ಇಂದು ರಸ್ತೆ ತಡೆದು ಪ್ರತಿಭಟನೆ: ಎಬಿವಿಪಿ ಸಾಥ್‌

| Published : Nov 06 2025, 03:15 AM IST

ಸಾರಾಂಶ

ವಿವಿಧ ರೈತ ಸಂಘಟನೆಗಳ ಆಶ್ರಯದಲ್ಲಿ ಕಬ್ಬಿನ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಬೆಂಬಲ ನೀಡಿದೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ವಿವಿಧ ರೈತ ಸಂಘಟನೆಗಳ ಆಶ್ರಯದಲ್ಲಿ ಕಬ್ಬಿನ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಬೆಂಬಲ ನೀಡಿದೆ. ನ.6ರಂದು ನಗರದ ದೇಸಾಯಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಲು ಬುಧವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ನಿರೀಕ್ಷಣಾ ಮಂದಿರ ರಮಾನಿವಾಸದಲ್ಲಿ ವಿವಿಧ ರೈತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಎಬಿವಿಪಿಯ ಮುಖಂಡರು ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದಾರೆ. ಗುರುವಾರ ನಗರದಲ್ಲಿ ಬೃಹತ್‌ ಹೋರಾಟ ರಸ್ತೆ ತಡೆ ನಡೆಯಲಿದೆ. ಶುಕ್ರವಾರ ರಾಜ್ಯ ಬಂದ್‌ಗೆ ಕರೆ ನೀಡಲಾಗಿದ್ದು ಅದರ ಅಂಗವಾಗಿ ತಾಲೂಕಿನ ಚಿಕ್ಕಲಕಿ ಕ್ರಾಸ್‌ ಹಾಗೂ ಹುನ್ನೂರಿನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ರೈತ ಮುಖಂಡರು ಮಾಹಿತಿ ನೀಡಿದ್ದಾರೆ. ರೈತರ ಹೋರಾಟಕ್ಕೆ ಅನೇಕ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಪ್ರತಿ ಗ್ರಾಮ, ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ ಪ್ರತಿಭಟನೆ, ರಸ್ತೆತಡೆ ಮುಂತಾದ ಹೋರಾಟಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ಎಬಿವಿಪಿ, ಕರವೇ, ಕೃಷ್ಣಾತೀರ ರೈತ ಹೊರಾಟ ಸಮಿತಿ, ಕಬ್ಬು ಬೆಳೆಗಾರರ ಸಂಘ, ಹಸಿರು ಸೇನೆ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಶ್ರೀಶೈಲ ಭೂಮಾರ, ರಾಜು ನದಾಫ, ಸಿದ್ದಪ್ಪ ಬಣಜನವರ, ಗೂಡುಸಾಬ ಹೊನವಾಡ,ಸುರೇಶ ಹಂಚಿನಾಳ, ಸದಪ್ಪ ಕವಟಗಿ, ಸಂತ ಸಮಿತಿಯ ಪ್ರದೀಪ ಮೆಟಗುಡ್‌, ಅರುಣ ಲಗಳಿ, ಪರಶುರಾಮ ಪೂಜಾರ, ಪುಂಡಲೀಕ ದಿಡ್ಡಿ, ಸಿದ್ದುಗೌಡ ಪಾಟೀಲ, ಮಹೇಶ ದೇಶಪಾಂಡೆ, ಗೋಪಾಲ ಬಳಗಾರ, ಶ್ರೀಶೈಲ ಮೈಗೂರ. ಪೈಗಂಬರ ಮೊಮಿನ, ಪ್ರಸನ್ನ ಜಮಖಂಡಿ, ದರೆಪ್ಪ ದಾನಗೌಡ, ಸದಾಶಿವ ಕಲೂತಿ ಸೇರಿದಂತೆ ಹಲವು ಮುಖಂಡರು ಇದ್ದರು.