ಶರಣರ ನೈಜ ಆದರ್ಶಗಳ ಅಧ್ಯಯನಕ್ಕೆ ಮುಂದಾಗಿ

| Published : Jul 11 2024, 01:33 AM IST

ಸಾರಾಂಶ

ಪ್ರಸಕ್ತ ದಿನಗಳಲ್ಲಿ ಬಸವಣ್ಣ ಮತ್ತು ಶರಣರ ಮೂಲ ಆದರ್ಶಗಳನ್ನು ಮರೆಮಾಚಲಾಗುತ್ತಿದೆ. ಹಾಗಾಗಿ ಶರಣರು ರಚಿಸಿದ ಮೂಲ ವಚನಗಳ ಆಧಾರದ ಮೇಲೆ ಶರಣರ ಮತ್ತು ಬಸವಣ್ಣನವರ ನೈಜ ಆದರ್ಶಗಳ ಅಧ್ಯಯನಕ್ಕೆ ಮುಂದಾಗಬೇಕು ಎಂದು ಗದಗಿನ ಶಿವಾನಂದ ಬ್ರಹ್ಮಮಠದ ಜಗದ್ಗುರು ಸದಾಶಿವಾನಂದ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪ್ರಸಕ್ತ ದಿನಗಳಲ್ಲಿ ಬಸವಣ್ಣ ಮತ್ತು ಶರಣರ ಮೂಲ ಆದರ್ಶಗಳನ್ನು ಮರೆಮಾಚಲಾಗುತ್ತಿದೆ. ಹಾಗಾಗಿ ಶರಣರು ರಚಿಸಿದ ಮೂಲ ವಚನಗಳ ಆಧಾರದ ಮೇಲೆ ಶರಣರ ಮತ್ತು ಬಸವಣ್ಣನವರ ನೈಜ ಆದರ್ಶಗಳ ಅಧ್ಯಯನಕ್ಕೆ ಮುಂದಾಗಬೇಕು ಎಂದು ಗದಗಿನ ಶಿವಾನಂದ ಬ್ರಹ್ಮಮಠದ ಜಗದ್ಗುರು ಸದಾಶಿವಾನಂದ ಸ್ವಾಮೀಜಿ ನುಡಿದರು.

ನಗರದ ಕನ್ನಡ ಭವನದಲ್ಲಿ ಪ್ರಬುದ್ಧ ಭಾರತ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಕನ್ನಡ ಭವನ ಸಂಯುಕ್ತಾಶ್ರಯದಲ್ಲಿ ಜರುಗಿದ ವಚನ ದರ್ಶನ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶರಣರಷ್ಟು ಸಮಾಜ ಮತ್ತು ಭಕ್ತಿಯ ಬಗ್ಗೆ ತಿಳಿಯದ ಅನೇಕ ಮೂಢರು, ಬಸವಣ್ಣ ಮತ್ತು ಶರಣರ ವಚನಗಳನ್ನು ತಪ್ಪಾದ ಪ್ರಯೋಗ ಮತ್ತು ವ್ಯಾಖ್ಯಾನಿಸುವ ಮೂಲಕ ಶರಣರ ಸಂದೇಶಗಳನ್ನು ಪ್ರಸಕ್ತ ಪೀಳಿಗೆಗೆ ತಪ್ಪಾಗಿ ಅರ್ಥೈಸಲಾಗುತ್ತಿರುವುದು ಖೇದಕರ ಎಂದರು.ಶರಣರ ವಚನಗಳು ಇಂದು ಸಮಾಜಕ್ಕೆ ಲಭ್ಯವಾಗಿರುವುದಕ್ಕೆ ವಚನ ಪಿತಾಮಹ ಫ.ಗು.ಹಳಕಟ್ಟಿ ಮತ್ತು ಭೂಶಿಮಠರ ಕಾರ್ಯ ಅನನ್ಯವಾಗಿದೆ. ಬಹಳಷ್ಟು ಮಹನೀಯರ ಅಪಾರ ಶ್ರಮ ಮತ್ತು ತ್ಯಾಗದ ಫಲದಿಂದ ಎಲ್ಲೆಲ್ಲೊ ಕಳೆದು ಹೋಗಿದ್ದ ಶರಣರ ವಚನಗಳು ನಮಗೆ ಓದಲು ಮತ್ತು ಅಧ್ಯಯನ ಮಾಡಲು ಲಭ್ಯವಾಗಿವೆ. ಆದ್ದರಿಂದ ಶರಣರ ವಚನಗಳನ್ನು ಓದುವುದರ ಮತ್ತು ಅಧ್ಯಯನದ ಮೂಲಕ ನಾವೆಲ್ಲರೂ ಶರಣ ಆಶಯಗಳನ್ನು ಅರಿಯಲು ಮುಂದಾಗಬೇಕು ಎಂದು ತಿಳಿಸಿದರು.ಅಲ್ಲಮಪ್ರಭು ಅವರು ಬಸವಣ್ಣನನ್ನು ಯುಗದ ಉತ್ಸಾಹ ಎಂದು ಕರೆದಿದ್ದಾರೆ. ಶರಣೆ ಅಕ್ಕ ನಾಗಮ್ಮ ತಮ್ಮ ವಚನಗಳಲ್ಲಿ ಬಸವಣ್ಣನವರ ಕಾರ್ಯ ಮತ್ತು ಆದರ್ಶಗಳನ್ನು ಅತ್ಯಂತ ನೈಜ ರೂಪದಲ್ಲಿ ವಿವರಿಸಿದ್ದಾರೆ. ಬಸವಣ್ಣನವರನ್ನು ಅರಿಯಲು ಅಕ್ಕ ನಾಗಮ್ಮ ಅವರ ವಚನಗಳನ್ನು ವಾಚಿಸಬೇಕು. ಆ ಶಿವಶರಣರ ಪಾಂಡಿತ್ಯಕ್ಕೆ ಸಮ ಪ್ರಸಕ್ತ ದಿನಗಳಲ್ಲಿ ನಾವು ಯಾರೂ ಇಲ್ಲ. ಶರಣರ ವಚನಗಳನ್ನು ಮೂಲ ರೂಪದಲ್ಲಿರುವಂತೆ ಓದಲು ಮತ್ತು ಅಧ್ಯಯನಕ್ಕೆ ನಾವೆಲ್ಲರೂ ಮುಂದಾಗಬೇಕು ಎಂದು ಸಲಹೆ ನೀಡಿದರು.ವಿಶ್ರಾಂತ ಇಂಗ್ಲಿಷ್‌ ಪ್ರಾಧ್ಯಾಪಕಿ ಡಾ.ಗುರುದೇವಿ ಹುಲೆಪ್ಪನವರಮಠ ಮುಖ್ಯ ಅತಿಥಿಗಳಾಗಿ ಮಾತನಾಡಿ, ವಚನ ದರ್ಶನ ಕೃತಿಯ ಪರಿಚಯ ಮಾಡಿಕೊಟ್ಟರು. ಶರಣ ಪರಂಪರೆ, ಭಕ್ತಿ ಮತ್ತು ಕಾಯಕ ಮತ್ತು ಮಹಿಳಾ ಸಮಾನತೆ, ಸಮಾಜದ ಸಾಮರಸ್ಯಕ್ಕಾಗಿ ಶರಣರು ನೀಡಿದ ಕೊಡುಗೆ ಬಗ್ಗೆ ಸವಿವರವಾದ ಮಾಹಿತಿ ವಚನ ದರ್ಶನ ಕೃತಿ ಒಳಗೊಂಡಿದೆ. ಸಾಮಾನ್ಯ ಲಿಂಗಾಯತರು ಮನೆಯಲ್ಲಿ ಲಿಂಗಪೂಜೆ ಮತ್ತು ವಚನ ಅಧ್ಯಯನ ಕುರಿತಂತೆ ಮುಂದಿನ ಪೀಳಿಗೆಗೆ ಪ್ರೋತ್ಸಾಹಿಸುವ ಅವಶ್ಯಕತೆಯಿದೆ ಎಂದು ವಿವರಿಸಿದರು.ಸಾಹಿತಿ ಮತ್ತು ಕನ್ನಡ ಭವನದ ಕಾರ್ಯದರ್ಶಿ ಯ.ರು.ಪಾಟೀಲ ಮಾತನಾಡಿ, ಬಸವಕಲ್ಯಾಣ ಕೇಂದ್ರಿತವಾದ ಶರಣ ಸಾಹಿತ್ಯವು, ದೇಶ ಮಾತ್ರವಲ್ಲದೇ ದೂರದ ಅಪಘಾನಿಸ್ತಾನದವರೆಗೂ ಹಬ್ಬಿತ್ತು. ಅನೇಕ ವಿದೇಶಿಗರು ಶರಣ ಸಾಹಿತ್ಯ ಮತ್ತು ಭಕ್ತಿಪರಂಪರೆಗೆ ಪ್ರಭಾವಿತರಾಗಿ ಅನುಭವ ಮಂಟಪಕ್ಕೆ ಆಗಮಿಸಿ, ವಚನ ರಚಿಸಿದ್ದಾರೆ. ಈ ಸಂಗತಿಯು 12ನೇ ಶತಮಾನದ ಶರಣರ ಮತ್ತು ವಚನ ಸಾಹಿತ್ಯದ ಪ್ರಭಾವ ಮತ್ತು ಶಕ್ತಿಯನ್ನು ಸಾಕ್ಷಿಕರಿಸುತ್ತದೆ ಎಂದರು.ವಚನ ದರ್ಶನ ಪುಸ್ತಕವು ಜಗದ್ಗುರು ಸದಾಶಿವಾನಂದ ಮಹಾಸ್ವಾಮಿಗಳ ಗೌರವ ಸಂಪಾದಕತ್ವದಲ್ಲಿ ಹಾಗೂ ಜನಮೇಜಯ ಉಮರ್ಜಿ, ಡಾ.ನಿರಂಜನ ಪೂಜಾರ ಚಂದ್ರಪ್ಪ ಬಾರಂಗಿ, ಡಾ.ಸಂತೋಷಕುಮಾರ ಪಿ.ಕೆ ಸಂಪಾದಕತ್ವದಲ್ಲಿ ಪ್ರಕಟವಾಗಿದೆ.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಪ್ರಬುದ್ಧ ಭಾರತದ ಸಂಯೋಜಕರಾದ ಡಾ.ಅಲ್ಕಾ ಕಾಳೆ, ಡಾ.ಬಸವರಾಜ ಜಗಜಂಪಿ, ಡಾ.ಜೆ.ಮಂಜಣ್ಣ ಸೇರಿದಂತೆ ವಿವಿಧ ಗಣ್ಯರು ಹಾಜರಿದ್ದರು.ಡಾ.ಶೈಲಜಾ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ನಯನಾ ಗಿರಿಗೌಡರ ಅವರಿಂದ ವಚನ ಗಾಯನ ಪ್ರಸ್ತುತಪಡಿಸಿದರು. ಡಾ.ಶರಯೂ ಪೊಟ್ನೀಸ್ ನಿರೂಪಿಸಿದರು, ಡಾ.ಸ್ಮಿತಾ ಸುರೇಬಾನಕರ್ ಸ್ವಾಗತ ಭಾಷಣ ಮಾಡಿದರು, ಡಾ.ಶೈಲಜಾ ಹಿರೇಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಪ್ಪಯ್ಯ ರಾಮರಾವ್ ಅವರು ವಂದನಾರ್ಪಣೆ ಮಾಡಿದರು.

ಲಿಂಗಧಾರಣೆ ಮತ್ತು ಲಿಂಗಪೂಜೆ ಮಾಡದವರು ಲಿಂಗಾಯತ ಮತ್ತು ಬಸವಣ್ಣನವರ ಬಹು ಪಾಂಡಿತ್ಯ ಪಡೆದವರಂತೆ ಬಿಂಬಿಸುವುದರ ಜೊತೆಗೆ ಸಮಾಜವನ್ನು ದಾರಿ ತಪ್ಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

-ಸದಾಶಿವಾನಂದ ಸ್ವಾಮೀಜಿ,

ಗದಗಿನ ಶಿವಾನಂದ ಬ್ರಹ್ಮಮಠದ ಜಗದ್ಗುರು.