ಆಗುಂಬೆ ಘಾಟ್‌ ಅಭಿವೃದ್ಧಿ : ಲಕ್ಷಕ್ಕೂ ಮಿಕ್ಕಿ ಗಿಡ ಮರಗಳ ಬಲಿ!

| Published : Nov 05 2023, 01:15 AM IST

ಆಗುಂಬೆ ಘಾಟ್‌ ಅಭಿವೃದ್ಧಿ : ಲಕ್ಷಕ್ಕೂ ಮಿಕ್ಕಿ ಗಿಡ ಮರಗಳ ಬಲಿ!
Share this Article
  • FB
  • TW
  • Linkdin
  • Email

ಸಾರಾಂಶ

ಆಗುಂಬೆ ಘಾಟ್ಟ್‌ ಅಭಿವೃದ್ಧಿ; ಪರಿಸರಕ್ಕೆ ಮಾರಕ

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ಮಲೆನಾಡು- ಕರಾವಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ166ಎ ಆಗುಂಬೆ ಘಾಟ್ ಅಗಲೀಕರಣಕ್ಕೆ ಹೆದ್ದಾರಿ ಪ್ರಾಧಿಕಾರವು ವಿಸ್ತಾರವಾದ ಯೋಜನಾ ವರದಿ ಸಿದ್ಧಪಡಿಸಲು ಬೆಂಗಳೂರಿನ ಪ್ರಾದೇಶಿಕ ಕಚೇರಿಯಲ್ಲಿ ಏಜೆನ್ಸಿ ನೇಮಕ ಮಾಡಲು ಹೊರಟಿದೆ‌.

ಇನ್ನೊಂದೆಡೆ ಮಾಳ ಘಾಟ್- ಶೃಂಗೇರಿ ರಸ್ತೆ ಅಗಲೀಕರಣಕ್ಕಾಗಿ, ಪ್ರಾಧಿಕಾರ ದೆಹಲಿಯ ವನ್ಯಜೀವಿ ಸಂರಕ್ಷಣಾ ವಿಭಾಗದ ಒಪ್ಪಿಗೆಗೆ ಕಳುಹಿಸಿದೆ.

ಆಗುಂಬೆ ಹಾಗೂ ಮಾಳ ಘಾಟ್ ಹೆದ್ದಾರಿ ಅಗಲೀಕರಣ ಕಾಮಗಾರಿ ಕುದುರೆ ಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಹಾದು ಹೋಗುವುದರಿಂದ ಪರಿಸರಕ್ಕೆ ದುಷ್ಪರಿಣಾಮ ಎದುರಾಗಲಿದೆ.

ಅರಣ್ಯ ಸಂಪತ್ತು ನಾಶ

ಪ್ರಸ್ತುತ ಹೆದ್ದಾರಿಯು 3.5 ಮೀಟರ್ ಅಗಲವಿದ್ದು, ಮುಂದೆ ಒಟ್ಟು 10 ಮೀಟರ್ ಅಗಲೀಕರಣಗೊಳ್ಳಲಿದೆ. ಆಗುಂಬೆ ಘಾಟಿಯಿಂದ ಹೆಬ್ರಿವರೆಗೆ 21 ಕಿ.ಮೀ. ಉದ್ದ, ಮಾಳ ಘಾಟ್‌ನಿಂದ ತನಿಕೋಡು ಚೆಕ್ ಪೋಸ್ಟ್‌ವರೆಗೆ 40 ಕಿ.ಮೀ. ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಈ ಎರಡೂ ಹೆದ್ದಾರಿಗಳ ಇಕ್ಕೆಲಗಳಲ್ಲಿ ಲಕ್ಷಕ್ಕೂ ಮಿಕ್ಕಿ ಬೆಲೆಬಾಳುವ ಗಿಡಮರಗಳು ಸೇರಿದೆ. ಅವುಗಳು ಈ ಅಭಿವೃದ್ಧಿ ಕಾಮಗಾರಿಯ ಸಂದರ್ಭ ನಾಶವಾಗುವ ಸಾಧ್ಯತೆಗಳು ಇವೆ. ಇದರಲ್ಲಿ ಬಲಿಗೆ, ಪುಂಡಿಕೈ, ಆಯುರ್ವೇದ ಔಷಧೀಯ ಗುಣವುಳ್ಳ ಸಸ್ಯಗಳು ಒಳಗೊಂಡಿವೆ ಎಂದು ಮಾಹಿತಿ ಲಭ್ಯವಾಗಿದೆ.

ಸುಮಾರು ಮೂರಕ್ಕೂ ಮಿಕ್ಕಿ ಜಲಪಾತಗಳು, 20ಕ್ಕೂ ಮಿಕ್ಕಿ ಹಳ್ಳಕೊಳ್ಳಗಳು ತನ್ನ ಹರಿವಿನ ದಿಕ್ಕನ್ನು ಬದಲಾಯಿಸಬೇಕಾಗುತ್ತದೆ‌.

ವೇಗಕ್ಕೆ ಕಡಿವಾಣ ಅಗತ್ಯ

ಅಭಯಾರಣ್ಯದೊಳಗೆ ಹೆದ್ದಾರಿ ಅಗಲೀಕರಣವಾದ ಬಳಿಕ ವಾಹನಗಳ ಓಡಾಟ ಹಾಗೂ ವೇಗ ಹೆಚ್ಚಾಗಲಿದ್ದು, ಇದರಿಂದ ಆ ಪ್ರದೇಶದಲ್ಲಿ ಅಡ್ಡಾಡುವ ಪ್ರಾಣಿಗಳು, ಸರಿಸೃಪಗಳಿಗೆ ಅಪಾಯ ಎದುರಾಗಲಿದೆ. ವಾಹನಗಳ ವೇಗಕ್ಕೆ ಕಡಿವಾಣ ಹಾಕುವ ಮುನ್ನೆಚ್ಚರಿಕೆ ಕ್ರಮವಹಿಸಬೇಕು.

ಅಗಲೀಕರಣ ಏಕೆ?:

ಮಲ್ಪೆ-ಮೊಣಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಆಗುಂಬೆ ಘಾಟ್ ಮೂಲಕ ಹಾದು ಹೋಗುವ ಕಾರಣ ತೀರಾ ಇಕ್ಕಟ್ಟಾದ ರಸ್ತೆಗಳು ತಿರುವುಮುರುವುಗಳಿಂದ ಕೂಡಿದ್ದು ಹಲವು ಅಪಘಾತಕ್ಕೆ ಕಾರಣವಾಗಿವೆ. ಇತರ ಸಣ್ಣ ಗಾತ್ರದ ವಾಹನಗಳು ಮಾತ್ರ ಸಂಚರಿಸುತ್ತಿದ್ದು, ಅಗಲೀಕರಣವಾದರೆ ಎಲ್ಲ ಘನವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ.

ಅತಿಸೂಕ್ಷ್ಮ ವಲಯ

ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿ ಆಗುಂಬೆಯೂ ಒಂದಾಗಿದೆ. ಇದೆ ಕಾರಣದಿಂದ ಆಗುಂಬೆಯನ್ನು ದಕ್ಷಿಣದ ಚಿರಾಪುಂಜಿ ಕರೆಯಲಾಗುತ್ತದೆ. ಆಗುಂಬೆ ಘಾಟಿಯಲ್ಲಿ ಒಟ್ಟು ಹದಿನಾಲ್ಕು ತಿರುವುಗಳಿದ್ದು, ಮೇಲ್ಭಾಗದ ಏಳು ಸುತ್ತುಗಳು ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೆ, ಕೆಳಗಿನ ಏಳು ಸುತ್ತುಗಳು ಉಡುಪಿ ಜಿಲ್ಲಾ ವ್ಯಾಪ್ತಿಗೆ ಸೇರುತ್ತವೆ. ಕುದುರೆಮುಖ ವನ್ಯಜೀವಿ ವಿಭಾಗವು ಅತಿಸೂಕ್ಷ್ಮ ವಲಯಗಳಲ್ಲಿ ಒಂದಾಗಿದೆ.