ನವೋದಯ ವಿದ್ಯಾ ಸಂಸ್ಥೆಯ ವತಿಯಿಂದ ಪೋಷಕರ ಸಭೆಯು ಜರುಗಿತು. ಸಭೆಯಲ್ಲಿ ನವೋದಯ ವಿದ್ಯಾ ಸಂಸ್ಥೆಯ ನಿರ್ದೇಶಕರಾದ ಕಾಳೇನಹಳ್ಳಿ ಆನಂದ್ ಮಾತನಾಡಿ ನವೋದಯ ವಿದ್ಯಾಸಂಸ್ಥೆಯ ಗತವೈಭವವನ್ನು ಮರುಸ್ಥಾಪನೆ ಮಾಡಲು ನವೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಮುರಾರ್ಜಿ ಮಂಜಣ್ಣನವರ ನೇತೃತ್ವದಲ್ಲಿ ಶ್ರಮಿಸುವುದಾಗಿ ತಿಳಿಸಿದರು. ನಮ್ಮ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿ ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಲವಾರು ಹಳೆಯ ವಿದ್ಯಾರ್ಥಿಗಳ ಸಹಾಯ ಮತ್ತು ಸಹಕಾರದಿಂದ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡುವುದಾಗಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ ಪಟ್ಟಣದ ನವೋದಯ ವಿದ್ಯಾ ಸಂಸ್ಥೆಯ ವತಿಯಿಂದ ಪೋಷಕರ ಸಭೆಯು ಜರುಗಿತು. ಸಭೆಯಲ್ಲಿ ನವೋದಯ ವಿದ್ಯಾ ಸಂಸ್ಥೆಯ ನಿರ್ದೇಶಕರಾದ ಕಾಳೇನಹಳ್ಳಿ ಆನಂದ್ ಮಾತನಾಡಿ ನವೋದಯ ವಿದ್ಯಾಸಂಸ್ಥೆಯ ಗತವೈಭವವನ್ನು ಮರುಸ್ಥಾಪನೆ ಮಾಡಲು ನವೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಮುರಾರ್ಜಿ ಮಂಜಣ್ಣನವರ ನೇತೃತ್ವದಲ್ಲಿ ಶ್ರಮಿಸುವುದಾಗಿ ತಿಳಿಸಿದರು. ನಮ್ಮ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿ ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಲವಾರು ಹಳೆಯ ವಿದ್ಯಾರ್ಥಿಗಳ ಸಹಾಯ ಮತ್ತು ಸಹಕಾರದಿಂದ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡುವುದಾಗಿ ಭರವಸೆ ನೀಡಿದರು.

ತಾಲೂಕಿನ ಹಲವಾರು ಸಮಾಜಮುಖಿ ಸಾರ್ವಜನಿಕರಿಂದ ಸಲಹೆ ಸಹಕಾರ ಪಡೆದು ನವೋದಯ ಶಾಲೆಯನ್ನು ನವೀಕರಣ ಮಾಡಿ ತಾಲೂಕಿನ ಖಾಸಗಿ ಶಾಲೆಗಳಿಗೆ ಪೈಪೋಟಿಯಾಗಿ ನವೋದಯ ವಿದ್ಯಾ ಸಂಸ್ಥೆಯನ್ನು ಅಭಿವೃದ್ಧಿಪಡಿಸುವುದಾಗಿ ತಿಳಿಸಿದರು. ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ನೂರಕ್ಕೆ ನೂರರಷ್ಟು ಫಲಿತಾಂಶವನ್ನು ತರುವ ಮೂಲಕ ಶಾಲೆಯ ಕೀರ್ತಿಯನ್ನು ಮನವಿ ಮಾಡಿದರು. ಕರ್ನಾಟಕ ರಾಜ್ಯದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಯಾದ ನವೋದಯ ವಿದ್ಯಾಸಂಸ್ಥೆಯು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಇಂತಹ ಐತಿಹಾಸಿಕ ಹಿನ್ನೆಲೆ ಹೊಂದಿರುವ ನವೋದಯ ವಿದ್ಯಾಸಂಸ್ಥೆಯನ್ನು ಮಾದರಿ ಶಾಲೆಯನ್ನಾಗಿ ಮಾಡುವ ಹೊಸ ಯೋಜನೆಯನ್ನು ರೂಪಿಸಲಾಗಿದೆ ಎಂದರು. ನಮ್ಮ ನವೋದಯವಿದ್ಯಾ ಸಂಸ್ಥೆಯ ಅಭಿವೃದ್ಧಿಗೆ ೪ ಟನ್ ಕಬ್ಬಿಣ ನೀಡುವುದಾಗಿ ಘೋಷಣೆ ಮಾಡಿದ ಬೆಕ್ಕ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಗೂ ಸಮಾಜಸೇವಕ ಕೇಶವಮೂರ್ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂದು ಹೆಸರು ಪಡೆದಿರುವ ನವೋದಯ ವಿದ್ಯಾಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಹಲವಾರು ವಿದ್ಯಾರ್ಥಿಗಳು ದೇಶದ ವಿವಿಧ ರಾಜ್ಯಗಳಲ್ಲಿ ಅತ್ಯುನ್ನತವಾದ ಸರ್ಕಾರಿ ಮತ್ತು ಖಾಸಗಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ತುಂಬಾ ಸಂತೋಷದ ವಿಚಾರ ಎಂದರು. ಈ ಸಂಸ್ಥೆಯ ಸಂಸ್ಥಾಪಕರನ್ನು ಪ್ರತಿಯೊಬ್ಬರು ಸ್ಮರಿಸಿಕೊಂಡು ಸಾಗಬೇಕು ಎಂದರು. ಈ ವರ್ಷದಿಂದ ನವೋದಯ ಶಾಲೆಯಲ್ಲಿ ದ್ವಿತೀಯ ಪಿಯುಸಿ ಮುಗಿದ ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗುವುದು ಎಂದರು. ಇಂತಹ ಇತಿಹಾಸ ಇರುವ ವಿದ್ಯಾಸಂಸ್ಥೆಯಲ್ಲಿ ಪ್ರವೇಶವನ್ನು ಪಡೆಯಲು ಶಾಸಕರು ಹಾಗೂ ಲೋಕಸಭಾ ಸದಸ್ಯರಿಂದ ಶಿಫಾರಸು ಪತ್ರ ಪಡೆಯಲು ಪೈಪೋಟಿ ನಡೆಸುತ್ತಿದ್ದ ದಿನಗಳನ್ನು ಮರೆಯುವಂತಿಲ್ಲ. ಹಲವು ಮಹನೀಯರ ನಿಸ್ವಾರ್ಥ ಸೇವೆಯಿಂದ ನವೋದಯ ಎಂಬ ಶಿಕ್ಷಣ ಸಂಸ್ಥೆಯು ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಬಡವರ್ಗದ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಶಿಕ್ಷಣವನ್ನು ನೀಡುತ್ತಾ ಬಂದಿರುವುದು ಇತಿಹಾಸದ ಪುಟದಲ್ಲಿ ದಾಖಲಾಗಿದೆ ಎಂದರು.

ನಿವೃತ್ತ ಕಮಾಂಡರ್‌ ವೆಂಕಟೇಶ್ ಮಾತನಾಡಿ, ಮುಂಬರುವ ದಿನಗಳಲ್ಲಿ ನವೋದಯ ವಿದ್ಯಾಸಂಸ್ಥೆಯ ಆವರಣದಲ್ಲಿ ಭಾರತೀಯ ಸೇನೆಗೆ ಸೇರಲು ತರಬೇತಿ ನೀಡಲಾಗುವುದು. ಈ ಅವಕಾಶವನ್ನು ಎಸ್‌ಎಸ್‌ಎಲ್‌ಸಿ ಮುಗಿಸಿರುವ ಎಲ್ಲಾ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ನವೋದಯ ವಿದ್ಯಾ ಸಂಸ್ಥೆಯ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿಸಿಎಂ ಮಂಜಣ್ಣ ಹಾಗೂ ಎಲ್ಲಾ ನಿರ್ದೇಶಕರ ಕಾಳಜಿಯಿಂದ ನವೋದಯ ವಿದ್ಯಾಸಂಸ್ಥೆಗೆ ಹೊಸ ರೂಪವನ್ನು ನೀಡಲಾಗುತ್ತಿದೆ ಎಂದರು. ನವೋದಯ ವಿದ್ಯಾಸಂಸ್ಥೆಯ ಅಭಿವೃದ್ಧಿಗಾಗಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಶ್ರಮಿಸುತ್ತಿರುವ ಎಲ್ಲರಿಗೂ ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಹಾಸನ ಎಕ್ಸ್ ಪ್ರೆಸ್ ಸುದ್ದಿ ಸಂಪಾದಕರಾದ ನಾಗರಾಜು, ನವೋದಯ ವಿದ್ಯಾಸಂಸ್ಥೆಯ ನಿರ್ದೇಶಕರಾದ ಮರುವನಹಳ್ಳಿ ಸಂತೋಷ್‌, ಗನ್ನಿ ಗಿರೀಶ್, ಪ್ರಾಂಶುಪಾಲರಾದ ಸಂಜಯ್ ಕುಮಾರ್‌, ಉಪ ಪ್ರಾಂಶುಪಾಲರಾದ ಸ್ವಾಗತಹಳ್ಳಿ ಎಸ್ ಸಿ ಸುರೇಶ್, ಮುಖ್ಯೋಪಾಧ್ಯರಾದ ಸೀತಾರಾಮ್ ನಾಯಕ್, ನಿವೃತ್ತ ಕಮಾಂಡರ್ ವೆಂಕಟೇಶ್ ಸೇರಿದಂತೆ ಇತರರು ಹಾಜರಿದ್ದರು.