ವೇತನ ಹೆಚ್ಚಳಕ್ಕೆ ಆಗ್ರಹಿಸಿ ಬಿಸಿಯೂಟ ತಯಾರಕರ ಪ್ರತಿಭಟನೆ

| Published : Jan 19 2025, 02:15 AM IST

ವೇತನ ಹೆಚ್ಚಳಕ್ಕೆ ಆಗ್ರಹಿಸಿ ಬಿಸಿಯೂಟ ತಯಾರಕರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ: ಅಕ್ಷರ ದಾಸೋಹ ಬಿಸಿಯೂಟ ತಯಾರಕರಿಗೆ 2025-26ನೇ ಸಾಲಿನ ಬಜೆಟ್‌ನಲ್ಲಿ ವೇತನ ಹೆಚ್ಚಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಎಐಟಿಯುಸಿಯಿಂದ ನಗರದಲ್ಲಿ ಶನಿವಾರ ಪ್ರತಿಭನೆ ನಡೆಸಲಾಯಿತು.

ದಾವಣಗೆರೆ: ಅಕ್ಷರ ದಾಸೋಹ ಬಿಸಿಯೂಟ ತಯಾರಕರಿಗೆ 2025-26ನೇ ಸಾಲಿನ ಬಜೆಟ್‌ನಲ್ಲಿ ವೇತನ ಹೆಚ್ಚಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಎಐಟಿಯುಸಿಯಿಂದ ನಗರದಲ್ಲಿ ಶನಿವಾರ ಪ್ರತಿಭನೆ ನಡೆಸಲಾಯಿತು.

ನಗರದ ಉಪ ವಿಭಾಗಾಧಿಕಾರಿ ಕಚೇರಿ ಎದುರು ಸಂಘಟನೆಯ ನೇತೃತ್ವದಲ್ಲಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಘಟನೆ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಘೋಷಣೆಗಳನ್ನು ಕೂಗಿದ ಬಿಸಿಯೂಟ ತಯಾರಕರು ಬಳಿಕ ಎಸಿ ಮುಖಾಂತರ ಮುಖ್ಯಮಂತ್ರಿ, ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಂಘಟನೆ ಜಿಲ್ಲಾಧ್ಯಕ್ಷ ಆವರಗೆರೆ ಚಂದ್ರು, 23 ವರ್ಷದಿಂದ ರಾಜ್ಯಾದ್ಯಂತ ಸರ್ಕಾರಿ, ಅನುದಾನಿತ ಶಾಲೆಗಳು ಸೇರಿದಂತೆ ಕಿರಿಯ-ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಮಧ್ಯಾಹ್ನದ ಉಪಹಾರ ಯೋಜನೆಯಡಿ ಅಡುಗೆ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕರ ಮಹಿಳೆಯರು ಅತ್ಯಂತ ಕಡಿಮೆ ಗೌರವಧನಕ್ಕೆ ಕೆಲಸ ಮಾಡಿಕೊಂಡು ಬಂದಿದ್ದು, ಮುಖ್ಯ ಅಡುಗೆಯವರಿಗೆ 3700 ರು., ಅಡುಗೆ ಸಹಾಯಕರಿಗೆ 3600 ರು. ನೀಡಲಾಗುತ್ತಿದೆ ಎಂದರು.

ಅಲ್ಪ ಗೌರವಧನಕ್ಕೆ ದುಡಿಯುವ ಮಹಿಳೆಯರ ಜೀವನ ಕಷ್ಟಕರವಾಗಿದೆ. 2025-26ನೇ ಸಾಲಿನ ಬಜೆಟ್‌ನಲ್ಲಿ ಬಿಸಿಯೂಟ ತಯಾರಕರ ವೇತನವನ್ನು ಹೆಚ್ಚಿಸಬೇಕು. ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ವೇತನವನ್ನು 6 ಸಾವಿರ ರು.ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

60 ವರ್ಷ ಮೇಲ್ಪಟ್ಟ ಅಡುಗೆ ತಯಾರಕರಿಗೆ 30-40 ಸಾವಿರ ರು. ಬದಲಿಗೆ ಕನಿಷ್ಠ 2 ಲಕ್ಷ ರು. ಗೆ ಇಡುಗಂಟು ಹೆಚ್ಚಿಸಬೇಕು. ಕನಿಷ್ಠ 5 ವರ್ಷ ಕೆಲಸ ಮಾಡಿ, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದ ಕಾರಣ ಅಥವಾ ಅನಾರೋಗ್ಯದಿಂದ ಬಿಡುಗಡೆಗೊಳ್ಳುವ ಬಿಸಿಯೂಟ ತಯಾರಕರಿಗೂ ಇಡುಗಂಟು ಇಡಬೇಕು. ಯೋಜನೆ ಆರಂಭವಾದಾಗಿನಿಂದ 15ಕ್ಕೂ ಹೆಚ್ಚು ಬಿಸಿಯೂಟ ತಯಾರಕರು ಶಾಲೆಯಲ್ಲಿ ಅಡುಗೆ ತಯಾರಿಸುವಾಗ ಕುಕ್ಕರ್ ಸ್ಫೋಟ ಸೇರಿದಂತೆ ವಿವಿಧ ರೀತಿ ಅವಘಡಗಳಲ್ಲಿ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಕ್ಕೆ ಈವರೆಗೆ ಪರಿಹಾರ ಸಿಕ್ಕಿಲ್ಲ. ತಕ್ಷಣ ಮೃತರ ಕುಟುಂಬಕ್ಕೆ ಕನಿಷ್ಠ 10 ಲಕ್ಷ ರು. ಪರಿಹಾರ ನೀಡಬೇಕು, ಸಿಬ್ಬಂದಿಗೆ ಪ್ರತಿ ತಿಂಗಳು 5 ರಂದು ಒಳಗಾಗಿ ವೇತನ ಪಾವತಿಸಬೇಕು ಸೇರಿದಂತೆ ಇತ್ಯಾದಿ ಬೇಡಿಕೆ ಈಡೇರಿಸಬೇಕೆಂದು ಆಗ್ರಹಸಿದರು.

ಮುಖಂಡರಾದ ಸರೋಜ, ಪದ್ಮಾವತಿ, ಜ್ಯೋತಿಲಕ್ಷ್ಮಿ, ಕೆ.ವಿ.ಜಯಮ್ಮ, ಗದಿಗೇಶ ಪಾಳೇದ, ಮಂಜುಳಾ, ಬಸಮ್ಮ, ಎಚ್.ಹಾಲಮ್ಮ, ಇಂದ್ರಮ್ಮ, ನಾಗಮ್ಮ, ನಾಗರತ್ನ, ಚಂದ್ರಮ್ಮ, ಕವಿತಾ, ಎಚ್.ವಿದ್ಯಾ, ಸಿ.ಬಿ.ಇಂದ್ರಮ್ಮ, ಎಂ.ಕಲ್ಪನಾ, ಶ್ವೇತಾ, ಟಿ.ಜೆ.ರೂಪಾ, ನಾಗಮ್ಮ, ಎನ್.ಸುಜಾತ, ಕೆ.ಆರ್.ಚೇತನ, ಲಕ್ಷ್ಮಮ್ಮ, ಪದ್ಮಾವತಿ, ಸಂಗೀತ, ಶೈಲಜಾ, ಎ.ಪ್ರೇಮಕುಮಾರಿ, ಶಿವಮ್ಮ, ಜಿ.ಶೋಭಾ, ಟಿ.ಪುಷ್ಪಾ, ಜಿ.ಎಂ.ಜ್ಯೋತಿ, ಮಂಜಮ್ಮ, ಶಿವಗಂಗಮ್ಮ ಮತ್ತಿತರರಿದ್ದರು.