ದೇಶದ ಬೆನ್ನೆಲುಬು ರೈತ ಎನ್ನಲಾಗುತ್ತಿದೆ. ರೈತನ ಬೆನ್ನೆಲುಬು ಜಾನುವಾರುಗಳಾಗಿವೆ. ಅವುಗಳ ಆರೋಗ್ಯದ ಕಡೆಗೆ ಗಮನ ನೀಡುವ ಮೂಲಕ ಹೈನುಗಾರಿಕೆಗೆ ಒತ್ತು ನೀಡಿ ಕ್ಷೀರ ಕ್ರಾಂತಿ ಆಗಬೇಕು.

ಅಳ್ನಾವರ:

ಕೃಷಿಯನ್ನೇ ಮೂಲ ಉದ್ಯೋಗವನ್ನಾಗಿಸಿಕೊಂಡಿರುವ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಜಾನುವಾರುಗಳನ್ನೆ ಅವಲಂಭಿಸಿದ್ದು ಮಾನವನ ಆರೋಗ್ಯದಷ್ಟೇ ಪ್ರಾಮುಖ್ಯತೆ ಜಾನುವಾರುಗಳಿಗೂ ನೀಡಲಾಗುತ್ತಿದೆ. ಹೈನುಗಾರಿಕಾ ಪಶುಗಳನ್ನು ಹೆಚ್ಚೆಚ್ಚು ಸಾಕಾಣಿಕೆ ಮಾಡುವ ಮೂಲಕ ಬದುಕು ರೂಪಿಸಿಕೊಳ್ಳುವಂತೆ ಅರವಟಗಿ ಗ್ರಾಪಂ ಅಧ್ಯಕ್ಷ ಅಶೋಕ ಜೋಡಟ್ಟಿ ಹೇಳಿದರು.ಅರವಟಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಪಶು ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಅಧಿಕವಾಗಿ ವಾಸವಾಗಿರುವ ಕೃಷಿಕರು ಮತ್ತು ಗೌಳಿ ಜನಾಂಗದವರ ಜಾನುವಾರಗಳ ಚಿಕಿತ್ಸೆಗೆ ಅರವಟಗಿ ಪಶು ಆಸ್ಪತ್ರೆ ಸಹಕಾರಿಯಾಗಲಿದ್ದು ಸಕಾಲದಲ್ಲಿ ಸೇವೆ ದೊರೆತು ಹೈನುಗಾರಿಕೆಗೆ ಉತ್ತೇಜನ ಸಿಗಲಿದೆ ಎಂದರು.

ಪಶು ವೈದ್ಯಾಧಿಕಾರಿ ಡಾ. ಸುನೀಲ ಬನ್ನಿಗೋಳ ಮಾತನಾಡಿ, ದಿನದ 24 ಗಂಟೆಯೂ ಆಸ್ಪತ್ರೆಯ ಸೇವೆ ಸಿಗಲಿದ್ದು ಎನ್‌ಪಿಸಿಸಿಎಲ್ ಯೋಜನೆಯಡಿ ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣವಾಗಿದ್ದು ಪ್ರಯೋಜನ ಪಡೆದುಕೊಳ್ಳುವಂತೆ ಹೇಳಿದರು.

ಎಂಎಸ್‌ಐಎಲ್ ಮಾಜಿ ನಿರ್ದೇಶಕ ಶಿವಾಜಿ ಡೊಳ್ಳಿನ ಮಾತನಾಡಿ, ದೇಶದ ಬೆನ್ನೆಲುಬು ರೈತ ಎನ್ನಲಾಗುತ್ತಿದೆ. ರೈತನ ಬೆನ್ನೆಲುಬು ಜಾನುವಾರುಗಳಾಗಿವೆ. ಅವುಗಳ ಆರೋಗ್ಯದ ಕಡೆಗೆ ಗಮನ ನೀಡುವ ಮೂಲಕ ಹೈನುಗಾರಿಕೆಗೆ ಒತ್ತು ನೀಡಿ ಕ್ಷೀರ ಕ್ರಾಂತಿ ಆಗಬೇಕು ಎಂದರು.ಗ್ರಾಪಂ ಸದಸ್ಯರಾದ ವಿಶ್ವಂಬರ ಬನಸಿ, ಪಿಡಿಒ ರೇಣುಕಾ ಕೊಪ್ಪದ, ಸೋಮಶೇಖರ ಕಾಳೆ, ಮಂಜುನಾಥ ಕುಲಕರ್ಣಿ, ಗಂಗಯ್ಯ ಚಿಕ್ಕಮಠ, ಸೈಯ್ಯದ್‌ ಮಂಗಳಗಟ್ಟಿ, ಕುತುಬು ನದಾಫ, ಪಶು ಪರೀಕ್ಷಕರು ಅಕ್ಷಯ ಹಿರೇಮಠ, ಲಕ್ಷ್ಮಣ ಪೋಳ, ಕಳಕಪ್ಪ ಚಂಡೂರ ಇದ್ದರು.