ಸಾರಾಂಶ
ಪಹಲ್ಗಾಮ್ ನರಮೇಧ ಖಂಡಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಜಮ್ಮು- ಕಾಶ್ಮೀರದ ಪಹಲ್ಗಾಮದಲ್ಲಿ ಮಂಗಳವಾರ ನಡೆದ ಭಯೋತ್ಪಾದಕರ ದಾಳಿಗೆ ಕೂಡಲೇ ಪ್ರತೀಕಾರ ತೆಗೆದುಕೊಳ್ಳಬೇಕಾದರೆ ಕಾಶ್ಮೀರ ಕಣಿವೆಯಲ್ಲಿ ಅಡಗಿರುವ ಉಗ್ರಗಾಮಿಗಳನ್ನು ನಿರ್ದಾಕ್ಷ್ಯಿಣವಾಗಿ ಗುಂಡಿಕ್ಕಿ ಕೊಲ್ಲಬೇಕು ಎಂದು ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಒತ್ತಾಯಿಸಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮ್ಮು ಕಾಶ್ಮೀರದ ಪಹಲ್ಗಾಮದಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಪೈಶಾಚಿಕ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ರಾಷ್ಟ್ರೀಯ ಬಸವಸೈನ್ಯ ಸಂಘಟನೆಯು ಬುಧವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರವಾಸಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ಜಿಹಾದಿಗಳು ಅಮಾಯಕರನ್ನು ಹತ್ಯೆ ಮಾಡಿದ್ದಾರೆ. ಈ ಜಿಹಾದಿಗಳ ಹೆಡೆಮುರಿ ಕಟ್ಟುವ ಕೆಲಸವನ್ನು ಕೇಂದ್ರ ಸರ್ಕಾರ ಕೂಡಲೇ ಮಾಡಬೇಕು. ಭಯೋತ್ಪಾದಕರನ್ನು ಬೆನ್ನಟ್ಟಿ ಭಾರತೀಯ ಸೇನೆ ಗುಂಡಿಕ್ಕಿ ಕೊಲ್ಲಬೇಕು. ಕಾಶ್ಮೀರವನ್ನು ಭಯೋತ್ಪಾದಕರಿಂದ ಮುಕ್ತಗೊಳಿಸಬೇಕು. ಈ ದಾಳಿ ಹಿಂದೆ ಇರುವ ಪಾಕಿಸ್ತಾನದ ಭಯೋತ್ಪಾದನಾ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಲು ಕೇಂದ್ರ ಸರ್ಕಾರ ಕೂಡಲೇ ಆದೇಶ ಮಾಡಬೇಕು. ಭಯೋತ್ಪಾದಕರಿಗೆ ಉಗ್ರ ಶಿಕ್ಷೆ ಆಗಬೇಕು ಎಂದರು.
ಪ್ರತಿಭಟನೆಯಲ್ಲಿ ಪಂಚಮಸಾಲಿ ಸಮಾಜದ ಅಧ್ಯಕ್ಷ ಬಸವರಾಜ ಗೊಳಸಂಗಿ, ರಾಷ್ಟ್ರೀಯ ಬಸವಸೈನ್ಯದ ತಾಲೂಕ ಅಧ್ಯಕ್ಷ ಸಂಜು ಬಿರಾದಾರ, ಮುಖಂಡರಾದ ಶ್ರೀಕಾಂತ ಕೊಟ್ರಶೆಟ್ಟಿ, ಜಟ್ಟಿಂಗರಾಯ ಮಾಲಗಾರ, ಸಂಗಮೇಶ ಜಾಲಗೇರಿ, ಸಂತೋಷ ಚಿಂಚೊಳ್ಳಿ, ಮುದಕಪ್ಪ ಪಟ್ಟಣಶೆಟ್ಟಿ, ಮಂಜು ಜಾಲಗೇರಿ, ಸುರೇಶ ಹೂಗಾರ, ವೀರೇಶ ಗಬ್ಬೂರ, ಬಾಪು ಬಾಗೇವಾಡಿ, ನವೀನ ಬೇವನೂರ, ಎಂ.ಬಿ.ತೋಟದ, ಮಾಂತೇಶ ಹೆಬ್ಬಾಳ, ರಾಮಣ್ಣ ಕಲ್ಲೂರ ಇತರರು ಭಾಗವಹಿಸಿದ್ದರು.