ಬ್ಯಾಡಗಿ: ಹಾವೇರಿ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವವನ್ನು ಖಾಸಗಿ ಕಾಲೇಜಿನಲ್ಲಿ ನಡೆಸಲು ಕೈಗೊಂಡಿರುವ ತೀರ್ಮಾನವನ್ನು ವಿರೋಧಿಸಿ, ಘಟಿಕೋತ್ಸವವನ್ನು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿಯೇ ನಡೆಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಸಂಘಟನೆಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಎಫ್‌ಐ ಜಿಲ್ಲಾ ಮುಖಂಡ ಅರುಣಕುಮಾರ್ ನಾಗವತ, ಹಾವೇರಿ ಜಿಲ್ಲೆಯ ಹೆಮ್ಮೆಯ ಕ್ಷಣವಾದ ಮೊದಲ ಘಟಿಕೋತ್ಸವವನ್ನು ಸರಕಾರಿ ವಿಶ್ವವಿದ್ಯಾಲಯದ ಆವರಣದಲ್ಲಿಯೇ ನಡೆಸಬೇಕು ಎಂದು ವಿದ್ಯಾರ್ಥಿ ಸಮುದಾಯ, ವಿವಿಧ ಸಂಘ ಸಂಸ್ಥೆಗಳು, ಶಿಕ್ಷಣ ಪ್ರೇಮಿಗಳು ಹಾಗೂ ಜಿಲ್ಲೆಯ ಜನತೆಯ ಪರವಾಗಿ ಮನವಿ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಘಟಿಕೋತ್ಸವವನ್ನು ಕ್ಯಾಂಪಸ್ ಹೊರಗೆ ನಡೆಸಲು ಕ್ರಮ ಕೈಗೊಳ್ಳಬಾರದು. ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ರೇಣುಕಾ ತೀರಕನಗೌಡ್ರು ಮಾತನಾಡಿದರು. ಈ ವೇಳೆ ಮಲ್ಲಿಕಾರ್ಜುನ ಲಮಾಣಿ, ನಾಗಮ್ಮ ಎಸ್., ರೇಣುಕಾ ತೀರಕನಗೌಡ್ರು, ಯಶೋದ ಮಡಿವಾಳರ, ಆದಿತ್ಯ ಹಾಲಮ್ಮನವರ, ಕಾಂತೇಶ ತಳವಾರ, ಚೇತನ ಲಮಾಣಿ, ಪುಟ್ಟಪ್ಪ ಎಲ್., ಲಕ್ಷ್ಮೀ ಎಚ್., ಅಕ್ಷತಾ ರಾವಜಿ, ಸಂಗೀತ ದೊಡ್ಡಮನಿ, ಪವಿತ್ರ ಹೊನ್ನತ್ತಿ, ಕವನಾ ಜಿ. ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.