ನಿತ್ಯ ಯೋಗಾಭ್ಯಾಸದಿಂದ ಆರೋಗ್ಯ ರಕ್ಷಣೆ

| Published : Jun 22 2025, 01:18 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಮನುಷ್ಯನಿಗೆ ಮಾನಸಿಕ ನೆಮ್ಮದಿ ನೀಡುವ ಅಪೂರ್ವ ಶಕ್ತಿ ಯೋಗಕ್ಕಿದೆ. ಮಾನವ ಸಂಕುಲವನ್ನು ರಕ್ಷಿಸುವಲ್ಲಿ ಯೋಗ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಯೋಗಾಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ಆರೋಗ್ಯ ರಕ್ಷಣೆ ಹಾಗೂ ರೋಗಗನ್ನು ನಿಯಂತ್ರಿಸಬಹುದು ಎಂದು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಡಾ.ಜಾವೀದ ಜಮಾದಾರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮನುಷ್ಯನಿಗೆ ಮಾನಸಿಕ ನೆಮ್ಮದಿ ನೀಡುವ ಅಪೂರ್ವ ಶಕ್ತಿ ಯೋಗಕ್ಕಿದೆ. ಮಾನವ ಸಂಕುಲವನ್ನು ರಕ್ಷಿಸುವಲ್ಲಿ ಯೋಗ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಯೋಗಾಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ಆರೋಗ್ಯ ರಕ್ಷಣೆ ಹಾಗೂ ರೋಗಗನ್ನು ನಿಯಂತ್ರಿಸಬಹುದು ಎಂದು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಡಾ.ಜಾವೀದ ಜಮಾದಾರ ಹೇಳಿದರು.

ನಗರದ ವಿಶ್ವವಿಖ್ಯಾತ ಗೋಲಗುಮ್ಮಜ ಆವರಣದಲ್ಲಿ ಕೇಂದ್ರ ಸಂಸ್ಕೃತಿ ಮಂತ್ರಾಲಯ, ಕೇಂದ್ರ ಪ್ರಾಚ್ಯ ವಸ್ತು ಸಂರಕ್ಷಣಾ ಸಚಿವಾಲಯ ಹಾಗೂ ಭಾರತೀಯ ಪುರಾತತ್ವ ಸಂರಕ್ಷಣೆ ಧಾರವಾಡ ವಲಯದ ಸಂಯುಕ್ತ ಆಶ್ರಯದಲ್ಲಿ ೧೧ನೇ ಅಂತಾರಾಷ್ಟ್ರೀಯ ಯೋಗ ದಿನ ಉದ್ಘಾಟಿಸಿ ಮಾತನಾಡಿದರು.

ಅನಿವಾರ್ಯವಾಗಿ ಒತ್ತಡದ ಬದುಕಿಗೆ ನೆಮ್ಮದಿ ಜೀವನ ನಡೆಸಲು ಯೋಗವು ಒಂದು ದಿವ್ಯ ರೀತಿಯ ಔಷಧ. ಯೋಗವನ್ನು ನಿತ್ಯವು ಮಾಡುವುದರಿಂದ ಆರೋಗ್ಯಕರ ಸದೃಢ ಮನಸ್ಸು ಸಂಪಾದಿಸಲು ಸಾಧ್ಯ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಯೋಗ ಮತ್ತು ಸಂಸ್ಕೃತಕ್ಕೆ ಹೆಚ್ಚಿನ ಮಹತ್ವ ಸಿಗುತ್ತಿದೆ. ನಮ್ಮ ದೇಶದಲ್ಲಿಯೂ ಯೋಗ ಇತ್ತೀಚಿನ ದಿನಗಳಲ್ಲಿ ವೇಗವಾಗಿ ಪ್ರವರ್ದಮಾನಕ್ಕೆ ಬರುತ್ತಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಸಂಸ್ಕೃತಿ ಮೌಲ್ಯ ಗಳಿಸಿಕೊಳ್ಳದೆ ಇದ್ದಲ್ಲಿ ವಿದ್ಯೆಗೆ ಯಾವುದೇ ಗೌರವ ಸಿಗುವದಿಲ್ಲ. ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಯೋಗ ಕಲಿಯುವದರಿಂದ ಉತ್ತಮ ಆರೋಗ್ಯ ಸಾಧ್ಯ ಕಲಿಕೆ ಜೊತೆಗೆ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳ ಕಡೆಗೆ ಗಮನ ನೀಡಬೇಕೆಂದರು. ಸದೃಢ ವ್ಯಕ್ತಿ, ಸದೃಢ ಸಮಾಜ, ಸದೃಢ ರಾಷ್ಟ್ರ ಪರಿಕಲ್ಪನೆಯೊಂದಿಗೆ ಆರೋಗ್ಯವಂತ ಜೀವನಕ್ಕಾಗಿ ಯೋಗಾಭ್ಯಾಸವನ್ನು ದೈನಂದಿನ ಕಾರ್ಯವಾಗಬೇಕು ಎಂದು ಸಲಹೆ ನೀಡಿದರು.

ಭಾರತೀಯ ಪುರಾತತ್ವ ಸಂರಕ್ಷಣೆ ಸಹಾಯಕ ಅಧಿಕಾರಿ ಎಂ.ವಿ.ವಿಜಯಕುಮಾರ ಮಾತನಾಡಿ, ರಾಷ್ಟ್ರದ ೧೮೯ ಐತಿಹಾಸಿಕ ಪಾರಂಪರಿಕ ಸ್ಥಳಗಳಲ್ಲಿ ಹಾಗೂ ಧಾರವಾಡ ವಲಯದ ಬದಾಮಿ, ಪಟ್ಟದಕಲ್ಲು, ಐಹೊಳೆ, ಗೋಲಗುಂಬಜ್‌ನಲ್ಲಿ ಅಂತಾರಾಷ್ಟ್ರೀಯ ೧೧ನೇ ಯೋಗ ದಿನಾಚರಣೆಯನ್ನು ಆಯೋಜನೆ ಮಾಡಲಾಗಿದೆ. ನಮ್ಮ ಪಾರಂಪರಿಕ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುವ ಜೊತೆಗೆ ಯುವ ಸಮುದಾಯದಲ್ಲಿ ಯೋಗದ ಮಹತ್ವವನ್ನು ತಿಳಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಉಪ ಅಧೀಕ್ಷಕ ಪುರಾತತ್ವ ಇಲಾಖೆ ಅಭಿಯಂತರ ಎನ್.ಬಿ.ಡಿ.ಕೆಂಪೇಗೌಡ ಮಾತನಾಡಿ, ಯೋಗ, ಕ್ಷೇಮ ಮತ್ತು ಪರಿಸರ ಸಾಮರಸ್ಯವನ್ನು ಉತ್ತೇಜಿಸುವಲ್ಲಿ ಯೋಗ ಪ್ರಮುಖ ಪಾತ್ರವನ್ನು ತೋರಿಸುತ್ತದೆ. ಹಾಗೂ ದೈಹಿಕ, ಮಾನಸಿಕ ಮತ್ತು ಅಧ್ಯಾತ್ಮಿಕ ಆರೊಗ್ಯವನ್ನು ಹೆಚ್ಚಿಸಲು ಲಕ್ಷಾಂತರ ಜನರು ಯೋಗಾಭ್ಯಾಸದಲ್ಲಿ ಒಂದುಗೂಡಿಸಿ ಈ ಯೋಗವು ಹೆಚ್ಚಿನ ನಮ್ಯತೆ, ಶಕ್ತಿ ಸಮತೋಲನ ಮತ್ತು ಒತ್ತಡ ಸೇರಿದಂತೆ ವ್ಯಾಪಕ ಶ್ರೇಣಿಯ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳನ್ನು ನೀಡುತ್ತದೆ ಎಂದರು.

ಯೋಗ ಗುರುಗಳಾದ ಸುರೇಶ ಆನಂದಿ ಯೋಗದ ವಿವಿಧ ಆಯಾಮಗಳ ತರಬೇತಿಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ನೇರ ಪ್ರಸಾರವನ್ನು ಪರದೆಯ ಮೇಲೆ ಬಿತ್ತರಿಸಲಾಗಿತ್ತು. ವಿಶ್ವವಿಖ್ಯಾತ ಗೋಲಗುಂಬಜ್‌ ವೀಕ್ಷಣೆಯನ್ನು ೧೧ನೇ ಯೋಗ ದಿನಾಚರಣೆಯ ಅಂಗವಾಗಿ ಉಚಿತ ಪ್ರವೇಶ ಇಡಲಾಗಿದೆ. ಅನೇಕ ಪ್ರವಾಸಿಗರು ಇದರ ಲಾಭವನ್ನು ಪಡೆದರು. ಸುರೇಶ ಬಿರಾದಾರ ಸ್ವಾಗತಿಸಿದರು ಅಮರದೀಪ ವಂದಿಸಿದರು. ಪ್ರೊ.ರಾಜು ಕಪಾಳೆ ನಿರೂಪಿಸಿದರು.