ಕಾಂಗ್ರೆಸ್‌ ವಿರುದ್ಧ ಪ್ರತಿಭಟನೆ, ಬಿಜೆಪಿ ಕಾರ್ಯಕರ್ತರ ಬಂಧಿಸಿ ಬಿಡುಗಡೆ

| Published : Jun 25 2024, 12:33 AM IST

ಕಾಂಗ್ರೆಸ್‌ ವಿರುದ್ಧ ಪ್ರತಿಭಟನೆ, ಬಿಜೆಪಿ ಕಾರ್ಯಕರ್ತರ ಬಂಧಿಸಿ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

60 ವರ್ಷದ ಆಡಳಿತದಲ್ಲಿ ನೂರಾರು ಬಾರಿ ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡಿದ್ದನ್ನು ಯಾರೂ ಮರೆತಿಲ್ಲ.

ಹೊಸಪೇಟೆ: ಮಾಜಿ ಪ್ರಧಾನಿ ಇಂದಿರಾಗಾಂಧಿ ನೇತೃತ್ವದ ಅಂದಿನ ಕಾಂಗ್ರೆಸ್ ಸರ್ಕಾರ ಸಂವಿಧಾನದ ಮೂಲ ಆಶಯ ತಿದ್ದುಪಡಿ ಮಾಡುವುದರ ಮೂಲಕ ಅಪಚಾರ ಮಾಡಿದ್ದು, ಇಂದು ಕಾಂಗ್ರೆಸ್ ನವರು ಸಂವಿಧಾನ ಉಳುವಿನ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕಿಚಿಡಿ ಕೊಟ್ರೇಶ್ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಸೋಮವಾರ ನಡೆದ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ವಿರುದ್ಧ ಪೋಸ್ಟರ್ ಅಭಿಯಾನ ನಡೆಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷ ಗೋಮುಖ ವ್ಯಾಘ್ರ ಇದ್ದಂತೆ. ತಮ್ಮದೇ 60 ವರ್ಷದ ಆಡಳಿತದಲ್ಲಿ ನೂರಾರು ಬಾರಿ ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡಿದ್ದನ್ನು ಯಾರೂ ಮರೆತಿಲ್ಲ. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಭಾರತದ ಮೇಲೆ ಇಂದಿರಾಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಜಗಜ್ಜಾಹೀರಾಗಿದೆ. ವಿನಾಕಾರಣ ದೇಶಾದ್ಯಂತ ಮೋದಿ ಸರ್ಕಾರ ಸಂವಿಧಾನ ವಿರೋಧಿ, ಸಂವಿಧಾನವನ್ನು ಬದಲಿಸುತ್ತಾರೆ ಎನ್ನುವ ಅಪಪ್ರಚಾರವನ್ನು ಇಲ್ಲಿಗೆ ಕೈಬಿಡಬೇಕು. ಬಿಜೆಪಿ ದೇಶದ ಹಿತ ಕಾಯುತ್ತದೆಯೇ ಹೊರತು ಎಂದು ಸಂವಿಧಾನಕ್ಕೆ ಅಪಚಾರ ಮಾಡುವುದಿಲ್ಲ. ಕಾಂಗ್ರೆಸ್ ತಮ್ಮ ವಂಶಪಾರಂಪರ್ಯವಾಗಿ ಮಾಡಿಕೊಂಡು ಬಂದಿರುವ ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ಒಪ್ಪಿಕೊಳ್ಳಬೇಕು. ವಿನಾಕಾರಣ ಬಿಜೆಪಿ ಮೇಲೆ ಆರೋಪ ಮಾಡುವ ರಾಹುಲ್ ಗಾಂಧಿ ದೇಶದ ಜನತೆ ಬಳಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಕಾರ್ಯಕರ್ತರ ಬಂಧನ:

ಪೊಲೀಸರು ಯುವ ಮೋರ್ಚಾದ ಕಾರ್ಯಕರ್ತರನ್ನು ಬಂಧಿಸಿ, ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಂಡಳ ಅಧ್ಯಕ್ಷ ಶಂಕರ್ ಮೇಟಿ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಸೂರಿ ಬಂಗಾರು, ಗುಳಗಿ ವೀರೇಶ್, ಕಾರ್ಯದರ್ಶಿ ವ್ಯಾಸರಾಜ್, ಕೋಶಾಧ್ಯಕ್ಷ ಅಯ್ಯಾಳಿ ರಾಜು, ಮಂಡಳ ಪ್ರಧಾನ ಕಾರ್ಯದರ್ಶಿ ಚಂದ್ರು ದೇವಲಾಪುರ, ಕಾರ್ಯಾಲಯ ಕಾರ್ಯದರ್ಶಿ ಹೊನ್ನೂರಪ್ಪ, ಜಗದೀಶ್, ಕಾರ್ತಿಕ್‌ ಇತರರಿದ್ದರು.