ಕನ್ನಡಪ್ರಭ ವಾರ್ತೆ ತಾಳಿಕೋಟೆ
ಬಾಗಲಕೋಟೆ ನಗರದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ವೇಳೆ ಕಲ್ಲು ತೋರಿ ಶಾಂತಿ ಭಂಗ ತರುವಂತಹ ಕೆಲಸ ಮಾಡಿದ ಕಿಡಿಗೇಡಿಗಳ ಕೃತ್ಯ ಖಂಡಿಸಿ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ಪಟ್ಟಣದಲ್ಲಿ ಶನಿವಾರ ಪ್ರತಿಭಟಿಸಿ, ತಹಸೀಲ್ದಾರ್ ಪ್ರದೀಪ ದೇವಗಿರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ (ಕೂಚಬಾಳ) ಮಾತನಾಡಿ, ಶಿವಾಜಿ ಮಹಾರಾಜರು ದೇಶಕ್ಕೆ ಪ್ರೇರಣಾ ಶಕ್ತಿಯಾಗಿದ್ದಾರೆ. ಅಂತಹ ಮಹಾನ್ ಚೇತನನ ಜಯಂತಿ ಆಚರಣೆ ವೇಳೆ ಹಾದಿಬೀದಿ ಪುಡಿರೌಡಿಗಳು ಪೂರ್ವ ತಯಾರಿಯೊಂದಿಗೆ ಮಸೀದಿಯೊಳಗೆ ಕಲ್ಲು, ಕಬ್ಬಿಣ ಸಂಗ್ರಹಿಸಿಟ್ಟುಕೊಂಡು ಮೆರವಣಿಗೆ ಟಾರ್ಗೆಟ್ ಮಾಡಿ ಕಲ್ಲು ತೋರಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಉದಾಹರಣೆಯಾಗಿದೆ ಎಂದರು.
ಮಸೀದಿ ಇರುವುದು ಪ್ರಾರ್ಥನೆಗಾಗಿ, ಅಲ್ಲಿ ಕಲ್ಲು, ರಾಡ್ ಇಟ್ಟುಕೊಂಡು ಅಟ್ಟಹಾಸ ಮೆರೆಯುತ್ತಿರವರ ಬಗ್ಗೆ ಮುಸ್ಲಿಮ ಸಮುದಾಯವದರು ಅವಲೋಕನ ಮಾಡಿಕೊಳ್ಳಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರ ಮತ ಬ್ಯಾಂಕ್ಗಾಗಿ ವಿಧಾನಸೌದದಲ್ಲಿಯೇ ಪಾಕಿಸ್ತಾನ ಜಿಂದಾಬಾದ್ ಎಂದವರಿಗೆ ಕ್ರಮ ಕೈಗೊಳ್ಳದೇ ಅವರನ್ನು ರಕ್ಷಣೆ ಮಾಡುವಂತಹ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿರುವುದು ಅವರ ನಡತೆ ತೋರಿಸುತ್ತಿದೆ. ಸಿದ್ದರಾಮಯ್ಯನವರು ಓಟಬ್ಯಾಂಕಿಗಾಗಿ ಸರ್ವಾಧಿಕಾರ ದೋರಣೆ ಅನುಸರಿಸುವುದು ಸರಿಯಲ್ಲ. ಕೂಡಲೇ ಈ ದುಷ್ಕೃತ್ಯ ಎಸಗಿದ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.ಸಂಘಟನೆಗಳ ಮುಖಂಡರಾದ ಸಂಭಾಜಿ ವಾಡಕರ, ರತನಸಿಂಗ್ ಕೊಕಟನೂರ, ವಿಠ್ಠಲ ಮೋಹಿತೆ, ಶಶಿಧರ ಡಿಸಲೆ, ಎಸ್.ಎಲ್.ಪೂಜಾರಿ, ಎಸ್.ಬಿ.ಗೌಡಗೇರಿ, ಜೈಸಿಂಗ್ ಮೂಲಿಮನಿ, ಶಿವಾಜಿ ಶೇವಳಕರ, ಸುರೇಶ ಹಜೇರಿ, ಪ್ರದೀಪ ವಿಜಾಪೂರ, ಅಮೀತಸಿಂಗ್ ಮನಗೂಳಿ, ಸಿ.ಡಿ.ರಜಪೂರ, ಎಸ್.ಸಿ.ಹಜೇರಿ, ಗುರುರಾಜ ಮಾನೆ, ಮಯೂರ ಪಾಟೀಲ, ಜಿ.ಎಸ್.ಬಡಿಗೇರ, ಸಂತೋಷ ಸುಭೇದಾರ, ಎಸ್.ಎಸ್.ಕದಂ, ನಾರಾಯಣ ಸುಭೇದಾರ, ಎಸ್.ಎಂ.ಪಂಧೆ, ಸಿದ್ದು ಸಾಳುಂಕೆ, ಎ.ಎಚ್.ಹಜೇರಿ, ಕೆ.ಎಚ್.ಗೌಡಗೇರಿ, ಆರ್.ಎಸ್.ಮೋಹಿತೆ, ಅಂಬಾಜಿ ಘೋರ್ಪಡೆ, ಕೆ.ಟಿ.ಮೋಹಿತೆ, ಆರ್.ವಾಯ್.ಕಟ್ಟಿಮನಿ, ಶಿವಶಂಕರ ಹಿರೇಮಠ, ನವೀನ್ ಡಿಸಲೆ, ಮಂಜು ಶೆಟ್ಟಿ, ಟಿ.ಶಿಂಧೆ, ನೀತಿನ ವಿಜಾಪೂರ, ರಾಜು ಮೋಹಿತೆ, ಬಸನಗೌಡ ಮಾಲಿಪಾಟೀಲ, ಸುಭಾಸ ಘಾವಡೆ, ಚಂದು ರಜಪೂತ, ವಿಠ್ಠಲ ಜಗತಾಪ, ಸಂಗಮೇಶ ಹಾರಿವಾಳ ಮೊದಲಾದವರಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಸಬ್ ಕಾ ಸಾಥ್, ಸಬ್ಕಾ ವಿಕಾಸ ಎಂದು ದೇಶದ ೧೪೦ ಕೋಟಿ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವಂತಹ ಕಾರ್ಯ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಕೇವಲ ತಮ್ಮ ಮತ ಬ್ಯಾಂಕಿಗಾಗಿ ಮತಾಂಧರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಸಾಗಿರುವುದು ಅತ್ಯಂತ ಖಂಡನೀಯ. ಬಾಗಲಕೋಟ ಘಟನೆಗೆ ಸಂಬಂಧಿಸಿ ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆ ಒದಗಿಸದಿದ್ದಲ್ಲಿ ರಾಜ್ಯಾದ್ಯಂತ ಹಿಂದೂಪರ ಸಂಘಟನೆಗಳು ಉಗ್ರವಾದ ಹೋರಾಟದ ಹಾದಿ ಹಿಡಿಯುವ ದಿನಗಳು ದೂರವಿಲ್ಲ.
ಆರ್.ಎಸ್.ಪಾಟೀಲ (ಕೂಚಬಾಳ), ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ