ಸಾರಾಂಶ
- 20ರಂದು ಜಿಲ್ಲಾಮಟ್ಟದ ಕವಿಗೋಷ್ಠಿ-ಸಾಧಕರಿಗೆ ಸನ್ಮಾನ: ಕೊಟ್ರಪ್ಪ ಮಾಹಿತಿ - - - ಕನ್ನಡಪ್ರಭ ವಾರ್ತೆ ಹರಿಹರ
ಪ್ರಗತಿಪರ ಬರಹಗಾರರ ಒಕ್ಕೂಟಕ್ಕೆ 30 ವರ್ಷಗಳು ಸಂದಿವೆ. ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷೆ ಲಲಿತಮ್ಮ ಡಾ.ಚಂದ್ರಶೇಖರ್ ಅವರು 93 ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅವರ ಜನ್ಮ ದಿನಾಚರಣೆ ಅಂಗವಾಗಿ ಅ.20ರಂದು ಬೆಳಗ್ಗೆ 10.30 ಗಂಟೆಗೆ ಹರಿಹರದ ಕೋಟೆಯಲ್ಲಿರುವ ಶ್ರೀ ಹರಿಹರೇಶ್ವರ ಸಭಾಭವನದಲ್ಲಿ ಅವರಿಗೆ ಶುಭ ಕೋರಲಾಗುವುದು ಎಂದು ಗೌರವಾಧ್ಯಕ್ಷ ಎಚ್.ಕೆ. ಕೊಟ್ರಪ್ಪ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಕೃಷ್ಣ ವಿವೇಕಾನಂದ ಆಶ್ರಮ ಅಧ್ಯಕ್ಷರಾದ ಸ್ವಾಮಿ ಶಾರದೇಶಾನಂದಜಿ ದಿವ್ಯ ಸಾನಿಧ್ಯ ವಹಿಸುವರು. ಪ್ರಗತಿಪರ ಬರಹಗಾರರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷೆ ಶ್ರೀಮತಿ ಲಲಿತಮ್ಮ ಡಾ.ಚಂದ್ರಶೇಖರ್, ಪ್ರಶಸ್ತಿ ಪುರಸ್ಕೃತ ಬಾ.ಮ. ಬಸವರಾಜಯ್ಯ, ಪ್ರಗತಿಪರ ಬರಹಗಾರರ ಒಕ್ಕೂಟದ ಅಧ್ಯಕ್ಷ ಶ್ರೀ ಸುಬ್ರಹ್ಮಣ್ಯ ನಾಡಿಗೇರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಕ.ಸಾ.ಪ. ಜಿಲ್ಲಾಧ್ಯಕ್ಷ ವಾಮದೇವಪ್ಪ ಪಾಲ್ಗೊಳ್ಳುವರು. ಹಿರಿಯ ಸಾಹಿತಿ ಪ್ರೊ. ಸಿ.ವಿ.ಪಾಟೀಲ್ ಲಲಿತಮ್ಮ ಕುರಿತು ಅಭಿನಂದನಾ ನುಡಿಗಳನ್ನಾಡುವರು ಎಂದರು.
ಒಕ್ಕೂಟ ಅನೇಕ ಕವನ ಸಂಕಲನಗಳನ್ನು ಹೊರತಂದಿದೆ. ನೂತನ ಕಾರ್ಯಕಾರಿ ಸಮಿತಿ ರಚಿಸಿ ದೊಡ್ಡಮ್ಮನವರ (ಲಲಿತಮ್ಮ) ಸಲಹೆಯಂತೆ ಕಾರ್ಯಪ್ರವೃತ್ತರಾಗಿದ್ದೇವೆ. ಹೊಸ ಸದಸ್ಯರನ್ನು ಸೇರಿಸಿಕೊಂಡು ಒಕ್ಕೂಟ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೆವೆ ಎಂದು ತಿಳಿಸಿದರು.ಪ್ರಗತಿಪರ ಬರಹಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಫ್ರಾನ್ಸಿಸ್ ಮಾತನಾಡಿ, ಲಲಿತಮ್ಮ ಡಾ.ಚಂದ್ರಶೇಖರ್ ಜೀವಮಾನ ಸಾಧನೆ 2024ರ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಾ.ಮ. ಬಸವರಾಜಯ್ಯ ಭಾಜನರಾಗಿದ್ದಾರೆ. ಪ್ರತಿವರ್ಷ ಈ ಪ್ರಶಸ್ತಿಯನ್ನು ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೀಡಲಾಗುವುದು. ಈ ಪ್ರಶಸ್ತಿಯು ನಗದು ₹5000 ಮತ್ತು ವಿಶೇಷ ಸನ್ಮಾನ ಒಳಗೊಂಡಿದೆ ಎಂದು ತಿಳಿಸಿದರು.
ದೊಡ್ಡಮ್ಮನವರ ಆಶಯದಂತೆ ಜಿಲ್ಲಾಮಟ್ಟದ ಸುವರ್ಣ ಕವಿಕಾವ್ಯ ಸಿರಿ-24 ಕವಿಗೋಷ್ಠಿ ಆಯೋಜಿಸಲಾಗಿದೆ. ಈ ಎಲ್ಲ ಕಾರ್ಯಕ್ರಮಗಳನ್ನು ಚಿಂತನ ಪ್ರತಿಷ್ಠಾನದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಮಟ್ಟದ ಕವಿಗೋಷ್ಠಿಯಲ್ಲಿ ಆಯ್ಕೆಯಾದ 31 ಕವಿಗಳು ಕವನ ವಾಚಿಸಲಿದ್ದಾರೆ ಎಂದರು.ಕವಿಗೋಷ್ಠಿ ಉದ್ಘಾಟನೆಯನ್ನು ನಗರವಾಣಿ ಉಪ ಸಂಪಾದಕ ಬಿ.ಎನ್. ಮಲ್ಲೇಶ್ ನೆರವೇರಿಸಲಿದ್ದಾರೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಸೀತಾ ಎಸ್. ನಾರಾಯಣ ವಹಿಸಲಿದ್ದಾರೆ. ವೇದಿಕೆಯಲ್ಲಿ ಸಮಾಜ ಸೇವಕರಾದ ನಂದಿಗಾವಿಯ ಗೋವಿಂದ ರೆಡ್ಡಿ, ಪ್ರಗತಿಪರ ಬರಹಗಾರರ ಒಕ್ಕೂಟದ ಗೌರವಾಧ್ಯಕ್ಷ ಎಚ್.ಕೆ. ಕೊಟ್ರಪ್ಪ, ಪ್ರಶಸ್ತಿ ಪ್ರಾಯೋಜಕರಾದ ವಸಂತಿ ಡಿ. ಫ್ರಾನ್ಸಿಸ್ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಮಲಾದೇವಿ ಅವರ ಕೃತಿ, ಭೂಮಿ ತೂಕದ ತಾಯಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಕೃತಿ ಕುರಿತು ಡಾ. ಡಿ.ಫ್ರಾನ್ಸಿಸ್ ಮಾತನಾಡುವರು ಎಂದು ಪ್ರಗತಿಪರ ಬರಹಗಾರರ ಒಕ್ಕೂಟ ಅಧ್ಯಕ್ಷ ಸುಬ್ರಹ್ಮಣ್ಯ ನಾಡಿಗೇರ್ ಸುದ್ದಿಗಾರರಿಗೆ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಾಹಿತಿ ಸೀತಾ ಎಸ್. ನಾರಾಯಣ, ಚಂದನ ವೈ. ನೀಲಪ್ಪ, ಬಿ.ನಾಗರತ್ನ, ರಾಧಾ ಹನುಮಂತಪ್ಪ, ಶ್ರೀಮತಿ ಎ.ಬಿ.ಮಂಜಮ್ಮ, ಶಾಮಲಾದೇವಿ, ಜಿ.ಎಸ್. ಗಾಯತ್ರಿ ಮಂಜುನಾಥ ಅಗಡಿ ಇದ್ದರು.
- - - -16ಎಚ್ಆರ್ಆರ್2:ಹರಿಹರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ಬರಹಗಾರರ ಒಕ್ಕೂಟದ ಪದಾಧಿಕಾರಿಗಳು ಮಾತನಾಡಿದರು.