ್ರ ಸರಕಾರ ಪರಿಹಾರ ನೀಡಬೇಕು ಎಂದು ಶಾಸಕ ಯಾಸೀರ್ ಅಹ್ಮದ್‌ಖಾನ್ ಪಠಾಣ್ ಹೇಳಿದರು.