ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಸಂಘದ ಆಸ್ತಿಯನ್ನು ಅತಿಕ್ರಮವಾಗಿ ಒತ್ತುವರಿ ಮಾಡಿಕೊಂಡು ವ್ಯಕ್ತಿಯೊಬ್ಬ ಮನೆ ನಿರ್ಮಿಸುತ್ತಿರುವುದರನ್ನು ಖಂಡಿಸಿ ತಾಲೂಕಿನ ನಾರಾಯಣಪುರ ಗ್ರಾಮದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಎಲ್ಲಾ ಆಡಳಿತ ಮಂಡಳಿ ಸದಸ್ಯರು ಪ್ರತಿಭಟನಾಧರಣಿ ನಡೆಸಿದರು.ಗ್ರಾಮದ ಮಾರಮ್ಮನ ದೇವಸ್ಥಾನ ಬಳಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಖಾಲಿ ನಿವೇಶನದ ಬಳಿಕ ಟೆಂಟ್ ಹಾಕಿಕೊಂಡು ಪ್ರತಿಭಟನೆ ನಡೆಸಿದ ಸದಸ್ಯರು, ಅತಿಕ್ರಮ ಮಾಡಿರುವ ವ್ಯಕ್ತಿ ಹಾಗೂ ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಸೊಸೈಟಿಯ ಖಾಲಿ ನಿವೇಶನವನ್ನು ಗ್ರಾಮದ ಮರೀಗೌಡರ ಮಕ್ಕಳಾದ ಎಂ.ಎನ್.ರಾಮಚಂದ್ರು ಮತ್ತು ಎನ್.ಎಂ.ನಂಜುಂಡೇಗೌಡರು ಒತ್ತುವರಿ ಮಾಡಿಕೊಳ್ಳುವ ಜತೆಗೆ ಸಂಬಂಧಿಸಿದ ಗ್ರಾಪಂನಿಂದ ಮನೆ ನಿರ್ಮಾಣಕ್ಕೆ ಯಾವುದೇ ಪರವಾನಗಿ ಪಡೆಯದೆ ಏಕಾಏಕಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.ಸೊಸೈಟಿ ಜಾಗ ಅತಿಕ್ರಮ ಮಾಡಿಕೊಂಡು ಮನೆ ನಿರ್ಮಿಸುತ್ತಿರುವ ಸಂಬಂಧ ಗ್ರಾಪಂಗೆ ದೂರು ಸಲ್ಲಿಸಿ ಮನೆ ನಿರ್ಮಿಸುತ್ತಿರುವ ಜಾಗವನ್ನು ತೆರವುಗೊಳಿಸುವಂತೆ ಮನವಿ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಪಂ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಕ್ರಮವಾಗಿ ಸೊಸೈಟಿ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಮನೆ ನಿರ್ಮಾಣ ಮಾಡದಂತೆ ಮನೆ ಮಾಲೀಕರಿಗೆ ಸೂಚನೆ ನೀಡಿದ್ದಾರೆ ಎಂದರು.
ಮನೆ ತೆರವುಗೊಳಿಸಲು ಸೂಕ್ತ ರಕ್ಷಣೆ ನೀಡುವಂತೆ ಸಂಬಂಧಿಸಿ ಪೊಲೀಸ್ ಇಲಾಖೆಗೆ ಪಿಡಿಒ ಜಗದೀಶ್ ಅವರು ದೂರು ನೀಡಿದ್ದಾರೆ. ಅದಾದ ಬಳಿಕವು ಸಹ ಮನೆ ಮಾಲೀಕರು ಮನೆ ನಿರ್ಮಾಣಕ್ಕೆ ಮುಂದಾಗಿ ಪಿಲ್ಲರ್ ಸಹ ಹಾಕಿದ್ದಾರೆ. ಸಂಬಂಧಪಟ್ಟ ಗ್ರಾಪಂ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನಾ ಸ್ಥಳಕ್ಕೆ ಗ್ರಾಪಂ ಅಧ್ಯಕ್ಷ ಕೆ.ಕೆ.ಪ್ರಕಾಶ್, ಪಿಡಿಒ ಜಗದೀಶ್ ಆಗಮಿಸಿದ ವೇಳೆ ಪ್ರತಿಭಟನಕಾರರು ಕಾನೂನಿನಂತೆ ದಾಖಲೆಗಳನ್ನು ಪರಿಶೀಲಿಸಿ ಕ್ರಮವಹಿಸಿ ಅತಿಕ್ರಮ ಮಾಡಿಕೊಂಡು ಮನೆ ನಿರ್ಮಿಸಿರುವುದನ್ನು ಪರಿಶೀಲಿಸಿ ಅಕ್ರಮವಾಗಿದ್ದರೆ ಪಿಲ್ಲರ್ಗಳನ್ನು ತೆರವುಗೊಳಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ನಿರಂತರ ಪ್ರತಿಭಟನೆಯ ಎಚ್ಚರಿಕೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಪಂ ಅಧ್ಯಕ್ಷ ಕೆ.ಕೆ.ಪ್ರಕಾಶ್ ಅವರು ಸಹ ದಾಖಲೆ ಪರಿಶೀಲಿಸಿ ತ್ವರಿತವಾಗಿ ಈ ವಿಚಾರವಾಗಿ ಕ್ರಮಕೈಗೊಳ್ಳಿ ಎಂದು ಪಿಡಿಒಗೆ ಸೂಚಿಸಿದರು. ನಂತರ ಪಿಡಿಓ ಜಗದೀಶ್ ಅವರು ದಾಖಲೆ ಪರಿಶೀಲಿಸಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ಸೊಸೈಟಿ ಅಧ್ಯಕ್ಷ ಜೆ.ಎಂ.ಪುಟ್ಟರಾಜು, ಉಪಾಧ್ಯಕ್ಷೆ ಎನ್.ಎಸ್.ವಿನೋಧ, ನಿರ್ದೇಶಕರಾದ ಎಸ್.ಜೆ.ಚನ್ನ ಕೃಷ್ಣೇಗೌಡ, ಎನ್.ಎಸ್.ಆನಂದ್, ನಂಜೇಗೌಡ, ಕರಿಯಯ್ಯ, ಎಲ್.ಚಂದ್ರವತಿ, ಕೆ.ವಿ.ಶ್ರೀನಿವಾಸ್, ಎನ್.ಎಸ್.ಯೋಗ ನರಸಿಂಹೇಗೌಡ, ಟಿ.ದೇವರಾಜು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ರಮೇಶ್, ಗುಮಸ್ತರಾದ ಎನ್.ಜಿ.ದಯಾನಂದ, ಎನ್.ಕೆ.ಪ್ರದೀಪ್ ಹಾಜರಿದ್ದರು.