ಸಾರಾಂಶ
ಅಪೆ ಆಟೋಗಳು ಮಂಡ್ಯ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಅತಿ ಹೆಚ್ಚು ಪ್ರಯಾಣಿಕರನ್ನು ತುಂಬಿಕೊಂಡು ಸಂಚಾರ ಮಾಡಿ ಜೀವ ಹಾನಿಗೆ ಮುಂದಾಗುತ್ತಿದ್ದಾರೆ. ಈಗಾಗಲೇ ಸಾಕಷ್ಟು ಪ್ರಯಾಣಿಕರು ಅಪಘಾತಕ್ಕೆ ಒಳಗಾಗಿ ಪ್ರಾಣ ಮತ್ತು ಅಂಗಾಂಗಗಳನ್ನು ಕಳೆದುಕೊಂಡಿದ್ದಾರೆ. ಮದ್ದೂರಿನಲ್ಲಿ ಭಾನುವಾರವೂ ಕೂಡ ಅಪಘಾತ ನಡೆದಿದ್ದು, ಇದಕ್ಕೆ ಮೂಲ ಕಾರಣ ಆರ್ಟಿಒ ಅಧಿಕಾರಿಗಳು.
ಕನ್ನಡಪ್ರಭ ವಾರ್ತೆ ಮಂಡ್ಯ
ಅಪೆ ಆಟೋಗಳಲ್ಲಿ ಹೆಚ್ಚು ಜನರ ಪ್ರಯಾಣಕ್ಕೆ ಅವಕಾಶ ನೀಡುತ್ತಿರುವುದನ್ನು ಖಂಡಿಸಿ ನಗರದಲ್ಲಿ ರಾಜೀವ್ ಗಾಂಧಿ ಆಟೋ ಟ್ಯಾಕ್ಸಿ ಚಾಲಕರ ವೇದಿಕೆ ಪದಾಧಿಕಾರಿಗಳು, ಆಟೋ ಚಾಲಕರು ಸೋಮವಾರ ಪ್ರತಿಭಟನೆ ನಡೆಸಿದರು.ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಎದುರು ಪ್ರತಿಭಟನೆ ನಡೆಸಿ, ಅಪೆ ಆಟೋಗಳು ಮಂಡ್ಯ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಅತಿ ಹೆಚ್ಚು ಪ್ರಯಾಣಿಕರನ್ನು ತುಂಬಿಕೊಂಡು ಸಂಚಾರ ಮಾಡಿ ಜೀವ ಹಾನಿಗೆ ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ಸಾಕಷ್ಟು ಪ್ರಯಾಣಿಕರು ಅಪಘಾತಕ್ಕೆ ಒಳಗಾಗಿ ಪ್ರಾಣ ಮತ್ತು ಅಂಗಾಂಗಗಳನ್ನು ಕಳೆದುಕೊಂಡಿದ್ದಾರೆ. ಮದ್ದೂರಿನಲ್ಲಿ ಭಾನುವಾರವೂ ಕೂಡ ಅಪಘಾತ ನಡೆದಿದ್ದು, ಇದಕ್ಕೆ ಮೂಲ ಕಾರಣ ಆರ್ಟಿಒ ಅಧಿಕಾರಿಗಳು ಎಂದು ಆರೋಪಿಸಿದರು.ಆಟೋ ಚಾಲಕರ ಪ್ರತಿಭಟನೆ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ ಆಟೋ ಚಾಲಕರು, ಪ್ರಯಾಣಿಕರ ಪ್ರಾಣ ಉಳಿಸದ ಅಪೆ ಆಟೋ ಚಾಲಕರ ಬಗ್ಗೆ ಕಾನೂನು ಕ್ರಮ ಕೈಗೊಳ್ಳದೆ ಇರುವುದು ಅಕ್ಷಮ್ಯ ಅಪರಾಧ. ಜೀವಾಹಾನಿಗೆ ಸಂಚಾರಿ ಪೊಲೀಸ್ ಇಲಾಖೆ ಅಧಿಕಾರಿಗಳು ಕಾರಣ ಎಂದು ಕಿಡಿಕಾರಿದರು.
ಮದ್ದೂರಿನಲ್ಲಿ ಭಾನುವಾರ ಅಪೆ ಆಟೋದಲ್ಲಿ 15 ಜನರನ್ನು ಕೂರಿಸಿಕೊಂಡು ಹೋಗುತ್ತಿರುವಾಗ ಅಪಘಾತ ನಡೆದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಪ್ರಯಾಣಿಕರ ಪರವಾಗಿ ಪ್ರತಿಭಟಿಸಿ ಕಾನೂನು ಬಾಹಿರವಾಗಿ ಅಪೆ ಆಟೋಗಳ ಬಗ್ಗೆ ಮನವಿ ಸಲ್ಲಿಸಿ, ಈ ಬಗ್ಗೆ ಕ್ರಮ ತೆಗೆದುಕೊಳ್ಳದಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಕೃಷ್ಣ, ಗೌರವಾಧ್ಯಕ್ಷ ರವೀಂದ್ರ, ಉಪಾಧ್ಯಕ್ಷ ರವಿಕುಮಾರ, ಕಾರ್ಯದರ್ಶಿ ಎಮ್ ರಾಜು, ನಾರಾಯಣ ,ಗುರುಶಂಕರ್, ಬೊರಲಿಂಗ, ಶಿವಕುಮಾರ, ಸೋಮಶೇಖರ, ಕುಮಾರ, ಜಯಶಂಕರ್, ಶಶಿ ಮತ್ತು ಪದಾಧಿಕಾರಿಗಳು, ಆಟೋ ಚಾಲಕರು ಹಾಜರಿದ್ದರು.