ಮಹದಾಯಿ ಯೋಜನೆ ವಿರೋಧ ಖಂಡಿಸಿ 10ಕ್ಕೆ ಪ್ರತಿಭಟನೆ

| Published : Jun 07 2025, 01:17 AM IST

ಸಾರಾಂಶ

ಮಹದಾಯಿ ಕುಡಿಯುವ ನೀರಿನ ಯೋಜನೆ ವಿರೋಧಿಸುತ್ತಿರುವುದನ್ನು ಖಂಡಿಸಿ ಜೂ.10ರಂದು ಧಾರವಾಡದಲ್ಲಿ ಬೃಹತ್ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ರಾಮದುರ್ಗ

ಮಹದಾಯಿ ಯೋಜನಾ ಪ್ರದೇಶದ ಕೆಲವು ಉದ್ಯಮಿಗಳು ಮತ್ತು ರೆಸಾರ್ಟ್ ಮಾಲೀಕರ ಕುತಂತ್ರದ ಫಲವಾಗಿ ಕೆಲವರು ಪರಿಸರ ಸಂರಕ್ಷಣೆ ನೆಪದಲ್ಲಿ ಮಹದಾಯಿ ಕುಡಿಯುವ ನೀರಿನ ಯೋಜನೆ ವಿರೋಧಿಸುತ್ತಿರುವುದನ್ನು ಖಂಡಿಸಿ ಜೂ.10ರಂದು ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರೈತ ಸೇನೆಯ ರಾಜ್ಯ ಉಪಾಧ್ಯಕ್ಷ ಶಂಕರಗೌಡ ಪಾಟೀಲ ಹೇಳಿದರು.

ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳವಾರ ಧಾರವಾಡದ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಲಾಗುವುದು. ಪರಿಸರವಾದಿಗಳು ಎಂದು ಹೇಳಿಕೊಂಡು ಉತ್ತರ ಕರ್ನಾಟಕದ 4 ಜಿಲ್ಲೆಯ 10 ತಾಲೂಕಿನ ಗ್ರಾಮಗಳ ಕುಡಿಯುವ ನೀರಿನ ಯೋಜನೆ ವಿರೋಧಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ಶೀಘ್ರ ಕಾಮಗಾರಿ ಆರಂಭಿಸಲು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಮಹದಾಯಿ ಯೋಜನೆಯ ಕಾಮಗಾರಿ ಆರಂಭಿಸುವ ಪರಿಸರದಲ್ಲಿ ಯಾವುದೇ ರೀತಿಯಿಂದ ಪರಿಸರಕ್ಕೆ ಮತ್ತು ಅಲ್ಲಿನ ಪ್ರಾಣಿಗಳಿಗೆ ಹಾನಿಯಾಗಬಾರದು ಎಂದು ಪೈಪ್‌ಲೈನ್‌ ಅಳವಡಿಸಿ ಕೇವಲ 52 ಕಿಮೀ ಪ್ರದೇಶ ಮಾತ್ರ ಮೇಲ್ಭಾಗದಲ್ಲಿ ಕಾಮಗಾರಿ ಕೈಗೊಳ್ಳಲಾವುದು. ಇದನ್ನು ವಿರೋಧಿಸುವ ಪರಿಸರವಾದಿಗಳಿಗೆ ಗೋವಾ ರಾಜ್ಯಕ್ಕೆ ವಿದ್ಯುತ್ ನೀಡಲು ಇದೇ ಪ್ರದೇಶದಲ್ಲಿ ಸುಮಾರು 1200 ಎಕರೆ ಪ್ರದೇಶದಲ್ಲಿ ತಮನಾರ್‌ ಎಂಬ ಖಾಸಗಿ ವಿದ್ಯುತ್ ಸ್ಥಾಪಿತವಾಗುವುದು ಕಾಣಿಸುತ್ತಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಿಸರವಾದಿಗಳ ನೆಪದಲ್ಲಿ ವಿರೋಧಿಸಲು ಕೆಲವರು ಮಹದಾಯಿ ಹೋರಾಟಕ್ಕೆ ಬೆಂಬಲ ಸೂಚಿಸಿ ಇಂದು ವಿರೋಧ ಮಾಡುತ್ತಿರುವುದಕ್ಕೆ ಏನು ಕಾರಣ ಎಂದು ಪ್ರಶ್ನಿಸಿದ ಅವರು, ಮಹದಾಯಿ ಯೋಜನೆ ಅನುಷ್ಠಾನದಿಂದ ಉತ್ತರ ಕರ್ನಾಟಕದ ಜನರು ಅಭಿವೃದ್ಧಿ ಹೊಂದುತ್ತಾರೆ ಎಂದು ಅಸೂಯೆಯಿಂದ ವಿರೋಧಿಸುತ್ತಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಿವಾನಂದ ಹಿರೇಮಠ, ಡಿ.ಎಫ್.ಹಾಜಿ ಮತ್ತು ನಿಂಗಪ್ಪ ಹುಚ್ಚನ್ನವರ ಇದ್ದರು.