ಸಾರಾಂಶ
ಕನ್ನಡಪ್ರಭ ವಾರ್ತೆ ಮುದಗಲ್
ಪಟ್ಟಣದ ನಾಗಲಾಪುರ ಗ್ರಾಪಂ ವ್ಯಾಪ್ತಿ ವಾರ್ಡ್ ನಂ.1ರಲ್ಲಿ ಕುಡಿವ ನೀರಿನ ಸಮಸ್ಯೆ ನಿವಾರಿಸಲು ಪರ್ಯಾಯ ವ್ಯವಸ್ಥೆ ಮಾಡಲು ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಅಧ್ಯಕ್ಷರಿಗೆ ತಿಳಿಸಿದರೂ ಕೂಡ ನಿರ್ಲಕ್ಷ್ಯವಹಿಸಿದ್ದಾರೆ. ಎಂದು ಆಕ್ರೋಶಗೊಂಡ ಗ್ರಾಪಂ ಸದಸ್ಯ ರುದ್ರಗೌಡ ಪಾಟೀಲ್ ಅವರು ಗ್ರಾಪಂ ಮುಂದೆ ಎತ್ತು ಕಟ್ಟಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣಿಸಿರುವುದು ಅಧಿಕಾರಿಗಳ ಗಮನಕ್ಕೆ ಇದ್ದರು, ವಾರ್ಡ್ಗೆ ನೀರು ಸರಬರಾಜಿಗೆ ತೊಂದರೆಯಾಗದಂತೆ ತಮ್ಮ ಸ್ವಂತ ಜಮೀನಿನಲ್ಲಿ ಇರುವ 2 ಕೊಳವೆ ಬಾವಿ ಮೂಲಕ ನೀರು ಸರಬರಾಜು ಮಾಡಲು ಪಿಡಿಒ ಮತ್ತು ಗ್ರಾಪಂ ಅದ್ಯಕ್ಷರಿಗೆ ಮನವಿ ಮಾಡಿಕೊಂಡಿದ್ದರೂ ಕೂಡ ನಿರ್ಲಕ್ಷ್ಯ ಭಾವನೆಯಿಂದ ಪರ್ಯಾಯ ವ್ಯವಸ್ಥೆಗೆ ಮುಂದಾಗಲಿಲ್ಲ. ವಾರ್ಡ್ ಜನರು ಸಮಸ್ಯೆ ಕುರಿತು ಅಳಲನ್ನು ತೋಡಿಕೊಂಡಿದ್ದರಿಂದ ಸಮಸ್ಯೆ ನಿವಾರಣೆಗೆ ಬೇರೆ ದಾರಿಯೇ ಇಲ್ಲದಂತಾಗಿ ತಮ್ಮ 2 ಎತ್ತುಗಳನ್ನು ಪಂಚಾಯತಿ ಮುಂದೆ ಕಟ್ಟಿ ಪ್ರತಿಭಟನೆಗೆ ಸದಸ್ಯ ರುದ್ರಗೌಡ ಮುಂದಾಗಿದ್ದಾರೆ. ಸುಮಾರು ಮೂರು ಘಂಟೆಗಳ ಕಾಲ ಧರಣಿ ಕುಳಿತ ಗ್ರಾಪಂ ಸದಸ್ಯ, ಮಾಹಿತಿ ದೊರೆಯುತ್ತಿದ್ದಂತೆ ಅಭಿವೃದ್ಧಿ ಅಧಿಕಾರಿಗಳು ಮತ್ತು ಅದ್ಯಕ್ಷರು ಸಿಬ್ಬಂದಿ ವರ್ಗ ಗ್ರಾಪಂ ಕಡೆಗೆ ಧಾವಿಸಿದ್ದಾರೆ. ಗ್ರಾಪಂ ಸದಸ್ಯ ರುದ್ರಗೌಡರ ಜಮಿನಿನಲ್ಲಿ ಕೊಳವೆ ಬಾವಿಗೆ ಸಂಪರ್ಕ ಕಲ್ಪಿಸಿ ವಾರ್ಡ್ ಜನರಿಗೆ ಕುಡಿವ ನೀರು ಸರಬರಾಜು ಮಾಡಲು ಮುಂದಾಗಿದ್ದರಿಂದ ಪ್ರತಿಭಟನೆ ಹಿಂಪಡೆದಿದ್ದಾರೆ.