ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಮಣಿಪಾಲದಲ್ಲಿ ಫೆ.9ರಂದು ನಡೆಯಲಿರುವ ಬಹುನಿರೀಕ್ಷಿತ 7ನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್-2025ಕ್ಕೆ ಪೂರ್ವಭಾವಿಯಾಗಿ ಬೆಂಗಳೂರಿನಲ್ಲಿ ಆಯೋಜಿಸಲಾದ ಪ್ರೊಮೋ ಮ್ಯಾರಾಥಾನ್ಗೆ ಮಾಹೆ ಬೆಂಗಳೂರು ಕ್ಯಾಂಪಸ್ನಲ್ಲಿ ಭಾರತೀಯ ಕ್ರಿಕೆಟ್ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಭಾನುವಾರ ಚಾಲನೆ ನೀಡಿದರು.ನಂತರ ಶ್ರೇಯಾಂಕ ಪಾಟೀಲ್ ಮಾತನಾಡಿ, ಇಂತಹ ಅದ್ಭುತ ಮತ್ತು ಸ್ಫೂರ್ತಿದಾಯಕ ಮ್ಯಾರಥಾನ್ನ ಭಾಗವಾಗಲು ನನಗೆ ತುಂಬಾ ಸಂತೋಷವಾಗಿದೆ. ಎಲ್ಲ ವರ್ಗದ ಜನರು ಈ ಓಟದಲ್ಲಿ ಉತ್ಸಾಹದಿಂದ ಭಾಗವಹಿಸಲು ಇದು ವೇದಿಕೆ ಒದಗಿಸುತ್ತದೆ. ಪ್ರತಿಯೊಬ್ಬರು ಆರೋಗ್ಯವಾಗಿರಲು ಓಡಬೇಕು ಎಂದರು.ಮಾಹೆ ಬೆಂಗಳೂರು ಕ್ಯಾಂಪಸ್ನ ಉಪಕುಲಸಚಿವ ಡಾ. ರಾಘವೇಂದ್ರ ಪ್ರಭು, ಬಾಬ್ ಕಾರ್ಡ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ ರವೀಂದ್ರ ರೈ ಎಂ., ದೃಷ್ಟಿ ವಿಕಲಚೇತನ ಭಾರತೀಯ ಕ್ರಿಕೆಟ್ ತಂಡದ ವ್ಯವಸ್ಥಾಪಕಿ ಶೀಕಾ ಶೆಟ್ಟಿ, ಯುನೆಕ್ಸ್ಟ್ ಲರ್ನಿಂಗ್ ಪ್ರೈವೇಟ್ ಲಿಮಿಟೆಡ್ನ ಮಾರ್ಕೆಟಿಂಗ್ನ ಹಿರಿಯ ಉಪಾಧ್ಯಕ್ಷ ಕಿರಣ್ ಕುಮಾರ್, ಮಣಿಪಾಲದ ಮಾಹೆ ಕ್ರೀಡಾ ಮಂಡಳಿ ಕಾರ್ಯದರ್ಶಿ ಡಾ. ವಿನೋದ್ ಸಿ. ನಾಯಕ್, ಮಣಿಪಾಲ ಹೆಲ್ತ್ ಎಂಟರ್ಪ್ರೈಸಸ್ ಪ್ರೈವೇಟ್ ಲಿಮಿಟೆಡ್ನ ಅಸೋಸಿಯೇಟ್ ನಿರ್ದೇಶಕಿ ಅಂಜನಾ ಚಂದ್ರನ್ ಹಾಗೂ ಮಾಹೆ ಬೆಂಗಳೂರು ಕ್ಯಾಂಪಸ್ನ ಇತರ ಅಧಿಕಾರಿಗಳು ಭಾಗವಹಿಸಿದ್ದರು.50ಕ್ಕೂ ಹೆಚ್ಚು ದೃಷ್ಟಿ ದೋಷವಿರುವವರು ಮತ್ತು 1,500 ವಿದ್ಯಾರ್ಥಿಗಳು ಮತ್ತು ಇತರ ಮ್ಯಾರಥಾನ್ ಉತ್ಸಾಹಿಗಳು ಈ ಪ್ರೋಮೋ ಓಟದಲ್ಲಿ ಭಾಗವಹಿಸಿದರು.