ಸಾರಾಂಶ
ಗದಗ: ಜಗತ್ತಿನಲ್ಲಿ ಮಾನವ ಹಕ್ಕುಗಳ ಬಗ್ಗೆ ನಿಜವಾಗಿ ಅರ್ಥೈಸಿಕೊಂಡು ಅದನ್ನು ಜಾರಿಗೆ ತಂದ ಯಾವುದಾದರೂ ಸಂಸ್ಥೆ ಇದ್ದರೆ ಅದು ಗದುಗಿನ ವೀರೇಶ್ವರ ಪುಣ್ಯಾಶ್ರಮ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಲಿಂ.ಪಂ. ಪಂಚಾಕ್ಷರಿ ಗವಾಯಿಗಳವರ 81ನೇ ಹಾಗೂ ಪದ್ಮಭೂಷಣ ಲಿಂ.ಡಾ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಶಿವಾನುಭವ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಂಗವಿಕಲರನ್ನು ರಕ್ಷಿಸಿ, ಅವರಿಗೆ ಅನ್ನ, ಶಿಕ್ಷಣ ನೀಡಿ, ಸ್ವಾವಲಂಬಿಯಾಗಿ ಮಾಡುವ ಮೂಲಕ ದೇಶದ ಆಸ್ತಿಯನ್ನಾಗಿ ಮಾಡಿರುವುದು ಉಭಯ ಶ್ರೀಗಳ ಮಹಾನ್ ಕೆಲಸವಾಗಿದೆ ಎಂದು ಹೇಳಿದರು.ನಾವು ಬಸವಣ್ಣನವರ ಧಾರ್ಮಿಕ ಸಂದೇಶಗಳಿಗೆ ಮಾತ್ರ ಹೆಚ್ಚು ಒತ್ತು ಕೊಟ್ಟಿರುವುದರಿಂದ ಅವರನ್ನು ರಾಜ್ಯಕ್ಕೆ ಮಾತ್ರ ಸೀಮಿತ ಮಾಡಲಾಗಿರುವುದು ವಿಷಾದನೀಯ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ ಬಸವೇಶ್ವರರ ತತ್ವಗಳ ಬಗ್ಗೆ ಪೂರ್ಣವಾಗಿ ನಾನು ತಿಳಿದುಕೊಂಡಿದ್ದರೆ ನನ್ನ ಧಾರ್ಮಿಕ ನಿಲುವು ಬೇರೆ ಆಗಿರುತ್ತಿತ್ತು. ಬಸವಣ್ಣವರ ಆಲೋಚನೆಗಳು, ಸಂದೇಶಗಳು, ನೈಜ ವ್ಯಕ್ತಿತ್ವವನ್ನು ವಿಶ್ವಮಟ್ಟಕ್ಕೆ ಪರಿಚಯಿಸಬೇಕಿದೆ ಎಂದರು.
ಪಂ. ಪುಟ್ಟರಾಜ ಗವಾಯಿಗಳವರ ಸ್ಮಾರಕ ಭವನ ಪೂರ್ಣಗೊಳ್ಳಬೇಕು. ಇದಕ್ಕೆ ಎಲ್ಲ ಗುರುಗಳ ಆಶೀರ್ವಾದವೂ ಬೇಕಾಗಿದೆ. ಮುಂದಿನ ವರ್ಷ ಜಾತ್ರಾಮಹೋತ್ಸವದ ಕಾರ್ಯಕ್ರಮಗಳು ಸ್ಮಾರಕ ಭವನದಲ್ಲಿ ಜರುಗುತ್ತವೆ ಎಂದರು.ತೋಂಟದಾರ್ಯ ಮಠದ ಡಾ. ಸಿದ್ಧರಾಮ ಸ್ವಾಮಿಗಳು ಮಾತನಾಡಿ, ಉಭಯ ಶ್ರೀಗಳು ಲೋಕ ಕಂಡ ಅದ್ಭುತ ಮಹಾಪುರುಷರು. ಪ್ರಯತ್ನ ಮಾಡಿದ ಪ್ರತಿಯೊಬ್ಬರೂ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ಸಾಧನೆ ಮಾಡಿದ ಅತ್ಯಂತ ವಿರಳ ವ್ಯಕ್ತಿಗಳಲ್ಲಿ ಉಭಯ ಶ್ರೀಗಳು ಮುಂಚೂಣಿಯಲ್ಲಿದ್ದಾರೆ. ಯಾವ ಮಕ್ಕಳು ತಂದೆ-ತಾಯಿ ಹಾಗೂ ಸಮಾಜಕ್ಕೆ ಹೊರೆಯಾಗುತ್ತಾರೋ ಅಂತಹ ಮಕ್ಕಳಿಗೆ ಸ್ವಾವಲಂಬಿ ಬದುಕನ್ನು ನೀಡಿ, ಪವಾಡ ಪುರುಷರೆನಿಸಿಕೊಂಡವರು ಉಭಯ ಶ್ರೀಗಳು ಎಂದರು.
ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಸ್ವಾಮಿಗಳು, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಗಳು, ಅಷ್ಟಗಿ ನಿಜಲಿಂಗ ಶಿವಾಚಾರ್ಯರು, ಬೊಮ್ಮನಹಳ್ಳಿ ವಿರಕ್ತಮಠದ ಶ್ರೀ ಶಿವಯೋಗೇಶ್ವರ ಸ್ವಾಮಿಗಳು, ಕೂಡಲ ಗುರುನಂಜೇಶ್ವರ ಮಠದ ಶ್ರೀಗುರು ಮಹೇಶ್ವರ ಶಿವಾಚಾರ್ಯ ಸ್ವಾಮಿಗಳು, ಲಿಂಗಸೂರಿನ ಮಾಣಿಕೇಶ್ವರಿ ಆಶ್ರಮದ ಶ್ರೀ ಶಿವಶರಣೆ ನಂದೀಶ್ವರಿ ಅಮ್ಮನವರು ಸಮ್ಮುಖ ವಹಿಸಿದ್ದರು.ವಿಪ ಸದಸ್ಯ ಎಸ್.ವಿ. ಸಂಕನೂರ, ಪೀರಸಾಬ ಕೌತಾಳ, ಪ್ರಕಾಶ ಕರಿ, ಡಾ. ಆನಂದ ಪಾಂಡುರಂಗಿ, ಸದು ಮದರಿಮಠ, ಸಂಗಮೇಶ ದುಂದೂರ, ಪರಶುರಾಮ ಕಟ್ಟಿಮನಿ, ರುದ್ರಗೌಡ ರಬ್ಬನಗೌಡ್ರ, ಅರುಣ ಕಟ್ಟಿಮನಿ, ವಿಶ್ವನಾಥ ಹೂಗಾರ, ಮಹಾಂತಯ್ಯ ಸಾಲಿಮಠ ಇದ್ದರು.
ಇದೇ ಸಂದರ್ಭದಲ್ಲಿ ಕಲಬುರಗಿಯ ಬಲವಂತ ಉದನೂರ ಹಾಗೂ ಕುಟನೂರ (ಡಿ) ಶಿವಶಂಕರ ಬಿರಾದಾರ ಅವರಿಂದ ಪುಣ್ಯಾಶ್ರಮದ ಪೀಠಾಧಿಪತಿ ಶ್ರೀ ಕಲ್ಲಯ್ಯಜ್ಜ ಅವರಿಗೆ ತುಲಾಬಾರ ಸೇವೆ ಜರುಗಿತು. ಆನಂತರ ಧ್ವನಿ ಸುರಳಿ ಹಾಗೂ ಸಪ್ತಸ್ವರದೀಪ ಗ್ರಂಥ ಬಿಡುಗಡೆಯಾಯಿತು. ಆನಂತರ ಸಂಗೀತ ಸಭೆ ಸ್ವರ ಶ್ರದ್ಧಾಂಜಲಿ ಸಂಗೀತ ಸಮಾರಾಧನೆ ಕಾರ್ಯಕ್ರಮ ಜರುಗಿತು.