ಹಳಿಯಾಳ: ಗೋವುಗಳ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ ಎಂದು ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ತಾಲೂಕಿನ ದುಸಗಿ ಗ್ರಾಮದಲ್ಲಿರುವ ಜಿಲ್ಲಾ ಸರ್ಕಾರಿ ಗೋಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. ನಮ್ಮ ದೇಶದ ಪರಂಪರೆಯಲ್ಲಿ ಗೋವುಗಳನ್ನು ದೇವರಿಗೆ ಸಮಾನವಾಗಿ ಪೂಜಿಸಲಾಗುತ್ತದೆ. ಗೋವುಗಳನ್ನು ಕುಟುಂಬದ ಸದಸ್ಯರಂತೆ ಕಾಣುತ್ತೇವೆ. ಹೀಗಿರುವಾಗ ಗೋವುಗಳಿಗೆ ವಯಸ್ಸಾಯಿತೆಂದು ಅಮಾನವೀಯ ರೀತಿಯಲ್ಲಿ ನಡೆದುಕೊಳ್ಳುವುದು ಸರಿಯಲ್ಲ ಎಂದರು. ಸರ್ಕಾರಿ ಗೋಶಾಲೆಯೆಂದು ಇದರ ನಿರ್ವಹಣೆಯನ್ನು ಸರ್ಕಾರದ ಮೇಲೆ ಹಾಕದೇ ನಾವು ಈ ಗೋಶಾಲೆಯ ನಿರ್ವಹಣೆಗೆ ಕೈಜೋಡಿಸಬೇಕು. ಸಾಧ್ಯವಾದಷ್ಟು ಆರ್ಥಿಕವಾಗಿ ಅಥವಾ ಸಾಮಗ್ರಿಗಳ ರೂಪದಲ್ಲಿ ನೆರವು ನೀಡಬೇಕು. ಜಾನುವಾರುಗಳ ಸೇವಿಸುವ ಮೇವನ್ನು ದಾನವಾಗಿ ನೀಡಬೇಕು ಎಂದರು.

ಅಭಿವೃದ್ಧಿಗೆ-ಚಾಲನೆ: ಕಾರ್ಯಕ್ರಮದಲ್ಲಿ ಶಾಸಕರು ತಮ್ಮ ಕಿರಿಯ ಪುತ್ರ ಪ್ರಶಾಂತ ಆರ್. ದೇಶಪಾಂಡೆ ಅವರು ₹10 ಲಕ್ಷ ವೆಚ್ಚದಲ್ಲಿ ಗೋ-ಶಾಲೆಗೆ ದಾನವಾಗಿ ನೀಡಿದ ಸೋಲಾರ್ ವಿದ್ಯುತ್ ಸೌಲಭ್ಯ, ಸರ್ಕಾರದ ಪಶು ಸಂಗೋಪನಾ ಇಲಾಖೆಯ ಯೋಜನೆಯಲ್ಲಿ 6 ಫಲಾನುಭವಿಗಳಿಗೆ ಮೇವು ಕತ್ತರಿಸುವ ಯಂತ್ರವನ್ನು ಶಾಸಕರು ವಿತರಿಸಿದರು. ರಾಜ್ಯ ಸರ್ಕಾರದಿಂದ ₹75 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಜಾನುವಾರಗಳ ಆಶ್ರಯ ತಾಣ, ಮೇವು ಉಗ್ರಾಣ ಕೊಠಡಿ ಸೇರಿದಂತೆ ಸಿಬ್ಬಂದಿ ವಸತಿಗೃಹಗಳಿಗೆ ಶಿಲಾನ್ಯಾಸ ನೆರವೇರಿಸಿದರು. ರಾಷ್ಟ್ರೀಯ ಕಾಲು-ಬಾಯಿ ಲಸಿಕಾ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರಾಜ್ಯದಲ್ಲಿಯೇ ನಂಬರ್ ಒನ್ ಗೋಶಾಲೆ: ಪಶು ಸಂಗೋಪನಾ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ. ಕೆ.ಎಂ. ನದಾಫ್‌ ಹವಗಿ, ಗ್ರಾಮದಲ್ಲಿ ಜಿಲ್ಲಾ-ಗೋಶಾಲೆ ಆರಂಭವಾದ ನಂತರ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳು, ಶಾಸಕರು ವಿಶೇಷ ಆಸಕ್ತಿ ವಹಿಸಿ ತಂದ ಅನುದಾನ ಹಾಗೂ ಉದ್ಯಮಿಗಳ ಸಿಎಸ್‌ಆರ್‌ ನಿಧಿಯಡಿ ಶಾಸಕರು ಗೋಶಾಲೆಯಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಿತ್ರಣ ನೀಡಿದರು. ರಾಜ್ಯದಲ್ಲಿಯೇ ಅತ್ಯುತ್ತಮವಾದ ಸರ್ಕಾರಿ ಗೋಶಾಲೆಯೆಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದ್ದು, ಸದ್ಯ 180ಕ್ಕೂ ಹೆಚ್ಚು ಜಾನುವಾರುಗಳು ಗೋಶಾಲೆಯಲ್ಲಿವೆ. ಗೋಶಾಲೆಯ ನಿರ್ವಹಣೆ ಹಾಗೂ ಇಲ್ಲಿನ ಅಚ್ಚುಕಟ್ಟುತನ ನೀಡಿ ಶಾಸಕರ ಮನವಿಗೆ ಸ್ಪಂದಿಸಿ, ರಾಜ್ಯ ಸರ್ಕಾರವು ₹75 ಲಕ್ಷ ಅನುದಾನ ಬಿಡುಗಡೆ ಮಾಡಿದೆ ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಸಂತೋಷ ರೇಣಕೆ, ಯುವ ಕಾಂಗ್ರೆಸ್ ಮುಖಂಡ ರವಿ ತೋರಣಗಟ್ಟಿ, ತಹಸೀಲ್ದಾರ್‌ ಫಿರೋಜಷಾ ಸೋಮನಕಟ್ಟಿ, ತಾಪಂ ಇಒ ವಿಲಾಸರಾಜ್ ಪ್ರಸನ್ನ, ಕೆಎಚ್‌ಬಿ ಮಂಡಳಿ ಹಾವೇರಿಯ ಕಾರ್ಯನಿರ್ವಾಹಕ ಎಂಜಿನಿಯರ್ ಹರೀಶ ಡಿ., ಸೆಲ್ಕೊ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಡಿಜಿಎಂ ಪ್ರಸನ್ನ ಹೆಗಡೆ ಹಾಗೂ ತೇರಗಾಂವ ಜಿಪಂ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ಇದ್ದರು.