ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಮಾದನಾಯಕನಹಳ್ಳಿ- ದಾಸನಪುರ ಎಪಿಎಂಸಿಯಲ್ಲಿನ ಕಮಿಷನ್ ದಂಧೆ ಕುರಿತು ಪ್ರತಿಭಟನೆ ನಡೆಸಿದ ಮಹಿಳಾ ಕಾರ್ಯಕರ್ತರನ್ನು ಪೊಲೀಸರು ಅಮಾನವೀಯವಾಗಿ ನಡೆಸಿಕೊಂಡಿದ್ದನ್ನು ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ಮಾತನಾಡಿ, ಮಾದನಾಯಕನಹಳ್ಳಿ ಠಾಣಾಧಿಕಾರಿ ಮುರಳೀಧರ್, ನೆಲಮಂಗಲ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ನರೇಂದ್ರಬಾಬು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ನಡೆಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳಾ ಹೋರಾಟಗಾರ್ತಿಯರ ಮೇಲೆ ಮೃಗೀಯ ವರ್ತನೆ ತೋರಿರುವುದು ಅತ್ಯಂತ ಅಮಾನುಷ ವರ್ತನೆಯಾಗಿದೆ. ಪಟ್ಟಭದ್ರ ಜೊತೆ ಸೇರಿ ಪ್ರತಿಭಟನೆ ಹತ್ತಿಕುವ ಕೆಲಸಕ್ಕೆ ಪೊಲೀಸರು ಮುಂದಾಗಿದ್ದಾರೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಸಮಯೋಚಿತ ನಿರ್ಧಾರ ಕೈಗೊಂಡಿದ್ದಾರೆ. ಚಳುವಳಿಗಾರರ ಮೇಲೆ ಪೊಲೀಸರ ದೌರ್ಜನ್ಯ ಮಿತಿಮೀರುತ್ತಿದ್ದು, ಸರ್ಕಾರ ಕೂಡಲೇ ಮಾರ್ಗದರ್ಶನ ನೀಡಬೇಕೆಂದು ಆಗ್ರಹಿಸಿದರು.ಜಿಲ್ಲಾ ರೈತ ಮುಖಂಡರಾದ ಸೊ ಸಿ ಪ್ರಕಾಶ್ ಮಾತನಾಡಿ, ತನಿಖೆಗೂ ಮುಂಚಿತವಾಗಿ ಆ ಇಬ್ಬರು ಠಾಣಾಧಿಕಾರಿಗಳನ್ನು ಅಮಾನತುಗೊಳಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಎಲ್ಲಾ ಚಳವಳಿಗಾರರು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಯರಗನಹಳ್ಳಿ ಮಹಾಲಿಂಗ, ಪ್ರಧಾನ ಕಾರ್ಯದರ್ಶಿ ಸೋಂಪುರ ಉಮೇಶ್, ಎಂ.ವೀರಪ್ಪ, ವಿಶ್ವಾಸ್, ಆಲೂರು ಚೆನ್ನಪ್ಪ, ಕುದುರೆಗುಂಡಿ ನಾರಾಯಣ, ಪ್ರಭು, ಬ್ಯಾಂಕ್ ಚಿಕ್ಕಣ್ಣ, ಸೊಳ್ಳೆಪುರ ಪುಟ್ಟಸ್ವಾಮಿ, ಸೋಮಶೇಖರ್, ವಿ ಆರ್ ಸತೀಶ್ ಕಾರ್ಯಕರ್ತರು ಇದ್ದರು.ಆಯುಧಗಳ ಪೂಜೆ, ಮೆರವಣಿಗೆ
ಕಿಕ್ಕೇರಿ:ಪಟ್ಟಣದ ಹೊರವಲಯದ ಕಿಕ್ಕೇರಮ್ಮ ದೇಗುಲದಲ್ಲಿ ದೇವಿಯ ವಾಹನ, ಮತ್ತಿತರ ಆಯುಧಗಳ ಪೂಜೆ, ಶ್ರದ್ಧಾಭಕ್ತಿಯಿಂದ ಮೆರವಣಿಗೆ ಮಾಡಲಾಯಿತು.
ದೇವಿಗೆ ಆಯುಧಗಳಿಗೆ ಅರಿಷಿಣ, ಕುಂಕುಮಗಳನ್ನು ಆಭರಣ, ವಾಹನಗಳಿಗೆ ಹಚ್ಚಿದರು. ಪುಷ್ಪಗಳನ್ನು ಇಟ್ಟು ಪುಷ್ಪಾರ್ಚನೆ ಮಾಡಿದರು. ಹಣ್ಣು, ಕಾಯಿ, ನೈವೇದ್ಯ ಅರ್ಪಿಸಲಾಯಿತು.ದೇವಿಯ ಆಯುಧಗಳಾದ ಕತ್ತಿ, ಗುರಾಣಿ ಮತ್ತಿತರರ ಸಾಮಗ್ರಿ, ಕುದುರೆ ವಾಹನ ಮತ್ತಿತರ ವಸ್ತುಗಳನ್ನು ತೊಟ್ಟಿಲಿನಲ್ಲಿ ಪ್ರತಿಷ್ಟಾಪಿಸಿ ಮಂಗಳವಾದ್ಯದೊಂದಿಗೆ ಮೆರವಣಿಗೆ ಮಾಡಲಾಯಿತು. ಹೊಸಬೀದಿ, ರಥಬೀದಿ, ಕೋಟೆಗಣಪತಿ ಬೀದಿ, ಕೆ.ಎಸ್. ನರಸಿಂಹಸ್ವಾಮಿ ಬೀದಿ, ಸುಬ್ಬರಾಯರ ಛತ್ರದ ಬೀದಿಗಳಲ್ಲಿ ಸಾಗಿತು. ಭಕ್ತರು, ಮನೆಮಂದಿಗಳು ತೊಟ್ಟಿಲಿನಲ್ಲಿನ ದೇವಿ ವಾಹನ, ಆಯುಧಗಳಿಗೆ ಪೂಜಿಸಿ ನಮಿಸಿದರು.
ಹೋಬಳಿಯಾದ್ಯಂತ ವಿವಿಧ ಅಂಗಡಿಗಳಲ್ಲಿ, ರೈತರು ಕೃಷಿ ಪರಿಕರ, ವಾಹನ ಮಾಲೀಕರು ವಾಹನಗಳನ್ನು ಶುಚಿಗೊಳಿಸಿ ಪೂಜಿಸಿ ಮೆರವಣಿಗೆ ಮಾಡಿದರು. ಸಿಹಿ ಹಂಚಿದರು. ಬೂದು ಗುಂಬಳ ಹೊಡೆದು ದೃಷ್ಟಿಪೂಜೆ ನೆರವೇರಿಸಿದರು.