ಕಪ್ಪತ್ತಗುಡ್ಡ ರಕ್ಷಣೆ ಪ್ರತಿಯೊಬ್ಬರ ಹೊಣೆ

| Published : Oct 05 2024, 01:38 AM IST

ಸಾರಾಂಶ

ಭವಿಷ್ಯದ ದೃಷ್ಟಿಯಿಂದ ಕಪ್ಪತ್ತಗುಡ್ಡದ ರಕ್ಷಣೆಯ ಹೊಣೆ ಪ್ರತಿಯೊಬ್ಬರದಾಗಿದೆ

ಡಂಬಳ: ಇಲ್ಲಿಗೆ ಸಮೀಪದ ಐತಿಹಾಸಿಕ ಹಿನ್ನೆಲೆಯ ಕಪ್ಪತ್ತಗುಡ್ಡದಲ್ಲಿ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಕೆಎಲ್‌ಇ ಸಂಸ್ಥೆ ಮತ್ತು ಗದಗ ನಗರದ ಜೆ.ಟಿ. ಕಾಲೇಜು ಎನ್‌ಎಸ್‌ಎಸ್‌ ವಿದ್ಯಾರ್ಥಿ ಘಟಕದ ವತಿಯಿಂದ ಸ್ವಚ್ಛತಾ ಅಭಿಯಾನ ನಡೆಯಿತು.

ಕಪ್ಪತ್ತಗುಡ್ಡದ ನಂದಿವೇರಿಮಠದ ಡಾ. ಶಿವಕುಮಾರ ಸ್ವಾಮಿಗಳು ಮಾತನಾಡಿ, ಗುಪ್ತಗಾಮಿನಿಯಾಗಿ ಪ್ರವಹಿಸುತ್ತಿರುವ ಕಪ್ಪತ್ತಗುಡ್ಡದ ಬಂಗಾರದ ಹಳ್ಳದ ನೀರು ನಂದಿವೇರಿ ಬಸವಣ್ಣನ ಎದುರಿಗೆ ಮಾತ್ರ ಉದ್ಭವಿಸಿ ಬಸವಣ್ಣನ ದರ್ಶನ ಪಡೆದು, ಮತ್ತೆ ಗುಪ್ತಗಾಮಿನಿಯಾಗಿ ಹರಿಯುತ್ತಿರುವುದು ಈ ಸ್ಥಳದ ವಿಶೇಷ. ಲಿಂ. ತೋಂಟದ ಡಾ. ಸಿದ್ದಲಿಂಗ ಮಹಾಸ್ವಾಮೀಜಿಗಳು ಹಾಗೂ ಪರಿಸರವಾದಿಗಳ ಹೋರಾಟದ ಫಲವಾಗಿ ಕಪ್ಪತ್ತಗುಡ್ಡದ ಉಸಿರು ಜೀವಂತವಾಗಿದೆ. ಭವಿಷ್ಯದ ದೃಷ್ಟಿಯಿಂದ ಕಪ್ಪತ್ತಗುಡ್ಡದ ರಕ್ಷಣೆಯ ಹೊಣೆ ಪ್ರತಿಯೊಬ್ಬರದಾಗಿದೆ ಎಂದರು.

ಜಿಲ್ಲಾ ನೆಹರು ಯುವ ಕೇಂದ್ರದ ಸಂಚಾಲಕಿ ರಂಜಿನಿ ಎ.ಎಂ. ಪ್ರಾಸ್ತಾವಿಕವಾಗಿ ಮಾತನಾಡಿ, ಸಸ್ಯಸಂಕುಲ ಕಪ್ಪತ್ತಗುಡ್ಡ. ನಾವೆಲ್ಲ ಉಳಿಸಿ ಬೆಳೆಸಬೇಕಿದೆ. ಸಾವಿರಾರು ತರಹದ ಔಷಧಿ, ಗಿಡಮೂಲಿಕೆಗಳು ಮತ್ತು ಹೇರಳವಾದ ಕಬ್ಬಿಣ ಮತ್ತು ಚಿನ್ನದ ಖನಿಜ ಸಂಪತ್ತು ಹೊಂದಿರುವ ಕಪ್ಪತ್ತಗುಡ್ಡದ 80 ಸಾವಿರ ಎಕರೆ ಪ್ರದೇಶವನ್ನು ಅಕ್ರಮ ಗಣಿಗಾರಿಕೆ ಮತ್ತು ಕಾಡುಗಳ್ಳರಿಂದ ರಕ್ಷಿಸಬೇಕಿದೆ ಎಂದರು.

ಕಪ್ಪತ್ತಗುಡ್ಡದ ನಂದಿವೇರಿಮಠದ ಆವರಣದಲ್ಲಿ ಗಾಂಧಿ ಸ್ಮರಣೆಯಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ನಂದಿ ತೀರ್ಥದ ಪ್ರೇಕ್ಷಣೆಗಾಗಿ ಆಗಮಿಸುವ ಭಕ್ತರು ಸರಾಗವಾಗಿ ತಲುಪಲು ಕಾಲುದಾರಿ ನಿರ್ಮಿಸಲಾಯಿತು. 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಚಾರ್ಯೆ ಡಾ. ಎ.ಕೆ. ಮಠ, ವಿದ್ಯಾರ್ಥಿ ಪ್ರಮುಖರಾದ ಪವನ ಕುಲಕರ್ಣಿ, ಸಾಕ್ಷಿ ಹಿರೇಮಠ, ಮೇಘಾ ಮುದ್ದಿ, ರಾಮದುರ್ಗಾ ತಾಲೂಕಿನ ಸಮಾಜ ಸೇವಕ ಬಾಲಚಂದ್ರ ಜಾಬಶೆಟ್ಟಿ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.