ಕೆಐಡಿಬಿ ಭೂ ಸ್ವಾಧೀನ ವಿರೋಧಿಸಿ ಪ್ರತಿಭಟನೆ

| Published : Jul 02 2025, 12:20 AM IST

ಸಾರಾಂಶ

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅ‍ವರು, ಕಾಂಗ್ರೆಸ್‌ಗೆ ಅಧಿಕಾರ ಕೊಡಿ ಅಧಿಕಾರ ಬಂದ 24 ಗಂಟೆಯಲ್ಲಿ ರೈತರಿಗೆ ಮಾರಕವಾಗಿರುವ 13 ಕಾಯ್ದೆಗಳನ್ನು ರದ್ದು ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಯಾವುದೇ ಕಾಯ್ದೆ ರದ್ದುಮಾಡದೇ ಅದೇ ಕಾಯ್ದೆಗಳನ್ನು ಮುಂದುವರೆಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕೈಗಾರಿಕಾ ವಲಯಕ್ಕೆ ಭೂಮಿಯನ್ನು ನಾವು ಕೊಡಲು ಸಿದ್ದವಾಗಿದ್ದೇವೆ. ಅದಕ್ಕೂ ಮೊದಲು ಸರ್ಕಾರ ಸಿ ಎನ್ ಡಿ ಭೂಮಿಯನ್ನು ವರ್ಗೀಕರಣ ಮಾಡಿ ಪ್ರಕಟ ಮಾಡಬೇಕು. ಕೈಗಾರಿಕೆಗೆ ಸಿಎನ್ ಡಿ ಯಷ್ಟೇ ಬಳಕೆ ಆಗಬೇಕು. ಕೃಷಿಯೋಗ್ಯ ಭೂಮಿ ಅದು ಕೃಷಿಗೆಮಾತ್ರ ಸೀಮಿತವಾಗಬೇಕು. ಈ ಕುರಿತು ಜು.2ರ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಲಿ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು

ನಗರ ಹೊರವಲಯದ ಜಿಲ್ಲಾಡಳಿತ ಭವನದ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಬಿಜೆಪಿ ಮತ್ತು ವಿವಿಧ ದಲಿತ, ರೈತ ಪರಸಂಘಟನೆಗಳು ಜಿಲ್ಲೆಯ ಶಿಢ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕೆಐಡಿಬಿಯಿಂದ ರೈತರ ಜಮೀನು ಸ್ವಾಧೀನ ವಿರೋಧಿಸಿ ಮಂಗಳವಾರ ನಡೆದ ಅಹೋರಾತ್ರಿ ಹೋರಾಟದಲ್ಲಿ ಮಾತನಾಡಿದರು.

ಸಿದ್ದರಾಮಯ್ಯ ಭರವಸೆ ಹುಸಿ

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅ‍ವರು, ಕಾಂಗ್ರೆಸ್‌ಗೆ ಅಧಿಕಾರ ಕೊಡಿ ಅಧಿಕಾರ ಬಂದ 24 ಗಂಟೆಯಲ್ಲಿ ರೈತರಿಗೆ ಮಾರಕವಾಗಿರುವ 13 ಕಾಯ್ದೆಗಳನ್ನು ರದ್ದು ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಯಾವುದೇ ಕಾಯ್ದೆ ರದ್ದುಮಾಡದೇ ಅದೇ ಕಾಯ್ದೆಗಳನ್ನು ಮುಂದುವರೆಸುತ್ತಿದ್ದಾರೆ ಎಂದು ಟೀಕಿಸಿದರು.

ಕೃಷಿ ಭೂಮಿ ಮಾರಾಟ ನಿಷೇಧಿಸಿ

ರೈತರಿಂದ ಭೂಮಿ ಪಡೆದು ರಿಯಲ್ ಎಸ್ಟೇಟ್ ಕುಳಗಳಿಗೆ ನೀಡಬೇಡಿ. ರಾಜ್ಯದ ಒಟ್ಟು ಕೈಗಾರಿಕಾ ವಲಯವಾಗಿ ಗುರುತಿಸಿರುವ ಭೂಮಿಯನ್ನು ಇಲ್ಲಿವರೆಗೂ ಏನೇನು ಮಾಡಿದ್ದೀರಿ ಎಂಬುದನ್ನು ಸರ್ಕಾರ ದಾಖಲೆ ನೀಡಲಿ. ಬಯಲು ಸೀಮೆಯ ಭಾಗದ ಶಾಶ್ವತ ನೀರಾವರಿ ಯೋಜನೆಯಾದ ಎತ್ತಿನ ಹೊಳೆ ನೀರು ತಡವಾಗುತ್ತದೆ. ಅದ್ದರಿಂದ ಕೆಸಿ ಮತ್ತು ಹೆಚ್ ಎನ್ ವ್ಯಾಲಿ ನೀರನ್ನು ಮೂರು ಹಂತದಲ್ಲಿ ಶುದ್ದೀಕರಿಸಿ ಕೆರೆಗಳಿಗೆ ಹರಿಸಬೇಕು, ಫಲವತ್ತಾದ ಕೃಷಿ ಭೂಮಿ ಕೈಗಾರಿಕೆಗಳಿಗೆ, ರೈತರಲ್ಲದವರಿಗೆ ನೀಡದಿರುವ ಕಾಯ್ದೆಗಳನ್ನು ಅನುಷ್ಟಾನಕ್ಕೆ ತರಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.