ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳ ಕುಶಾಲನಗರ ತಾಲೂಕು ಮಟ್ಟದ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್ ಅಧ್ಯಕ್ಷತೆಯಲ್ಲಿ ಪುರಸಭೆ ಸಭಾಂಗಣದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ ‌ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳ ಕುಶಾಲನಗರ ತಾಲೂಕು ಮಟ್ಟದ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್ ಅಧ್ಯಕ್ಷತೆಯಲ್ಲಿ ಪುರಸಭೆ ಸಭಾಂಗಣದಲ್ಲಿ ನಡೆಯಿತು.

ಪಂಚ ಯೋಜನೆಗಳ ಬಗ್ಗೆ ಚರ್ಚಿತ ವಾದ ಹಿಂದಿನ ಸಭೆಯ ಅನುಪಾಲನಾ ವರದಿ‌ ಬಗ್ಗೆ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು. ಗ್ಯಾರೆಂಟಿ ಯೋಜನೆಗಳು ಎಲ್ಲಾ ಫಲಾನುಭವಿಗಳಿಗೆ ದೊರೆಯುವಲ್ಲಿ ಅಧಿಕಾರಿಗಳು ಶ್ರಮವಹಿಸಬೇಕಿದೆ ಎಂದು ವಿ.ಪಿ.ಶಶಿಧರ್ ಸೂಚಿಸಿದರು.

ಸಭೆಗೆ ಪಾಲ್ಗೊಳ್ಳದೆ ಸಿಬ್ಬಂದಿ ಕಳುಹಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲೂಕು ಮಟ್ಟದ ಅಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲಾಯಿತು. ಸಮರ್ಪಕ ಮಾಹಿತಿ‌ ಇಲ್ಲದ ಸಿಬ್ಬಂದಿಗಳನ್ನು ಸಭೆಗೆ ಕಳುಹಿಸುವ ಪರಿಪಾಠದ ಬಗ್ಗೆ ಸಭಾಧ್ಯಕ್ಷರು ಹರಿಹಾಯ್ದರು.

ಸಭೆಗೆ ಸತತವಾಗಿ ಗೈರಾಗುತ್ತಿರುವ ಇಲಾಖೆಯ ಅಧಿಕಾರಿ ಶ್ರೀದೇವಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.

ಶಕ್ತಿ ಯೋಜನೆ ಸಂಬಂಧಿಸಿದಂತೆ ಬಸವನಹಳ್ಳಿಯಲ್ಲಿ ನೂತನ ಡಿಪೋ‌ ನಿರ್ಮಾಣ ಕಾಮಗಾರಿ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು. ಕೂಡ್ಲೂರು ಕೈಗಾರಿಕಾ ಘಟಕದ‌ ಕಾರ್ಮಿಕರಿಗೆ ಶಕ್ತಿ ಯೋಜನೆ ಸೌಲಭ್ಯ ದೊರೆಯದಿರುವ ಬಗ್ಗೆ ವಿ.ಪಿ.ಶಶಿಧರ್ ವಿಷಯ ಪ್ರಸ್ತಾಪಿಸಿದರು. ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಮಡಿಕೇರಿ ಡಿಪೋ ಮೂಲಕ ಬಸ್ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಸಂಚಾರಿ ನಿಯಂತ್ರಣಾಧಿಕಾರಿಗೆ ಸೂಚಿಸಿದರು.ಹೆಬ್ಬಾಲೆ, ಶಿರಂಗಾಲ ಭಾಗದಿಂದ ಬರುವ ಕೂಲಿ‌ ಕಾರ್ಮಿಕರಿಗೆ ಸಾರಿಗೆ ಬಸ್ ಸೌಲಭ್ಯ ದೊರಕದೆ ಖಾಸಗಿ ವಾಹನಗಳಿಗೆ‌ ಹೆಚ್ಚುವರಿ ಹಣ ನೀಡಿ ಕೆಲಸಕ್ಕೆ‌ ಬರುವ ಪರಿಸ್ಥಿತಿ ಇರುವ ಬಗ್ಗೆ ಸದಸ್ಯ ಕೆ.ಎಸ್.ಕೃಷ್ಣೇಗೌಡ ವಿವರಿಸಿದರು.

ಸುಂದರನಗರ ಮಾರ್ಗವಾಗಿ‌ ಕೂಡ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿ ಕಾಲೇಜು‌ ವಿದ್ಯಾರ್ಥಿಗಳಿಗೆ ಅನುಕೂಲ‌ ಒದಗಿಸಲು ಸದಸ್ಯ ರಾಜಶೇಖರ್ ಕೋರಿದರು. ಅಗತ್ಯವಿರುವ ಗ್ರಾಮಗಳಿಗೆ ಹೆಚ್ಚುವರಿ ಬಸ್ ರೂಟ್ ಕಲ್ಪಿಸುವ ಬಗ್ಗೆ ಚರ್ಚೆ ನಡೆಯಿತು.ಪಡಿತರ ಚೀಟಿ ರದ್ದತಿ, ಹೊಸ‌ ಬಿಪಿಎಲ್ ಕಾರ್ಡ್ ವಿತರಣೆ ಬಗ್ಗೆ ಆಹಾರ ನಿರೀಕ್ಷಕರಿಂದ ಮಾಹಿತಿ ಪಡೆಯಲಾಯಿತು.

ಈಗಾಗಲೆ ಬಿಪಿಎಲ್ ನಿಂದ‌ ಎಪಿಎಲ್ ಗೆ ವರ್ಗವಾವಣೆಗೊಂಡ‌ ಪಡಿತರ ಚೀಟಿ ಪರಿಶೀಲನೆಗೆ ಅವಕಾಶ ಕಲ್ಪಿಸಿದ್ದು ಅರ್ಹ‌ ಫಲಾನುಭವಿಗಳು ತಹಸೀಲ್ದಾರ್ ಗೆ ಅರ್ಜಿ‌ ಸಲ್ಲಿಸುವಂತೆ ಸಭೆಯ ಮೂಲಕ ವಿ.ಪಿ.ಶಶಿಧರ್ ಕೋರಿದರು.

ಬಿಪಿಎಲ್ ಪಡಿತರ ಚೀಟಿ ಪಡೆದುಕೊಳ್ಳಲು ಇದ್ದ ನಿಯಮಗಳ ಸಡಿಲಿಕೆ‌ ಬಗ್ಗೆ ಚರ್ಚೆ ನಡೆಯುತ್ತಿದೆ. ಮೆಡಿಕಲ್ ಎಮರ್ಜೆನ್ಸಿ ಗೆ ಬಿಪಿಎಲ್‌ ಕಾರ್ಡ್ ಒದಗಿಸುವ ಅವಕಾಶವಿದೆ ಎಂದು ಅವರು ತಿಳಿಸಿದರು.ಉಳಿದಂತೆ ಯುವನಿಧಿ, ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.ಇಲಾಖೆಗೆ ಒಳಪಡುವ ಅಂಗನವಾಡಿ ಹುದ್ದೆಗೆ ನೇಮಕಾತಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿದ ಇಬ್ಬರು ವಿಧವಾ ಮಹಿಳೆಯರ ಅರ್ಜಿ‌ ಕಾಣೆಯಾದ ಪ್ರಕರಣದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಪ್ರಥಮ‌ ಪ್ರಾಶಸ್ತ್ಯ‌ ನೀಡಬೇಕಾದ ಅರ್ಜಿ ಬದಿಗೊತ್ತಿ ಸೂಕ್ತ ಕಾರಣ ನೀಡದೆ ನುಣುಚಿಕೊಳ್ಳುವ ಪ್ರಹಸನ ಆಮಿಷಕ್ಕೆ‌ ಒಳಗಾಗಿರುವ ಬಗ್ಗೆ ಸಂಶಯ ಮೂಡುತ್ತಿದೆ ಎಂದು ಅಧಿಕಾರಿಗಳಿಗೆ ಛೀಮಾರಿ ಹಾಕಿದರು. ಸದ್ಯದಲ್ಲೆ ಶಾಸಕರ ಸಮ್ಮುಖದಲ್ಲಿ ನಡೆಯುವ ಕೆಡಿಪಿ ಸಭೆಯಲ್ಲಿ ಹಿರಿಯ ಅಧಿಕಾರಿ ಪಾಲ್ಗೊಂಡು ಸೂಕ್ತ ಉತ್ತರ ನೀಡಬೇಕಿದೆ ಎಂದು ಶಶಿಧರ್ ಅಧಿಕಾರಿಗಳಿಗೆ ಸೂಚಿಸಿದರು.

ಉದ್ದಿಮೆ ಆರಂಭಿಸಲು ಸಾಲ‌ಸೌಲಭ್ಯ ಯೋಜನೆಗೆ ಫಲಾನುಭವಿಗಳ‌ ಆಯ್ಕೆ ಪ್ರಕ್ರಿಯೆ ಯಲ್ಲಿ ಕೂಡ ಸ್ವಜನ‌ಪಕ್ಷಪಾತ ನಡೆದಿರುವ ಬಗ್ಗೆ ಶಶಿಧರ್ ಅಧಿಕಾರಿಗಳ ಗಮನ ಸೆಳೆದರು.ಸಭೆಯಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್, ಜಿಲ್ಲಾ ಸಮಿತಿ ಉಪಾಧ್ಯಕ್ಷ ಕೆ.ಸಿ.ಶಶಿಭೀಮಯ್ಯ, ಸದಸ್ಯರಾದ ಕೆ.ಎಸ್.ಕೃಷ್ಣೇಗೌಡ, ವಿವೇಕಾನಂದ ಎಸ್.ಎಸ್, ಶ್ರೀನಿವಾಸ್ ಕುಮಾರ್ ಎನ್, ಆದಂ ಎಂ.ಎ, ಶ್ರೀನಿವಾಸ್ ಎಸ್, ಮಲ್ಲಿಕಾರ್ಜುನ ಬಿ.ಸಿ, ಕಿಶೋರ್ ಯು.ಎಂ, ರಫೀಕ್ ಖಾನ್, ರಾಜಶೇಖರ, ಫಿಲೋಮಿನ ಇದ್ದರು.