ಸಮೃದ್ಧ, ಸದೃಢವಾಗಿ ಬೆಳೆದ ಭಾರತ

| Published : Aug 16 2024, 12:45 AM IST

ಸಾರಾಂಶ

ಮಲೆನಾಡು ಭಾಗದ ಅಳ್ನಾವರ ಕೃಷಿ ಪ್ರಧಾನ ತಾಲೂಕಾಗಿದ್ದು ನೂತನ ತಾಲೂಕು ರಚನೆ ನಂತರ ಮೂಲಭೂತ ಸೌಕರ್ಯಗಳು ಜನರಿಗೆ ಸಕಾಲದಲ್ಲಿ ಮುಟ್ಟುವಂತೆ ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸಲಾಗಿದೆ ಎಂದು ತಹಸೀಲ್ದಾರ್‌ ಹೇಳಿದರು.

ಅಳ್ನಾವರ:

ಭಾರತವು ಸ್ವತಂತ್ರಗೊಂಡು ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸಮಯದಲ್ಲಿ ಸಮೃದ್ಧ ಮತ್ತು ಸದೃಢ ದೇಶವಾಗಿ ಮುನ್ನಡೆಯುತ್ತಿರುವುದು ನಮಗೆ ಹೆಮ್ಮೆಯ ಸಂಗತಿ ಎಂದು ತಹಸೀಲ್ದಾರ್‌ ಬಸವರಾಜ ಬೆಣ್ಣೆಶಿರೂರ ಹೇಳಿದರು.

ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಕೆರೆ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಅನೇಕರ ತ್ಯಾಗ-ಬಲಿದಾನದ ಮೂಲಕ ದೇಶಕ್ಕೆ ಸ್ವತಂತ್ರ ದೊರೆತಿದ್ದು ದೇಶದ ಅಖಂಡತೆ ಎತ್ತಿ ಹಿಡಿಯುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಮಲೆನಾಡು ಭಾಗದ ಅಳ್ನಾವರ ಕೃಷಿ ಪ್ರಧಾನ ತಾಲೂಕಾಗಿದ್ದು ನೂತನ ತಾಲೂಕು ರಚನೆ ನಂತರ ಮೂಲಭೂತ ಸೌಕರ್ಯಗಳು ಜನರಿಗೆ ಸಕಾಲದಲ್ಲಿ ಮುಟ್ಟುವಂತೆ ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸಲಾಗಿದೆ. ಕಳೆದ ಸಾಲಿನ ಬರಗಾಲವನ್ನು ಸಮರ್ಪಕವಾಗಿ ನಿಭಾಯಿಸುವ ಜತೆಗೆ ಪ್ರಸಕ್ತ ಮುಂಗಾರು ಮಳೆಯಲ್ಲಿ ಯಾವುದೇ ಅವಘಡ ಸಂಭವಿಸುವುದನ್ನು ತಡೆಯಲು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಕೈಕೊಂಡು ಜನರ ಸುರಕ್ಷತೆಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಕಳೆದ ಸಾಲಿನ ಎಸ್‌ಎಲ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಾಪಂ ಇಒ ಪ್ರಶಾಂತ ತುರಕಾಣಿ, ಮುಖ್ಯಾಧಿಕಾರಿ ಪ್ರಕಾಶ ಮಗದುಮ್, ಪಿಎಸ್‌ಐ ಪ್ರವೀಣ ನೇಸರಗಿ, ಟೌನ್‌ ಫಾರೆಸ್ಟರ ಪ್ರಕಾಶ ಕಮ್ಮಾರ, ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ವಿನಾಯಕ ಕುರುಬರ, ಕಸಾಪ ಅಧ್ಯಕ್ಷ ಗುರುರಾಜ ಸಬನೀಸ, ಪ್ರಾಚಾರ್ಯ ಎ.ಎ. ಅತ್ತಾರ, ಪತ್ರಕರ್ತರ ಸಂಘದ ಅಧ್ಯಕ್ಷ ಕೇಶವ ಗುಂಜೀಕರ, ಸತ್ತಾರ ಬಾತಖಂಡೆ, ಸಿಆರ್‌ಪಿ ಎಂ.ಡಿ. ಹೊಸಮನಿ, ಪಪಂ ಸದಸ್ಯರು, ಶಾಲಾ ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.