ರಸಗೊಬ್ಬರಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

| Published : Jul 15 2025, 11:45 PM IST

ಸಾರಾಂಶ

ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡಿರುವ ಬಿಜೆಪಿ ನೇತೃತ್ವದ ಸರ್ಕಾರ ಚುನಾವಣೆಯ ಸಮಯದಲ್ಲಿ ಮಾತ್ರ ನಾವು ರೈತಪರ, ಬಡವರ ಪರ ಸರ್ಕಾರ ಎಂದು ಸುಳ್ಳು ಹೇಳಿಕೆಗಳನ್ನು ನೀಡಿ, ರೈತರು ಮಾತ್ರವಲ್ಲದೇ ದೇಶದ ಬಡಜನತೆಯನ್ನು ಮೋಸ ಮಾಡಿದೆ.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ದೇಶದ ಆರ್ಥಿಕತೆಯ ಬೆನ್ನೆಲುಬು ರೈತ. ರೈತರನ್ನು ಉದ್ದಾರ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಕೇಂದ್ರ ಬಿಜೆಪಿ ಸರ್ಕಾರ ಇದೀಗ ರಸಗೊಬ್ಬರಗಳ ಬೆಲೆ ಏರಿಕೆ ಮಾಡಿ ರೈತರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಆರೋಪಿಸಿ ಯೂತ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಯೂತ್ ಕಾಂಗ್ರೆಸ್‌ನ ಕಾಯದರ್ಶಿ ಬಾಲೇನಹಳ್ಳಿ ರಮೇಶ್ ಮಾತನಾಡಿ, ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡಿರುವ ಬಿಜೆಪಿ ನೇತೃತ್ವದ ಸರ್ಕಾರ ಚುನಾವಣೆಯ ಸಮಯದಲ್ಲಿ ಮಾತ್ರ ನಾವು ರೈತಪರ, ಬಡವರ ಪರ ಸರ್ಕಾರ ಎಂದು ಸುಳ್ಳು ಹೇಳಿಕೆಗಳನ್ನು ನೀಡಿ, ರೈತರು ಮಾತ್ರವಲ್ಲದೇ ದೇಶದ ಬಡಜನತೆಯನ್ನು ಮೋಸ ಮಾಡಿದೆ. ಇದೀಗ ಏಕಾಏಕಿ ರಸಗೊಬ್ಬರಗಳ ಬೆಲೆಯನ್ನು ಏರಿಕೆ ಮಾಡಿ ರೈತನ ಹೊಟ್ಟೆ ಮೇಲೆ ಬರೆ ಎಳೆದಿದೆ. ಕೇಂದ್ರ ಸರ್ಕಾರ ನೀಡಿರುವಂತಹ ಎಲ್ಲಾ ಭರವಸೆಗಳು ಹುಸಿಯಾಗಿದೆ. ಕೂಡಲೇ ಕೇಂದ್ರ ಸರ್ಕಾರ ರಸಗೊಬ್ಬರಗಳ ಬೆಲೆ ಕಡಿಮೆ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದರು.

ಬಳಿಕ ಕೆಡಿಪಿ ಸದಸ್ಯ ಎಚ್.ಪಿ. ಲಕ್ಷ್ಮೀನಾರಾಯಣ ಮಾತನಾಡಿ, ರೈತರಿಗೆ ಅನುಕೂಲ ಆಗುವ ಯೋಜನೆಗಳನ್ನು ಜಾರಿಗೆ ತರುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ನಮ್ಮ ಪ್ರಧಾನಿ ಕೇವಲ ಅದಾನಿ ಮತ್ತು ಅಂಬಾನಿ ಪರ ಕೆಲಸ ಮಾಡುತ್ತಾರೆ. ಬಿಟ್ಟರೆ ರೈತರ ಪರ ಇಲ್ಲ. ರೈತರ ಕಷ್ಟಗಳೇನು ಎಂದು ತಿಳಿದುಕೊಳ್ಳುವ ಗೋಜಿಗೆ ಕೇಂದ್ರ ಸರ್ಕಾರ ಹೋದರೆ ದಿನೇ ದಿನೇ ರೈತರು ಬಳಸುವ ರಸಗೊಬ್ಬರಗಳ ಬೆಲೆ ಏರಿಕೆ ಮಾಡುತ್ತಿರಲಿಲ್ಲ. ಕೂಡಲೇ ಬೆಲೆ ಏರಿಕೆ ಕಡಿಮೆ ಮಾಡಬೇಕು. ಇಲ್ಲವಾದಲ್ಲಿ ಯುವ ಕಾಂಗ್ರೆಸ್ ಬೀದಿಗಿಳಿದು ಉಗ್ರವಾದ ಹೋರಾಟ ಮಾಡಲು ಸಿದ್ಧವಾಗಿದೆ. ಕೂಡಲೇ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಕೇಂದ್ರ ಸರ್ಕಾರ ಹೆಚ್ಚಳ ಮಾಡಿರುವ ರಸಗೊಬ್ಬರಗಳ ಬೆಲೆ ಇಳಿಕೆ ಮಾಡುವಂತೆ ಸೂಕ್ತ ನಿರ್ದೇಶಕ ನೀಡಬೇಕೆಂದು ಆಗ್ರಹಿಸಿದರು.

ಇದೇ ಸಮಯದಲ್ಲಿ ರಸಗೊಬ್ಬರಗಳ ಬೆಲೆ ಇಳಿಕೆ ಮಾಡಲು ಕೇಂದ್ರ ಸರ್ಕಾರಕ್ಕೆ ತಲುಪಿಸುವಂತೆ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಿಗೆ ಮನವಿ ಪತ್ರ ನೀಡಿದರು. ಈ ವೇಳೆ ಪಪಂ ಅಧ್ಯಕ್ಷ ವಿಕಾಸ್, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಅಂಬರೀಶ್, ಕೋ.ಚಿಮುಲ್ ಮಾಜಿ ನಿರ್ದೇಶಕ ಆದಿನಾರಾಯಣರೆಡ್ಡಿ, ಮುಖಂಡರಾದ ದಪ್ಪರ್ತಿ ನಂಜುಂಡಪ್ಪ, ರಿಯಾಜ್, ಶ್ರೀನಿವಾಸ್, ನಾರಾಯಣಸ್ವಾಮಿ, ನಾಗರಾಜು, ಗಂಗಾಧರಪ್ಪ, ಮದ್ದರೆಡ್ಡಿ, ರೈತ ಮುಖಂಡೆ ಅಂಬಿಕಾ, ರಾಮಾಂಜಿ, ರಹಮತ್, ಮಹೇಂದ್ರ ಸೇರಿದಂತೆ ಹಲವರು ಇದ್ದರು.

15ಜಿಯುಡಿ2: ರಸಗೊಬ್ಬರಗಳ ಬೆಲೆ ಇಳಿಕೆ ಮಾಡುವಂತೆ ಒತ್ತಾಯಿಸಿ ರಾಜ್ಯ ಯೂತ್ ಕಾಂಗ್ರೇಸ್ ವತಿಯಿಂದ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.