ಸಾರಾಂಶ
ತೀರ್ಥಹಳ್ಳಿ: ವಿಶ್ವ ಬ್ಯಾಂಕಿನ ಇತ್ತೀಚಿನ ವರದಿಯಂತೆ ಬಡತನ ರೇಖೆಗಿಂತ ಕೆಳಗಿದ್ದ ಈ ದೇಶದ 25 ಕೋಟಿ ಜನರು ಬಡತನ ರೇಖೆಗಿಂತ ಮೇಲೆ ಬಂದಿರುವುದು ನರೇಂದ್ರ ಮೋದಿ ಸರ್ಕಾರದ ಸಾಧನೆಯಾಗಿದೆ. 11 ವರ್ಷಗಳ ಹಿಂದೆ ಭಾರತ ಹೇಗಿತ್ತು ಎಂಬುದನ್ನು ಕೂಡಾ ಗಮನಿಸಬೇಕಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ಕೋಣಂದೂರಿನ ಶಂಕರ ಸಭಾಭವನದಲ್ಲಿ ನಡೆದ ಆರಗ ಮಹಾಶಕ್ತಿ ಕೇಂದ್ರ ಮಟ್ಟದ ಸಂಕಲ್ಪ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
14 ಕೋಟಿ ಸದಸ್ಯರನ್ನು ಹೊಂದಿರುವ ಬಿಜೆಪಿ ಪಕ್ಷದವರಾದ ನಾವುಗಳು ದಿನನಿತ್ಯ 15 ರಿಂದ 19 ಗಂಟೆಗಳ ಪರ್ಯಂತ ಕಾರ್ಯ ನಿರ್ವಹಿಸುವ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕಿದೆ. ತನ್ನ ತಾಯಿಯ ಮರಣದ ದಿನವೂ ದೇಶದ ಕೆಲಸ ಮಾಡಿದ್ದ ಪ್ರಧಾನಿಯವರು ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ ಎಂದರು.ಸ್ವಚ್ಛ ಭಾರತ್, ಫಸಲ್ ಬಿಮಾ ಯೋಜನೆ, ಅಯುಷ್ಮಾನ್ ಭಾರತ್ ಯೋಜನೆಗಳ ಮೂಲಕ ಜನಸಾಮಾನ್ಯರ ರೈತರ ಮತ್ತು ಮಹಿಳೆಯರ ಬದುಕು ಹಸನಾಗಲು ಕಾರಣರಾದ್ದಾರೆ.
10 ಕೋಟಿ ಶೌಚಾಲಯ ನಿರ್ಮಾಣದ ಮೂಲಕ ಮಹಿಳೆಯರ ಬಹಕಾಲದ ಕನಸು ನನಸಾಗಿದೆ. ಕೊರೋನಾ ನಿರ್ವಹಿಸಿದ ರೀತಿ ವಿಶ್ವಕ್ಕೆ ಮಾದರಿಯಾಗಿದೆ ಎಂದರು.ವಾಲ್ಮೀಕಿ ಸಮಾಜದ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಕಾಂಗ್ರೆಸ್ಸಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. 11 ವರ್ಷದ ಆಡಳಿತದಲ್ಲಿ ಕೇಂದ್ರ ಸರ್ಕಾರದ ಯಾರೊಬ್ಬರ ಮೇಲೂ ಒಂದೇ ಒಂದು ಹಗರಣಗಳ ಆರೋಪವಿಲ್ಲಾ.
ದಿನ ಬೆಳಗಾದರೆ ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ಸಂವಿಧಾನದ ಹಕ್ಕುಗಳನ್ನು ಮೊಟಕುಗೊಳಿಸಿದ್ದರು ಎಂದೂ ಆರೋಪಿಸಿದರು.ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ಅರಗ ಮಂಡಲ ಬಿಜೆಪಿ ಅಧ್ಯಕ್ಷ ಚಂದ್ರಶೇಕರ್, ಮುಖಂಡರಾದ ಕೆ.ನಾಗರಾಜ ಶೆಟ್ಟಿ, ಚಂದವಳ್ಳಿ ಸೋಮಶೇಕರ್, ಕುಕ್ಕೆ ಪ್ರಶಾಂತ್, ಮೋಹನ್ ಭಟ್, ಸಂತೋಷ್ ದೇವಾಡಿಗ, ಟಿ.ಜೆ.ಅನಿಲ್, ಕೆ.ಎಂ.ಮೋಹನ್, ಅನ್ನಪೂರ್ಣ ವಾಸುದೇವ್, ಚಂದ್ರಶೇಕರ ಕಂಠಿ ಇದ್ದರು.