ಸಾರಾಂಶ
ಕನ್ನಡಪ್ರಭ ವಾರ್ತೆ ಹಾನಗಲ್ಲ
ಸಂವಿಧಾನ ದುರ್ಬಲಗೊಳಿಸಲು ಹವಣಿಸುತ್ತಿರುವವರಿಗೆ ಸಂವಿಧಾನ ಜಾಗೃತಿಯಿಂದ ತಕ್ಕ ಉತ್ತರ ನೀಡಬಹುದಾಗಿದೆ. ಸಂವಿಧಾನದ ರಕ್ಷಣೆ ಎಂದರೆ ಜನರ ರಕ್ಷಣೆಯಾಗಿದೆ. ಈ ಬಗೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರತಿ ಗ್ರಾಪಂ ಮಟ್ಟದಲ್ಲಿ ಜಾಗೃತಿ ಅಭಿಯಾನ ಕೈಗೊಂಡಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ತಾಲೂಕಿನ ಆಡೂರು ಗ್ರಾಮದಲ್ಲಿ ಶುಕ್ರವಾರ ಸಂಜೆ ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಸಂವಿಧಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಂವಿಧಾನದ ಮೂಲ ಅಂಶಗಳಾದ ಧರ್ಮನಿರಪೇಕ್ಷತೆ, ಜಾತ್ಯತೀತತೆ, ಮೂಲಭೂತ ಹಕ್ಕುಗಳು, ಕರ್ತವ್ಯಗಳ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಇಡೀ ರಾಜ್ಯಾದ್ಯಂತ ಅಭಿಯಾನ ಆಯೋಜಿಸಲಾಗಿದೆ. ದೇಶದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ವಿಕಸನಕ್ಕೆ ಸಂವಿಧಾನ ಬಲಪಡಿಸಬೇಕಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯನ್ನು ಅಧ್ಯಯನ ಮಾಡಿ ದೇಶಕ್ಕೆ ಅತ್ಯುತ್ತಮವಾದ ಸಂವಿಧಾನ ನೀಡಿದ್ದಾರೆ. ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ನ್ಯಾಯ ದೊರಕಿಸಿದ್ದಾರೆ ಎಂದ ಅವರು, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕೆಲವರು ನಡೆದುಕೊಳ್ಳುತ್ತಿದ್ದಾರೆ. ಇಂಥವರಿಗೆ ಸಮಾಜವೇ ಜಾಗೃತಗೊಂಡು ಉತ್ತರಿಸಬೇಕಿದೆ ಎಂದು ಕರೆ ನೀಡಿದರು.
ಇದಕ್ಕೂ ಮೊದಲು ಗ್ರಾಮದ ಹೊರವಲಯದ ಬೀರಲಿಂಗೇಶ್ವರ ದೇವಸ್ಥಾನದ ಎದುರು ಅಭಿಯಾನವನ್ನು ಸ್ವಾಗತಿಸಲಾಯಿತು. ಪ್ರಮುಖ ಬೀದಿಗಳಲ್ಲಿ ಪೂರ್ಣ ಕುಂಭ ಮೆರವಣಿಗೆ ಕೈಗೊಳ್ಳಲಾಗಿತ್ತು. ವಿವಿಧ ಜಾನಪದ ಕಲಾತಂಡಗಳು ಕಳೆ ಹೆಚ್ಚಿಸಿದ್ದವು. ಮನೆಗಳ ಎದುರು ರಂಗೋಲಿ ಬಿಡಿಸಿದ್ದು ಗಮನ ಸೆಳೆಯಿತು.ಗ್ರಾಪಂ ಅಧ್ಯಕ್ಷ ಮಾರ್ತಾಂಡಪ್ಪ ಬಾರ್ಕಿ, ಜಿಪಂ ಮಾಜಿ ಸದಸ್ಯರಾದ ಮಹದೇವಪ್ಪ ಬಾಗಸರ, ಟಾಕನಗೌಡ ಪಾಟೀಲ, ತಾಪಂ ಮಾಜಿ ಅಧ್ಯಕ್ಷ ಶಿವಬಸಪ್ಪ ಪೂಜಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಗೀತಾ ಪೂಜಾರ, ಅನಿತಾ ಶಿವೂರ, ಭರಮಣ್ಣ ಶಿವೂರ, ರಾಜೇಶ ಚವ್ಹಾಣ, ನಾಗಪ್ಪ ಪೋಲೇಶಿ, ಪುಟ್ಟಪ್ಪ ನರೇಗಲ್, ಪ್ರಕಾಶ ಬಣಕಾರ, ಉಮೇಶ ತಳವಾರ, ಮೈಲಾರಿ ಬಾರ್ಕಿ, ಶಿವು ತಳವಾರ, ನಾಗರಾಜ ಆರೇರ, ಶರಣ ಬಳಿಗಾರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.