ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಶ್ರೀಗಂಧ ಸಂಕೀರ್ಣದ ಆವರಣದಲ್ಲಿ ಕರಕುಶಲ ಕರ್ಮಿಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಸಾಗರ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಶ್ರೀಗಂಧ ಸಂಕೀರ್ಣದ ಆವರಣದಲ್ಲಿ ಕರಕುಶಲ ಕರ್ಮಿಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷ ಲೋಕೇಶ ಕುಮಾರ್ ಗುಡಿಗಾರ್ ಮಾತನಾಡಿ, ಕರಕುಶಲ ಕಲೆಯನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ಕುಶಲಕರ್ಮಿಗಳ ಬದುಕು ಸಂಕಷ್ಟದಲ್ಲಿದೆ. ಕೆಲಸ ಮಾಡಲು ಶ್ರೀಗಂಧ ಸಿಗುತ್ತಿಲ್ಲ. ಜೊತೆಗೆ ಸರ್ಕಾರದ ಯಾವ ಸೌಲಭ್ಯವೂ ಕುಶಲಕರ್ಮಿಗಳನ್ನು ತಲುಪುತ್ತಿಲ್ಲ. ವಿಶ್ವ ೧, ವಿಶ್ವ ೨ ಹಾಗೂ ಪಶ್ಚಿಮಘಟ್ಟ ಡಿಸಿಎಚ್ ಯೋಜನೆಯಡಿ ಕುಶಲಕರ್ಮಿಗಳು, ಸರ್ಕಾರ ಜಂಟಿಯಾಗಿ ನಿರ್ಮಿಸಿದ್ದ ವಸತಿ ಯೋಜನೆ ತಲುಪುತ್ತಿಲ್ಲ. ೨೨ ವರ್ಷಗಳ ಗುತ್ತಿಗೆ ಒಪ್ಪಂದ ಮಾಡಿಕೊಂಡು ಕುಶಲಕರ್ಮಿಗಳಿಗೆ ಮನೆ ನಿರ್ಮಿಸಿಕೊಟ್ಟಿತ್ತು. ಅವಧಿ ಮುಗಿದಿದ್ದರೂ ಈತನಕ ಕುಶಲಕರ್ಮಿಗಳಿಗೆ ಸರ್ಕಾರ ಮನೆ ಹಕ್ಕುಪತ್ರ ಹಸ್ತಾಂತರ ಮಾಡಿಲ್ಲ. ಸಾಗರ, ಸೊರಬ, ಶಿರಸಿಯಲ್ಲಿ ವಸತಿಗೃಹಗಳು ನಿರ್ಮಾಣವಾಗಿದ್ದರೂ ಅದು ಫಲಾನುಭವಿಗಳಿಗೆ ಸಿಕ್ಕಿಲ್ಲ ಎಂದು ಆರೋಪಿಸಿದರು.೬೦ವರ್ಷ ಮೇಲ್ಪಟ್ಟ ನೋಂದಾಯಿತ ಕುಶಲಕರ್ಮಿಗಳಿಗೆ ಕೆಲಸ ಮಾಡಲು ಕಣ್ಣಿನ ದೃಷ್ಟಿ ಮಂದವಾಗಿದ್ದು, ಅವರಿಗೆ ಸರ್ಕಾರ ಮಾಸಾಶನ ನೀಡಬೇಕು. ಸಿರಸಿ, ಸೊರಬ ಸಂಕೀರ್ಣವನ್ನು ಅಭಿವೃದ್ಧಿಪಡಿಸಬೇಕು. ಕುಶಲಕರ್ಮಿಗಳಿಗೆ ವಿಮಾ ಯೋಜನೆ ಪುನರಾರಂಭಿಸಬೇಕು. ಕುಶಲಕರ್ಮಿಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು. ಮೃತರಾದ ನೋಂದಾಯಿತ ಕುಶಲಕರ್ಮಿಗಳ ಗುರುತಿನಪತ್ರವನ್ನು ಕುಟುಂಬದ ಸದಸ್ಯರಿಗೆ ವರ್ಗಾಯಿಸಿ ಕೊಡಬೇಕು ಎಂದು ಆಗ್ರಹಿಸಿದರು.ಶಾಸಕರ ಭರವಸೆ: ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಸರ್ಕಾರ ನಿಮ್ಮ ಪರವಾಗಿದ್ದು ವಿಶ್ವ ಯೋಜನೆಯಡಿ ಮಂಜೂರಾದ ಮನೆಗಳನ್ನು ನಿಮಗೆ ಹಸ್ತಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸಿರಸಿ ಮತ್ತು ಸೊರಬ ಸಂಕೀರ್ಣಕ್ಕೆ ಮೂಲಭೂತ ಸೌಲಭ್ಯ ಕಲ್ಪಸಲು ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆಯಲಾಗುತ್ತದೆ. ಕುಶಲಕರ್ಮಿಗಳನ್ನು ಕಲಾವಿದರು ಎಂಬ ಪಟ್ಟಿಗೆ ಸೇರಿಸಿರುವುದರಿಂದ ಅನೇಕ ಸೌಲಭ್ಯ ಸಿಗುತ್ತಿಲ್ಲ. ನಿಮ್ಮನ್ನು ಕಾರ್ಮಿಕರ ಪಟ್ಟಿಗೆ ಸೇರಿಸಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಮಾಡಲಾಗುತ್ತದೆ. ಸದ್ಯದಲ್ಲಿಯೆ ಸಚಿವರು, ನಿಗಮದ ವ್ಯವಸ್ಥಾಪಕರು, ಅಧ್ಯಕ್ಷರನ್ನು ಸಾಗರಕ್ಕೆ ಕರೆಸಿ ಸಮಾಲೋಚನಾ ಸಭೆ ಏರ್ಪಡಿಸಿ ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು. ತಹಸೀಲ್ದಾರ್ ರಶ್ಮಿ, ಯೋಜನಾಧಿಕಾರಿ ಗಣೇಶ್ ಸಿಂಗ್, ಅಣ್ಣಪ್ಪ, ದೀಪಕ್, ನಾಗರಾಜ್, ಶಿವಾನಂದ್, ತಿರುಮಲೇಶ್, ನಾಗೇಶ್ ಸಿರಸಿ, ಗುರುಪ್ರಸಾದ್, ದಿವಾಕರ್, ಧರ್ಮರಾಜ್, ಮೀನಾಕ್ಷಿ ರಾಮಚಂದ್ರ, ಆಶಾ.ಎಂ.ಎನ್, ಸವಿತಾ, ಜಯಂತಿ, ಶಕುಂತಲಾ, ವಿನಾಯಕ ಗುಡಿಗಾರ್, ಅಣ್ಣಪ್ಪ.ಕೆ.ಜಿ, ಲಕ್ಷ್ಮಣ್ ಹಾಜರಿದ್ದರು.