ಸಾರಾಂಶ
ಶೃಂಗೇರಿ: ಧರ್ಮ ಮಾರ್ಗದಲ್ಲಿ ಮುನ್ನಡೆದಾಗ ಮಾತ್ರ ಜೀವನದಲ್ಲಿ ಸಂತೃಪ್ತಿ, ಯಶಸ್ಸು ದೊರೆಯುತ್ತದೆ. ಎಷ್ಟೇ ಕೆಲಸದ ಒತ್ತಡವಿದ್ದರೂ ಪ್ರತಿದಿನದ ಧಾರ್ಮಿಕ ಚಟುವಟಿಕೆಗಳನ್ನು ಬಿಡಬಾರದು. ಪ್ರತಿಯೊಬ್ಬರೂ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಹೇಳಿದರು. ಅವರು ಶ್ರೀ ಮಠದ ನರಸಿಂಹವನದ ಗುರುನಿವಾಸದಲ್ಲಿ ಶಿವಳ್ಳಿ ಬ್ರಾಹ್ಮಣ ಮಹಾಸಭಾ ಚಾತುರ್ಮಾಸದಲ್ಲಿರುವ ಜಗದ್ಗುರುಗಳ ದರ್ಶನ ಸಂದರ್ಭದಲ್ಲಿ ಆಶೀರ್ವಚನ ನೀಡಿದರು. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆ ಇರಬೇಕು, ನಮಗೆ ಧರ್ಮ, ಸಂಸ್ಕ್ರತಿಗಳು ಶ್ರೇಷ್ಠವಾದುವು, ನಮ್ಮ ಧರ್ಮದ ಬಗ್ಗೆ ನಮಗೆ ಗೌರವವಿರಬೇಕು. ಧಾರ್ಮಿಕ ಆಚರಣೆಗಳನ್ನು ಮಾಡಬೇಕು. ದೇವರು, ಗುರುಗಳ ಬಗ್ಗೆ ಭಕ್ತಿ ಇರಬೇಕು, ಶ್ರದ್ಧೆ, ಭಕ್ತಿಯಿಂದ ಭಗವಂತನನ್ನು ಆರಾಧಿಸಬೇಕು. ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ. ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲಿಯೂ ಯಶಸ್ಸು ಸಿಗುತ್ತದೆ ಎಂದರು. ಶಿವಳ್ಳಿ ಬ್ರಾಹ್ಮಣ ಮಹಾಸಭಾದ ಗೋಚವಳ್ಳಿ ರಾಮಣ್ಣಯ್ಯ, ಬಿ.ಜಿ.ಮುರುಳಿ ಕೃಷ್ಣ, ಅಂಬಳೂರು ರಾಮಕೃಷ್ಣರಾವ್, ವಿವೇಕನಂದ, ಎಚ್.ಎಸ್.ಸುಬ್ರಹ್ಮಣ್ಯ, ರವಿಶಂಕರ್, ಮುರಳಿಕೃಷ್ಣ, ತ್ಯಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.