ತಾಲೂಕು ಆಸ್ಪತ್ರೆಯಲ್ಲಿನ ವೈದ್ಯರ ಕೊರತೆ ಮತ್ತು ಅವ್ಯವಸ್ಥೆ ಖಂಡಿಸಿ ಬಿಜೆಪಿ ಯುವಮೋರ್ಚಾ ತಾಲ್ಲೂಕು ಘಟಕದ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ತಾಲೂಕು ಆಸ್ಪತ್ರೆಯಲ್ಲಿನ ವೈದ್ಯರ ಕೊರತೆ ಮತ್ತು ಅವ್ಯವಸ್ಥೆ ಖಂಡಿಸಿ ಬಿಜೆಪಿ ಯುವಮೋರ್ಚಾ ತಾಲ್ಲೂಕು ಘಟಕದ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಮಾತನಾಡಿ, ಶಿರಸಿಯಲ್ಲಿ ಸೂಪರ್ ಸ್ಪೆಷಾಲಿಟಿ ರೀತಿಯ ಆಸ್ಪತ್ರೆ ಆದರೆ ಅದರ ಸಂಪೂರ್ಣ ಲಾಭ ಬಿಜೆಪಿಗೆ ಸಲ್ಲುತ್ತದೆ ಎಂಬ ರಾಜಕೀಯ ಉದ್ದೇಶದಿಂದ ಶಾಸಕ ಭೀಮಣ್ಣ ನಾಯ್ಕ ಅದು ಆಗದಂತೆ ತಡೆಯುತ್ತಿದ್ದಾರೆ ಎಂದುಆರೋಪಿಸಿದರು.

ಸಿದ್ದಾಪುರ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ಸಾಮಾನ್ಯ ಜನರು ಪರಿತಪಿಸುವಂತಾಗಿದೆ. ಆಸ್ಪತ್ರೆಯಲ್ಲಿ ಪರಿಕರಗಳ ಕೊರತೆ ಇದೆ. ಶಾಸಕರಿಗೆ ಅನುಭವದ ಕೊರತೆ ಇದ್ದರೆ ಅನುಭವ ಹೊಂದಿದ ಪಿಎ ನೇಮಿಸಿಕೊಳ್ಳಲಿ. ಕೇವಲ ಪೋಟೊ ಮತ್ತು ವೀಡಿಯೊ ಮಾಡುವವರನ್ನು ಜೊತೆಗಿಟ್ಟುಕೊಂಡರೆ ಅಭಿವೃದ್ಧಿ ಆಗುವುದಿಲ್ಲ. ಕಾರ್ಯಾನುಭವ ಹೊಂದಿದ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಬಿಜೆಪಿ ಯುವಮೋರ್ಚಾ ತಾಲ್ಲೂಕು ಅಧ್ಯಕ್ಷ ಅಣ್ಣಪ್ಪ ನಾಯ್ಕ ಮಾತನಾಡಿ, ಮಹಿಳಾ, ಮಕ್ಕಳ ತಜ್ಞರು ವರ್ಗಾವಣೆಗೊಂಡು ತಿಂಗಳು ಕಳೆದರೂ ವೈದ್ಯರ ನೇಮಕಾತಿ ನಡೆದಿಲ್ಲ. ರೋಗಿಗಳು ಆಸ್ಪತ್ರೆಗೆ ಹೋದರೆ ಶಿರಸಿ ಅಥವಾ ಸಾಗರಕ್ಕೆ ಹೋಗಿ ಎನ್ನುವ ಉತ್ತರ ಬರುತ್ತದೆ. ಈ ಉತ್ತರ ಹೇಳಲು ಸರ್ಕಾರಿ ಆಸ್ಪತ್ರೆ ಬೇಕೆ? ಕೇವಲ ನೆಪ ಮಾತ್ರಕ್ಕೆ ಮಾತ್ರ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಯುತ್ತಿವೆ ಎಂದರು.

ಜಿಲ್ಲಾ ಬಿಜೆಪಿ ಆಮಂತ್ರಿತ ಸದಸ್ಯ ಗುರುರಾಜ ಶಾನಭಾಗ, ಬಿಜೆಪಿ ಮಂಡಲಾಧ್ಯಕ್ಷ ತಿಮ್ಮಪ್ಪ ಎಂ ಕೆ, ನಿಕಟಪೂರ್ವ ಅಧ್ಯಕ್ಷ ಮಾರುತಿ ನಾಯ್ಕ, ಪ್ರಮುಖರಾದ ನಂದನ ಬೋರ್ಕರ್, ತೋಟಪ್ಪ ನಾಯ್ಕ ಮಾತನಾಡಿದರು.

ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂಜೀವ ನಾಯ್ಕ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ ಭಟ್ಟ, ಸುರೇಶ ಬಾಲಿಕೊಪ್ಪ ಮುಂತಾದವರಿದ್ದರು.

ಪಟ್ಟಣದ ತಾಲ್ಲೂಕು ಆಸ್ಪತ್ರೆಯಿಂದ ಮೆರವಣಿಗೆ ನಡೆಸಿ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.